ನಟಿ ಕೃಷಿ ತಾಪಂಡ ಜೊತೆ ನನ್ನ ಪತಿಗೆ ಸಂಬಂಧವಿತ್ತು: ವೈಶಾಖ್ ಪತ್ನಿ ಕೊಟ್ಟ ದೂರಿನಲ್ಲಿ ಹೊರಬಂತು ಸ್ಫೋಟಕ ಸತ್ಯ
ಸ್ಯಾಂಡಲ್ವುಡ್ ನಟಿ, ಬಿಗ್ಬಾಸ್ ಖ್ಯಾತಿಯ ಕೃಷಿ ತಾಪಂಡ (Krishi Thapanda) ಅವರ ನಿವಾಸದಲ್ಲಿ ಉದ್ಯಮಿ ವೈಶಾಕ್ ಎಂಬುವವರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈ ಆಘಾತಕಾರಿ ಘಟನೆಗೆ ಸಂಬಂಧಿಸಿದಂತೆ ಮೃತ ವೈಶಾಕ್ ಪತ್ನಿ ಮೇಘನಾ ಅವರು ರಾಜರಾಜೇಶ್ವರಿ ನಗರ (RR Nagar) ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ತಮ್ಮ ದೂರಿನಲ್ಲಿ ನಟಿ ಕೃಷಿ ತಾಪಂಡ ಹಾಗೂ ಪತಿಯ ನಡುವಿನ ಸಂಬಂಧದ ಕುರಿತು ಮೇಘನಾ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದ್ದು, ಸಾವಿನ ನಿಖರ ಕಾರಣ ಪತ್ತೆಹಚ್ಚುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ದೂರಿನಲ್ಲಿ ಕೌಟುಂಬಿಕ ಕಲಹ ಉಲ್ಲೇಖ
ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಮೇಘನಾ ಅವರು ತಮ್ಮ 16 ವರ್ಷಗಳ ಸುದೀರ್ಘ ದಾಂಪತ್ಯ ಜೀವನದಲ್ಲುಂಟಾದ ಏರುಪೇರುಗಳನ್ನು ಸುದೀರ್ಘವಾಗಿ ವಿವರಿಸಿದ್ದಾರೆ. "ನನ್ನ ಹಾಗೂ ವೈಶಾಕ್ ಮದುವೆ 2010ರಲ್ಲಿ ನಡೆದಿತ್ತು. ಇಷ್ಟು ವರ್ಷಗಳ ಕಾಲ ನಾವಿಬ್ಬರೂ ಅತ್ಯಂತ ಸಂತೋಷದಿಂದಲೇ ಸಂಸಾರ ನಡೆಸುತ್ತಿದ್ದೆವು. ಆದರೆ, ಇತ್ತೀಚಿನ ದಿನಗಳಲ್ಲಿ ನನ್ನ ಪತಿ ಹಾಗೂ ನಟಿ ಕೃಷಿ ತಾಪಂಡ ಅವರ ನಡುವೆ ಆಪ್ತ ಸಂಬಂಧ ಇರುವುದು ಮಾಧ್ಯಮಗಳ ಮೂಲಕ ನಮಗೆ ತಿಳಿಯಿತು" ಎಂದು ಮೇಘನಾ ಹೇಳಿದ್ದಾರೆ.

ಬುದ್ಧಿವಾದ ಹೇಳಿದರೂ ಕೇಳದ ಪತಿ
ಈ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರು, ಅತ್ತೆ-ಮಾವ ಎಲ್ಲರೂ ಸೇರಿ ವೈಶಾಕ್ಗೆ ಬುದ್ಧಿವಾದ ಹೇಳಿದ್ದರು. ಆ ಸಂದರ್ಭದಲ್ಲಿ ಆಕೆಯಿಂದ ದೂರವಿರುವುದಾಗಿ ಒಪ್ಪಿಕೊಂಡಿದ್ದ ವೈಶಾಕ್, ನಂತರವೂ ಆ ಸಂಬಂಧವನ್ನು ಮುಂದುವರಿಸಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಕಳೆದ ಒಂದು ತಿಂಗಳಿನಿಂದ ವೈಶಾಕ್ ಮನೆಗೆ ಬರುವುದನ್ನು ನಿಲ್ಲಿಸಿದ್ದರು. ಕುಟುಂಬದವರೊಂದಿಗೆ ಕರೆಯಲ್ಲಿ ಮಾತನಾಡುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದ ಅವರು, ಕೇವಲ ಮೆಸೇಜ್ ಮೂಲಕಷ್ಟೇ ಸಂಪರ್ಕದಲ್ಲಿದ್ದರು ಎಂದಿದ್ದಾರೆ.
ಜೂನ್ 24ರ ರಾತ್ರಿ ನಡೆದಿದ್ದೇನು?
ಘಟನೆ ನಡೆದ ದಿನದ ಭೀಕರ ಕ್ಷಣಗಳನ್ನು ಮೇಘನಾ ನೆನಪಿಸಿಕೊಂಡಿದ್ದಾರೆ. ಜೂನ್ 24ರಂದು ಮಧ್ಯಾಹ್ನ ಮೆಸೇಜ್ ಮಾಡಿದ್ದ ವೈಶಾಕ್, ಮಗ ಶಾಲೆಯಿಂದ ಬಂದಿದ್ದಾನಾ ಎಂದು ವಿಚಾರಿಸಿದ್ದರು. ಆದರೆ ಅದೇ ದಿನ ರಾತ್ರಿ 10:30ರ ಸುಮಾರಿಗೆ ಆರ್ಆರ್ ನಗರ ಪೊಲೀಸರಿಂದ ಮೃತರ ತಂದೆಗೆ ಕರೆ ಬಂದಿದೆ. ನಿಮ್ಮ ಮಗ ವೈಶಾಕ್, ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ವಿಷಯ ತಿಳಿಯಿತು ಎಂದು ವಿವರಿಸಿದ್ದಾರೆ. ತಕ್ಷಣವೇ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದಾಗ, ಕೋಣೆಯ ಮಂಚದ ಮೇಲೆ ವೈಶಾಕ್ ಶವವಾಗಿ ಪತ್ತೆಯಾಗಿದ್ದ. ಫ್ಯಾನಿಗೆ ಕಟ್ ಆಗಿದ್ದ ಅರ್ಧ ಸೀರೆ ನೇತಾಡುತ್ತಿದ್ದು, ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿದ್ದವು ಎಂದು ಪತ್ನಿ ತಿಳಿಸಿದ್ದಾರೆ.
"ಯಾರ ಮೇಲೂ ಅನುಮಾನವಿಲ್ಲ, ಆದರೆ ತನಿಖೆಯಾಗಲಿ"
"ನನ್ನ ಪತಿ ವೈಶಾಕ್ ಯಾವ ಕಾರಣಕ್ಕಾಗಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿಲ್ಲ. ಈ ಸಾವಿನ ಹಿಂದೆ ನನಗೆ ಸದ್ಯಕ್ಕೆ ಯಾರ ಮೇಲೆಯೂ ವೈಯಕ್ತಿಕವಾಗಿ ಅನುಮಾನವಿಲ್ಲ. ಆದರೆ, ನನ್ನ ಪತಿಯ ಆತ್ಮಹತ್ಯೆಗೆ ನಿಖರವಾದ ಕಾರಣ ಏನೆಂಬುದನ್ನು ಪತ್ತೆಹಚ್ಚಲು ಮರಣೋತ್ತರ ಪರೀಕ್ಷೆ ನಡೆಸಿ, ಸಮಗ್ರ ತನಿಖೆ ಕೈಗೊಳ್ಳಬೇಕು" ಎಂದು ಮೇಘನಾ ದೂರಿನಲ್ಲಿ ವಿನಂತಿಸಿದ್ದಾರೆ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ನಟಿ ಕೃಷಿ ತಾಪಂಡ ಅವರ ಮನೆಯಲ್ಲೇ ಈ ಘಟನೆ ನಡೆದಿರುವುದರಿಂದ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ತೀವ್ರಗೊಳಿಸಿದ್ದಾರೆ.













Click it and Unblock the Notifications