ನಟಿ ಕೃಷಿ ತಾಪಂಡ ಮನೆಯಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ, ಅರವಿಂದ ವೆಂಕಟೇಶ ರೆಡ್ಡಿ ಕೇಸ್
ಬೆಂಗಳೂರು ನಗರದಲ್ಲಿ ನಟಿ ಕೃಷಿ ತಾಪಂಡ ಅವರ ಮನೆಯಲ್ಲಿ ಅವರ ಗೆಳೆಯ ವೈಶಾಖ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೆನ್ನೆ ರಾತ್ರಿ (ಜೂನ್ 24ರ ಬುಧವಾರ) ಕೃಷಿ ತಾಪಂಡ ಅವರ ಮನೆಯಲ್ಲಿ ವೈಶಾಖ್ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಅರವಿಂದ್ ರೆಡ್ಡಿ ಕೃಷಿ ತಾಪಂಡ ಅವರ ಕೇಸ್ನಲ್ಲಿ ಇವರ ಹೆಸರು ಕೇಳಿ ಬಂದಿತ್ತು.
ಇನ್ನು ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ಎಚ್ಎಎಲ್ ಪೊಲೀಸರು ನಟಿ ಕೃಷಿ ತಾಪಂಡ ಅವರ ಆತ್ಮೀಯ ಸ್ನೇಹಿತ ವೈಶಾಕ್ನನ್ನು ಬಂಧಿಸಿದ್ದರು. ಪೊಲೀಸರ ಪ್ರಕಾರ ಜನವರಿಯಲ್ಲಿ, ಆರೋಪಿಯು ಬ್ಲೂ ಡಾರ್ಟ್ ಕೊರಿಯರ್ ಮೂಲಕ ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳುಹಿಸಿದ್ದ. ಪತ್ರವು ಅನಾಮಧೇಯವಾಗಿದ್ದು, ಅದರಲ್ಲಿ ಯಾವುದೇ ವಿಳಾಸ ಅಥವಾ ಸಹಿ ಇರಲಿಲ್ಲ.

ಉದ್ಯಮಿ ಮತ್ತು ಒಬ್ಬ ಮಹಿಳೆ (ನಟಿಯನ್ನು ಪರೋಕ್ಷವಾಗಿ ಉಲ್ಲೇಖಿಸಿ) ನಡುವಿನ ವಿವಾದವನ್ನು ಬಗೆಹರಿಸಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಅಲ್ಲದೆ, ಬೇಡಿಕೆಯನ್ನು ಈಡೇರಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಸಹ ನೀಡಲಾಗಿತ್ತು. ಆರೋಪಿಯ ಗ್ಯಾರೇಜ್ಗೆ 6 ರಿಂದ 7 ಕೋಟಿ ರೂಪಾಯಿ ಹಣವನ್ನು ಕಳುಹಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅರವಿಂದ್ ರೆಡ್ಡಿ ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಯೇ ಇದೀಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪ್ರಾರಂಭಿಸಿದ್ದಾರೆ.
ಮುಂದುವರಿದು ಬೆದರಿಕೆ ಪತ್ರ ಕಳುಹಿಸಿದ ನಂತರ, ಆರೋಪಿ ವೈಶಾಖ್ ನಟಿಯ ಮನೆಯಲ್ಲಿಯೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಬಳಸಿದ್ದ ಮೊಬೈಲ್ ಫೋನ್ ಅನ್ನು ಅವರ ನಿವಾಸದಲ್ಲಿ ಮರೆಮಾಡಲಾಗಿದೆ ಎಂಬ ಅನುಮಾನಗಳಿವೆ. ಆದಾಗ್ಯೂ, ಹುಡುಕಾಟದ ಸಮಯದಲ್ಲಿ, ಮನೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿಲ್ಲ. ಫೋನ್ ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ನಟಿ ಕೃಷಿ ಥಾಪಂಡ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಕೇಸ್ ಏನು
ಇನ್ನು ಕೆಲವು ತಿಂಗಳುಗಳ ಹಿಂದೆ ನಟಿಯು ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಅವರ ವಿರುದ್ಧ ಲೈಂಗಿಕ ಕಿರುಕುಳ, ಮಾನಸಿಕ ಹಿಂಸೆಯ ನೀಡಿರುವ ಆರೋಪ ಮಾಡಿದ್ದರು. ಅರವಿಂದ್ ಅವರು ಜಾಮೀನನ ಮೇಲೆ ಹೊರ ಬಂದ ಮೇಲೆ ನಟಿಯ ಮೇಲೆಯೇ ಗಂಭೀರ ಆರೋಪ ಹೊರಿಸಿದ್ದರು. ನಟಿಗೆ ಲಕ್ಷಾಂತರ ರೂಪಾಯಿ ಮೌಲ್ಯದ ಗಿಫ್ಟ್ ಕೊಟ್ಟಿರುವುದಾಗಿಯೂ, ನಟಿ ಬೇರೆಯವರೊಂದಿಗೆ ಸಂಬಂಧ ಹೊಂದಿರುವುದರಿಂದ ವಿವಾದ ಪ್ರಾರಂಭವಾಗಿದೆ ಎಂದು ದೂರಿದ್ದರು. ಮುಂದುವರಿದು ನಟಿಯ ಸ್ನೇಹಿತ ವೈಶಾಖ್ ಕೊಲೆ ಬೆದರಿಕೆ ಪತ್ರ ಬರೆದಿದ್ದಾನೆ ಎಂಬ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.
ನಟಿ ಕೃಷಿ ತಾಪಂಡ ಯಾರು
ನಟಿ ಕೃಷಿ ತಾಪಂಡ ಅವರು ಬಿಗ್ಬಾಸ್ನಲ್ಲೂ ಸ್ಪರ್ಧಿಸಿದ್ದರು. ಕೃಷಿ ತಾಪಂಡ ಅವರು ನಟಿ ಮತ್ತು ರೂಪದರ್ಶಿ. ಅವರು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ಅಕಿರಾ ಸಿನಿಮಾದ ಮೂಲಕ ಸಿನಿಮಾ ರಂಗಕೆ ಪಾದಾರ್ಪಣೆ ಮಾಡಿದ್ದರು. ಅತ್ಯುತ್ತಮ ಚೊಚ್ಚಲ ನಟಿಗಾಗಿ 2016 ರ SIIMA ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. 2014ರ ಮಿಸ್ ಕರ್ನಾಟಕ ಕಿರೀಟವನ್ನು ಪಡೆದಿದ್ದರು.












Click it and Unblock the Notifications