Highway: ಕರಾವಳಿಯ ಸಂಪರ್ಕ ಜಾಲಕ್ಕೆ ಬಲ: 82.94 ಕಿಮೀ ರಸ್ತೆ ಯೋಜನೆಗೆ ಗ್ರೀನ್ ಸಿಗ್ನಲ್
ಮಂಗಳೂರು: ಕರಾವಳಿಯ ಪ್ರಮುಖ ಜಿಲ್ಲೆಯಾದ ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಿದೆ. ಕೋಟ್ಯಾಂತರ ರೂಪಾಯಿ ಅಂದಾಜು ವೆಚ್ಚದಲ್ಲಿ ಕರಾವಳಿ ಜಿಲ್ಲೆಯ ಒಟ್ಟಾರೆ ಸಂಪರ್ಕ ಜಾಲವನ್ನು ಸುಧಾರಣೆ ಮಾಡಲಾಗುತ್ತದೆ. ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿಯ (CRIF) ಅಡಿಯಲ್ಲಿ ಒಟ್ಟು 14 ಅತ್ಯಂತ ಪ್ರಮುಖ ರಸ್ತೆ ಯೋಜನೆಗಳಿಗೆ ಅಧಿಕೃತವಾಗಿ ಅನುಮೋದನೆ ನೀಡಲಾಗಿದೆ. ಈ ಭಾಗದ ಜನರ ಸುಗಮ ಸಂಚಾರದ ಕನಸು ನನಸಾಗುವ ಕಾಲ ಹತ್ತಿರವಾಗಿದೆ.
ಕರಾವಳಿಯಲ್ಲಿ ಪ್ರಮುಖ ರಸ್ತೆಗಳು, ಒಳ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಕ್ರಾಂತಿಕಾರಕವಾಗಿ ಸುಧಾರಿಸುವ ಸಲುವಾಗಿ ಸರ್ಕಾರ ಬರೋಬ್ಬರಿ 57 ಕೋಟಿ ರೂಪಾಯಿಗಳ ಭಾರಿ ಅನುದಾನವನ್ನು ಬಿಡುಗಡೆ ಮಾಡಿದೆ. ಇದರಡಿ 14 ಅತ್ಯಂತ ಪ್ರಮುಖ ರಸ್ತೆ ಯೋಜನೆಗಳು ಅನುಷ್ಠಾನಗೊಳ್ಳಲಿವೆ. ರಾಜ್ಯ ಹೆದ್ದಾರಿ, ಗ್ರಾಮೀಣ ರಸ್ತೆಗಳು ಸೇರಿದಂತೆ ಸುಮಾರು 82.94 ಕಿಲೋಮೀಟರ್ ಉದ್ದದ ರಸ್ತೆ ಸಂಪರ್ಕ ಸುಧಾರಿಸಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಗರಗಳು, ಪಟ್ಟಣಗಳು ಹಾಗೂ ಗ್ರಾಮೀಣ ಭಾಗಗಳ ನಡುವಿನ ಭೌಗೋಳಿಕ ಮತ್ತು ಆರ್ಥಿಕ ಅಂತರ ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಯೋಜನೆಯು ನಿತ್ಯ ಸಂಚರಿಸುವ ಲಕ್ಷಾಂತರ ವಾಹನ ಸವಾರರಿಗೆ ಮತ್ತು ಸ್ಥಳೀಯ ನಿವಾಸಿಗಳಿಗೆ ದೊಡ್ಡ ಮಟ್ಟದ ನಿರಾಳತೆಯನ್ನು ತಂದುಕೊಡಲಿದೆ ಎಂದು 'ಟ್ರೇಡ್ ಬೈನ್ಸ್' ವರದಿ ಮಾಡಿದೆ.

ಅಭಿವೃದ್ಧಿಯಾಗುವ ರಸ್ತೆಗಳು ಯಾವುವು?
ಕಟಪಡಿ-ಅಬ್ಬಕ್ಕ ಸರ್ಕಲ್ ರಸ್ತೆ, ಕಟಪಡಿ-ಅಬ್ಬಕ್ಕ ಸರ್ಕಲ್ ಸ್ಟ್ರೆಚ್, ಸಾಜಿಪನದು-ಬೊಳಿಯಾರ್ ರಸ್ತೆ, ಹೊಸಂಗಡಿ ಪುಚ್ಚಮೋಗುರು ಬ್ರಿಡ್ಜ್-ಬೆಳ್ತಂಗಡಿ-ಬಂಟ್ವಾಳ ಕ್ರಾಸ್, ಸೂರತ್ಕಲ್-ಕಬಕ ರಾಜ್ಯ ಹೆದ್ದಾರಿ, ಪಂಜುಲಕಟ್ಟೆ-ಮೋರ್ಜೆ-ಕುಡ್ಕೊಳಿ ರಸ್ತೆ, ಉಪ್ಪನಂಗಡಿ-ಪೆರಿಯಡ್ಕ-ಕೊಯ್ಲಾ ರಸ್ತೆ,ಕೊಂಟ್ಯಾರು-ಬೆಟ್ಟಂಪಾಡಿ ರಸ್ತೆ, ಕೆಪುಲು-ಪಡಿಲ್ ರಸ್ತೆ ಸೇರಿದಂತೆ ಒಟ್ಟು 14 ಪ್ರಮುಖ ರಸ್ತೆಗಳು ಮೇಲ್ದರ್ಜೆಗೆ ಏರಲಿದ್ದು, ಯೋಜನೆಯಿಂದ ಕರಾವಳಿ ಸಂಪರ್ಕ ಸುಧಾರಿಸಲಿದ್ದು, ಸ್ಥಳೀಯಮಟ್ಟದಲ್ಲಿ ಸಾಕಷ್ಟು ಅನುಕೂಲ ಒದಗಿಸಲಿದೆ.
ಬಂದರು, ವಾಣಿಜ್ಯ ಪ್ರದೇಶ: ಮೂಲ ಸೌಲಭ್ಯಗಳಿಗೆ ಉತ್ತೇಜನ
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳು ಹಾಗೂ ಪ್ರಮುಖ ಆರ್ಥಿಕ ವಲಯಗಳನ್ನು ಸಂಪರ್ಕಿಸುವ ಈ ಬೃಹತ್ ರಸ್ತೆ ನಿರ್ಮಾಣ ಕಾಮಗಾರಿಯಿಂದ ಮಂಗಳೂರು ಮತ್ತು ಅದರ ಉಪನಗರಗಳು ನೂತನ ಆಯಾಮ ಪಡೆಯಲಿವೆ. ಜಿಲ್ಲಾ ಕೇಂದ್ರವಾದ ಮಂಗಳೂರು ಐಟಿ ಹಬ್ ಮಾತ್ರಲ್ಲದೆ ಪ್ರಮುಖ ಬಂದರು, ದೇಶದ ಪ್ರಮುಖ ವಾಣಿಜ್ಯ ಕೇಂದ್ರಗಳು, ನೂರಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಹೊಂದಿದೆ. ರಸ್ತೆಗಳು ಅತ್ಯುತ್ತಮವಾಗಿ ಸುಧಾರಣೆಯಾಗುವುದರಿಂದ ದಕ್ಷಿಣ ಕನ್ನಡದ ಮೂಲೆ ಮೂಲೆಗಳಿಂದ ಬರುವ ಸಾರ್ವಜನಿಕರಿಗೆ ಯಾವುದೇ ಅಡೆತಡೆಯಿಲ್ಲದೆ ಕಡಿಮೆ ಅವಧಿಯಲ್ಲಿ ಇಲ್ಲಿಗೆ ತಲುಪಲು ಸಾಧ್ಯವಾಗುತ್ತದೆ.
ಇನ್ನೂ ಸಾಂಸ್ಕೃತಿಕ ನಗರಿ ಎಂದೇ ಬಿಂಬಿತವಾಗಿರುವ ಮೂಡುಬಿದಿರೆ ಪಟ್ಟಣವು ಈ ಹೊಸ ರಸ್ತೆ ಸುಧಾರಣೆಯಿಂದ ಹೊಸ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ. ಮಂಗಳೂರು ಮತ್ತು ಸುತ್ತಮುತ್ತಲಿನ ಬೆಳೆಯುತ್ತಿರುವ ಕೈಗಾರಿಕಾ ಕ್ಷೇತ್ರಗಳಿಗೆ ಮೂಡುಬಿದಿರೆಯನ್ನು ಉತ್ತಮ ಗುಣಮಟ್ಟದ ರಸ್ತೆಗಳ ಮೂಲಕ ಸಂಯೋಜಿಸಿದಂತಾಗುತ್ತದೆ. ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದಿನೇ ದಿನೇ ಭಾರೀ ಬೇಡಿಕೆ ಸೃಷ್ಟಿಯಾಗಲಿದೆ. ಹೊಸ ವಸತಿ ಬಡಾವಣೆಗಳು ಹಾಗೂ ಸಣ್ಣ ವಾಣಿಜ್ಯ ಸಂಸ್ಥೆಗಳ ಸ್ಥಾಪನೆಗೆ ಉತ್ತೇಜನ ಸಿಕ್ಕಂತಾಗುತ್ತದೆ.
ಐತಿಹಾಸಿಕ, ಪ್ರವಾಸಿ ತಾಣಗಳಿಗೆ ಸಂಪರ್ಕ ಬಲ
ಕರಾವಳಿ ಭಾಗದಲ್ಲಿ ಪ್ರಸಿದ್ಧ ಪ್ರವಾಸಿ ಮತ್ತು ಐತಿಹಾಸಿಕ ತಾಣಗಳಿವೆ. ಉಳ್ಳಾಲಕ್ಕೂ ಸಹ ಸಂಪರ್ಕ ಬಲ ಹೆಚ್ಚಲಿದೆ. ಪ್ರಶಾಂತ ಸಮುದ್ರ ತೀರ ಮತ್ತು ಧಾರ್ಮಿಕ ಕೇಂದ್ರಗಳಿರುವ ಉಳ್ಳಾಲವನ್ನು ಮುಖ್ಯ ನಗರವಾದ ಮಂಗಳೂರಿನೊಂದಿಗೆ ವೇಗವಾಗಿ ಬೆಸೆಯಲಿದೆ. ಮಂಗಳೂರು, ದಕ್ಷಿಣ ಕನ್ನಡ ವ್ಯಾಪ್ತಿಗೆ ನಿತ್ಯ ಬರುವ ಅಪಾರ ಪ್ರವಾಸಿಗರ ಹರಿವು ಹೆಚ್ಚಾಗಲಿದೆ. ಇದು ಸ್ಥಳೀಯ ಸಣ್ಣ ವ್ಯಾಪಾರಸ್ಥರಿಗೆ ಆರ್ಥಿಕ ಯಶಸ್ಸನ್ನು ತಂದುಕೊಡಲಿದೆ. 57 ಕೋಟಿ ರೂಪಾಯಿಯ ಸಣ್ಣ ಯೋಜನೆಯಾದರೂ ಸಹಿತ ಒಟ್ಟಾರೆ ಕರಾವಳಿಯ ಪ್ರವಾಸೋದ್ಯಮ ಉದ್ಯಮಕ್ಕೆ ಉತ್ತಜನ ನೀಡುತ್ತದೆ. ಮಳೆಗಾಲದಲ್ಲಿ ಉಂಟಾಗುತ್ತಿದ್ದ ರಸ್ತೆ ಸಮಸ್ಯೆಗೂ ಮುಕ್ತ ನೀಡಲಿದೆ.













Click it and Unblock the Notifications