Karnataka Rains: ಕರಾವಳಿ, ಒಳನಾಡು ಜಿಲ್ಲೆಗಳಿಗೆ ಭಾರೀ ಮಳೆ ಮುನ್ಸೂಚನೆ, ಯೆಲ್ಲೋ ಅಲರ್ಟ್
ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ಮುಂಗಾರು ಚುರುಕು ಪಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಕರಾವಳಿ ಹಾಗೂ ಮಲೆನಾಡು ಸೇರಿದಂತೆ ಒಂದೆಡೆರು ಒಳನಾಡು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ನಿರೀಕ್ಷೆ ಇದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕ ಕೆಲವು ಜಿಲ್ಲೆಗಳಲ್ಲಿ ಕೂಲ್ ವಾತಾವರಣ ನಿರ್ಮಾಣವಾಗಿದ್ದು, ನಿರೀಕ್ಷಿತ ಮಳೆ ಆಗುತ್ತಿಲ್ಲ.
ಮುಂದಿನ 5 ದಿನಗಳ ಕಾಲ ಕರಾವಳಿ ಕರ್ನಾಟಕದ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಕನಿಷ್ಠ 65 ಮಿಲಿ ಮೀಟರ್ನಿಂದ 115 ಮಿಲಿ ಮೀಟರ್ ಮಳೆ ಸಾಧ್ಯತೆ ಇದ್ದು, 'ಯೆಲ್ಲೋ ಅಲರ್ಟ್' ನೀಡಲಾಗಿದೆ. ಅದೇ ರೀತಿ ಮಲೆನಾಡಿನ ಜಿಲ್ಲೆಗಳಾದ ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೂನ್ 28 ರಿಂದ 2 ದಿನ ಧಾರಾಕಾರ ಮಳೆ ಆಗಲಿದ್ದು, ಈ ಜಿಲ್ಲೆಗಳಿಗೂ 'ಯೆಲ್ಲೊ ಅಲರ್ಟ್' ಕೊಡಲಾಗಿದೆ ಎಂದು ಹವಾಮಾನ ತಜ್ಞರು ಗುರುವಾರ ತಿಳಿಸಿದ್ದಾರೆ.

ಮುಂದುವರಿದ ದುರ್ಬಲ ಮುಂಗಾರು
ಇನ್ನೂ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ ಭಾಗದಲ್ಲಿ ಪ್ರತ್ಯೇಕವಾಗಿ ಒಂದರಿಂದ ಮೂರು ದಿನಗಳಲ್ಲಿ ಅಲ್ಲಲ್ಲಿ ಸಾಧರಣದಿಂದ ಭಾರೀ ಮಳೆ ನಿರೀಕ್ಷೆ ಇದೆ. ಹಾವೇರಿಯಲ್ಲಿ ಒಂದು ಭಾಗದಲ್ಲಿ ಜೋರು ಮಳೆ ಬಂದರೆ ಇನ್ನೊಂದು ಭಾಗಕ್ಕೆ ಮಳಯೇ ಇಲ್ಲ. ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಗದಗ ಭಾಗದಲ್ಲೂ ಇದೇ ಪರಿಸ್ಥಿತಿ ಇದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ರೈತರು ಮಳೆಗಾಗಿ ಕಾಯುತ್ತಿದ್ದಾರೆ.
ಈ ಭಾಗದಲ್ಲಿ ಮುಂಗಾರು ಮಳೆ ದುರ್ಬಲವಾಗಿದ್ದು, ದಿನೇ ದಿನೇ ವಾಡಿಕೆ ಮಳೆ ಬಾರದ ಮತ್ತಷ್ಟು ಕ್ಷೀಣಿಸುತ್ತಿದೆ. ಕಳೆದ ನಾಲ್ಕು ದಿನಗಳಲ್ಲಿ ಉತ್ತರ ಕರ್ನಾಟಕದಲ್ಲಿ ಈಗಲೋ ಆಗಲೋ ಮಳೆ ಆಗುವಂತಹ ವಾತಾವರಣ ನಿರ್ಮಾಣವಾಗುತ್ತಿದೆ ಬಿಟ್ಟರೆ, ಮುನ್ಸೂಚನೆಯಷ್ಟು ಮಳೆ ಆಗದಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಕೂಲ್ ವೆದರ್
ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಕೂಲ್ ಕೂಲ್ ವಾತಾವರಣ ಕಂಡು ಬರುತ್ತಿದೆ. ಬೇರೆ ಬೇರೆ ಭಾಗಗಳಲ್ಲಿ ಮಳೆ ಆಗುತ್ತಿದೆ. ಬೆಂಗಳೂರಿನಲ್ಲಿ ಕೆಲವೆಡೆ ಜಿಟಿ ಜಿಟಿ ಮಳೆ, ಸೋನೆ ಮಳೆ ಆಗುತ್ತಿದೆ. ಮಬ್ಬು ವಾತಾವರಣ, ತಂಪು ಗಾಳಿ ಬೀಸುವಿಕೆ ಕಂಡು ಬಂದಿದೆ. ನಗರವೆಲ್ಲ ತಂಪಾಗಿದ್ದು, ಮಧ್ಯಾಹ್ನವರೆಗೆ ಕೊಂಚ ಬಿಸಿಲು ದಾಖಲಾಗುತ್ತಿದೆ. ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಸದ್ಯಕ್ಕೆ ಬೆಂಗಳೂರು ಸುತ್ತಮುತ್ತ ಭಾರೀ ಮಳೆಯ ಮುನ್ಸೂಚನೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.













Click it and Unblock the Notifications