Tungabhadra Dam: ಇಂದು ತುಂಗಭದ್ರಾ ಡ್ಯಾಂನ ಹೊಸ 33 ಕ್ರಸ್ಟ್ ಗೇಟ್ಗಳ ಲೋಕಾರ್ಪಣೆ: 3 ಸಿಎಂಗಳು ಭಾಗಿ
ಬೆಂಗಳೂರು: ಕರ್ನಾಟಕದ ನಾಲ್ಕು ಜಿಲ್ಲೆಗಳ ಜೀವನಾಡಿ ಮತ್ತು ನೆರೆಯ ತೆಲಂಗಾಣ, ಆಂಧ್ರ ಪ್ರದೇಶಕ್ಕೆ ನೀರೊದಗಿಸುವ ನೀರಾವರಿಗೆ ಆಧಾರವಾಗಿರುವ ತುಂಗಭದ್ರಾ ಜಲಾಶಯಕ್ಕೆ (Tungabhadra Dam) ಹೊಸದಾಗಿ 33 ಕ್ರಸ್ಟ್ ಗೇಟ್ ಲೋಕಾರ್ಪಣೆ ಕಾರ್ಯಕ್ರಮ ಇಂದು ಗುರುವಾರ (ಜೂನ್ 25) ಕೊಪ್ಪಳದಲ್ಲಿ ಜರುಗಲಿದೆ. ಸಿಎಂ ಡಿಕೆ ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಲಿದೆ.
ತಾಲೂಕಿನ ಮುನಿರಾಬಾದ್ ಗ್ರಾಮದ ಪ್ರೌಢಶಾಲೆ ಆವರಣದಲ್ಲಿ ಬೃಹತ್ ವೇದಿಕೆ ಹಾಕಲಾಗಿದೆ. ಮೂರು ರಾಜ್ಯಗಳ ಮುಖ್ಯಮಂತ್ರಿಗಳು ವೇದಿಕೆ ಅಲಂಕರಿಸಲಿದ್ದಾರೆ. ಗುರುವಾರ ಬೆಳಗ್ಗೆ 11 ಗಂಟೆಗೆ ಮೂವರು ಮುಖ್ಯಮಂತ್ರಿಗಳು ತುಂಗಭದ್ರಾ ಅಣೆಕಟ್ಟಿನ ಹೊಸ ಕ್ರಸ್ಟ್ ಗೇಟ್ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ರಾಜ್ಯ ಸಚಿವರು, ಶಾಸಕರು, ಸ್ಥಳೀಯ ಮುಖಂಡರು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಶಾಲೆ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.

ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಮೂವರು ಸಿಎಂಗಳಿಗೆ ಕೊಪ್ಪಳದಲ್ಲಿ ಫ್ಲೆಕ್ಸ್, ಬ್ಯಾನರ್ಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಲಾಗುತ್ತದೆ. ಕಾಂಗ್ರೆಸ್ ಪಕ್ಷದ ಭಾವುಟಗಳು ಮುನಿರಾಬಾದ್ ನಲ್ಲಿ ರಾರಾಜಿಸುತ್ತಿವೆ. ವೇದಿಕೆ ಕಾರ್ಯಕ್ರಮ, ಭದ್ರತೆ ಸೇರಿ ಅಗತ್ಯ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಕಲ್ಯಾಣ ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯ ಮುಂದಿನ ದಶಕಗಳ ಕಾಲ ಭದ್ರವಾಗಿರಲಿದೆ. ಎಂದಿನಂತೆ ಭರಪೂರ ನೀರು ಹಿಡಿದುಟ್ಟುಕೊಂಡು ರೈತರಿಗೆ ಆಸರೆಯಾಗಲಿದೆ. ಈ ಕ್ಷಣಕ್ಕೆ ವಿವಿಧ ಜಿಲ್ಲೆಗಳ ಜನರು ಕಾತರರಿಂದ ಕಾಯುತ್ತಿದ್ದಾರೆ.
ಕೊಚ್ಚಿ ಹೋಗಿತ್ತು 19ನೇ ಕ್ರಸ್ಟ್ ಗೇಟ್
ಬೃಹತ್ ಡ್ಯಾಂ 132 ಟಿಎಂಸಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. 2024ರ ಆಗಸ್ಟ್ 10ರಂದು ನೀರಿನ ಒತ್ತಡ ತಾಳಲಾರದೇ 19ನೇ ಕ್ರಸ್ಟ್ ಗೇಟ್ ಕೊಚ್ಚಿಹೋಗಿತ್ತು. ಅಪಾರ ನೀರು ರಾಜ್ಯದ ಜನರ ಬಳಕೆಗೆ ಲಭ್ಯವಾಗದೇ ಹರಿದು ಹೋಗಿತ್ತು. ಅದಾದ ಬಳಿಕ ಆ ಗೇಟ್ ರಿಪೇರಿಗೆ ಮುಂದಾಗಿದ್ದ ಸರ್ಕಾರಕ್ಕೆ ಇತರ ಎಲ್ಲ ಗೇಟ್ಗಳು ಹಳೇಯದಾಗಿದ್ದು, ದುರಸ್ತಿ ಅಗತ್ಯವಾಗಿದ್ದನ್ನು ಅರಿತು ಟೆಂಡರ್ ಕರೆಯಿತು. ಅಲ್ಲಿಂದ ಇಲ್ಲಿಗೆ ಒಟ್ಟು 51ಕೋಟಿ ರೂಪಾಯಿ ಖರ್ಚಿನಲ್ಲಿ ಎಲ್ಲ ಕ್ರಸ್ಟ್ ಗೇಟ್ಗಳನ್ನು ಹೊಸದಾಗಿ ಅಳವಡಿಸಲಾಯಿತು.
2025 ಜೂನ್ ನಲ್ಲಿ ಸರ್ಕಾರ ಎಲ್ಲ ಕ್ರಸ್ಟ್ ಗೇಟ್ಗಳ ಅಳವಡಿಕೆಗೆ ಟೆಂಡರ್ ಆಹ್ವಾನಿಸಿತ್ತು. ಅಂದು ಅಹಮದಾಬಾದ್ನ ಹಾರ್ಡ್ ವೇರ್ ಟೂಲ್ಸ್ ಮತ್ತು ಮೆಷೆನ್ ಪ್ರಾಜೆಕ್ಟ್ ಕಂಪನಿಯು ಹತ್ತು ಗೇಟ್ಗಳ ಅಳವಡಿಕೆಗೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಗದಗ ಜಿಲ್ಲೆಯ ಅಡವಿಸೋಮಾಪುರ ಮತ್ತು ತುಂಗಭದ್ರಾ ಮಂಡಳಿ ಯಾರ್ಡ್ನಲ್ಲಿ ಹೊಸ್ ಗೇಟ್ಗಳನ್ನು ತಯಾರಿಕೆ ಸಹ ಆರಂಭವಾಯಿತು. ಸರ್ಕಾರದ ನಿರಂತರ ಮೇಲ್ವಿಚಾರಣೆ ಮೇರೆಗೆ ಇತ್ತೀಚೆಗೆ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿತ್ತು.
ಅಣೆಕಟ್ಟುಗಳ ಸ್ಥಿತಿ ಪರಿಶೀಲಿಸದೇ, ಜಲಸಂಪನ್ಮೂಲ ಸಚಿವರ ನಿರ್ಲಕ್ಷ್ಯಕ್ಕೆ ರೈತರು ನೀರಿಲ್ಲದೇ ಪರದಾಡಬೇಕಿದೆ ಎಂದೆಲ್ಲ ವಿಪಕ್ಷ ನಾಯಕರು ಸರ್ಕಾರದ ಮೇಲೆ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಅನೇಕ ಆರೋಪಗಳ ನಡುವೆ ಗ್ರೇಟ್ ಅಳವಡಿಕೆ ಕೊನೆಗೂ ಮುಗಿದಿದ್ದು, ಅಂದುಕೊಂಡಂತೆ ಲೋಕಾರ್ಪಣೆ ಕಾರ್ಯ ನಡೆಯುತ್ತಿರುವುದಕ್ಕೆ ಕೊಪ್ಪಳ, ವಿಜಯನಗರ, ಯಾದಗಿರಿ ಮತ್ತು ರಾಯಚೂರು ಭಾಗದ ಜನರಲ್ಲಿ ಸಂತಸ ಮನೆ ಮಾಡಿದೆ. ಈ ಎಲ್ಲ ಜಿಲ್ಲೆಗಳ ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ಈ ತುಂಗಭದ್ರಾ ನೀರೇ ಆಧಾರವಾಗಿದೆ.
ಪ್ರಮುಖಾಂಶಗಳು
* ಒಂದು ಗೇಟ್ ಎತ್ತರ: 21 ಅಡಿ
* ಗೇಟ್ ಅಗಲ: 60 ಅಡಿ
* ಬಾಳಿಕೆ ಅವಧಿ: 50 ವರ್ಷ
* ಎಲ್ಲ ಗೇಟ್ ಅಳವಡಿಕೆ ಖರ್ಚು: ಒಟ್ಟು ಸುಮಾರು ಒಟ್ಟು 51ಕೋಟಿ ರೂ.
* ಕೊಚ್ಚಿ ಹೋಗಿದ್ದ 19ನೇ ಗೇಟ್
* ಪರಿಶೀಲನೆ ಬಳಿಕ ಎಲ್ಲ ಹೊಸ ಗೇಟ್ಗಳ ಅಳವಡಿಕೆಗೆ ನಿರ್ಧಾರ
ತುಂಗಭದ್ರಾ ಡ್ಯಾಂ ನೀರಿಲ್ಲದೇ ಇನ್ನೊಂದು ವರ್ಷ ಖಾಲಿ?
ಗೇಟ್ ಕೊಚ್ಚಿ ಹೋದ ಬಳಿಕ ಮತ್ತು ಎಲ್ಲ ಗೇಟ್ ಅಳವಡಿಕೆ ಹಿನ್ನೆಲೆ ಸರ್ಕಾರ ನೀರನ್ನು ಹೊರಬಿಟ್ಟಿತ್ತು. ಅಲ್ಲಿಂದ ಸುಮಾರು ವರ್ಷದ ಬಳಿಕ ಅಣೆಕಟ್ಟಿನಲ್ಲಿ ನೀರು ಇರಲಿಲ್ಲ. ಈ ವರ್ಷ ಗೇಟ್ ಅಳಡಿಕೆ ಪೂರ್ಣಗೊಂಡರೂ ಸಹಿತ ಮುಂಗಾರು ಕೊರತೆ ಹಿನ್ನಲೆ ಈ ವರ್ಷಪೂರ್ತಿ ತುಂಗಭದ್ರಾ ಡ್ಯಾಂನಲ್ಲಿ ನಿರೀಕ್ಷಿತ ನೀರು ಸಂಗ್ರಹ ಅನುಮಾನ. ಈ ವರ್ಷ ಬರಗಾಲದ ಲಕ್ಷಣಗಳು ಕಾಣುತ್ತಿವೆ. ಹೀಗಿದ್ದಾಗ ತುಂಗಭದ್ರಾ ಡ್ಯಾಂ ತುಂಬಿ ಹರಿಯುವುದನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಇನ್ನೊಂದು ವರ್ಷ ಕಾಯಬೇಕಿದೆ. ಮುಂದಿನ ವರ್ಷ ಉತ್ತಮ ಮಳೆ ಬಂದಲ್ಲಿ ಡ್ಯಾಂಗೆ ಜೀವಕಳೆ ಮರಳಲಿದೆ.













Click it and Unblock the Notifications