National Highway: ರಾಷ್ಟ್ರೀಯ ಹೆದ್ದಾರಿ, ಎಕ್ಸ್ಪ್ರೆಸ್ ವೇ ವಾಹನ ಸವಾರರಿಗೆ NHAIನಿಂದ ನೆಮ್ಮದಿ ಸುದ್ದಿ
National Highway, Expressway: ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವಾಗಲೇ ವಾಹನ ಸವಾರರು ಒಂದಲ್ಲ ಒಂದು ಸಮಸ್ಯೆಗೆ ಸಿಲುಕಿ ಪರದಾಡಿದ ಘಟನೆಗಳು ನಡೆದಿರುವ ಉದಾಹರಣೆಗಳಿವೆ. ಇದೀಗ ಇದಕ್ಕೆಲ್ಲಾ ತೆರೆ ಎಳೆಯಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ಎಚ್ಎಐ) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ನಿರಂತರವಾಗಿ ಎದುರಾಗುತ್ತಿದ್ದ ವಾಹನ ರಿಪೇರಿ ಮತ್ತು ಬ್ರೇಕ್ಡೌನ್ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಹೆದ್ದಾರಿ ಬಳಕೆದಾರರ ಪ್ರಯಾಣವನ್ನು ಮತ್ತಷ್ಟು ಸುಗಮ ಹಾಗೂ ಸುರಕ್ಷಿತಗೊಳಿಸುವ ಉದ್ದೇಶದಿಂದ ದೇಶಾದ್ಯಂತ ರಸ್ತೆಬದಿಯುದ್ದಕ್ಕೂ ಪಂಕ್ಚರ್ ರಿಪೇರಿ ಅಂಗಡಿ ಹಾಗೂ ವಾಹನ ಸರ್ವಿಸ್ ಸೌಲಭ್ಯಗಳನ್ನು ಕಡ್ಡಾಯವಾಗಿ ಅಭಿವೃದ್ಧಿಪಡಿಸಲು ಎನ್ಎಚ್ಎಐ ನಿರ್ಧರಿಸಿದೆ.

ಎನ್ಎಚ್ಎನಿಂದ ಮಹತ್ವದ ನಿರ್ಧಾರ
ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಚಲಿಸುವಾಗ ವಾಹನಗಳು ಕೆಟ್ಟು ನಿಂತರೆ ಅಥವಾ ಟೈರ್ ಪಂಕ್ಚರ್ ಆದರೆ ತಕ್ಷಣಕ್ಕೆ ಯಾವುದೇ ತಾಂತ್ರಿಕ ನೆರವು ಸಿಗದೆ ಸವಾರರು ಕುಟುಂಬ ಸಮೇತರಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ಈ ಕುರಿತು ಸಾರ್ವಜನಿಕರಿಂದ ಕೇಳಿಬಂದಿದ್ದ ನಿರಂತರ ದೂರುಗಳಿಗೆ ಸ್ಪಂದಿಸಿರುವ ಎನ್ಎಚ್ಎಐ ಈಗ ಈ ಮಹತ್ವದ ನಿರ್ಧಾರಕ್ಕೆ ಕೈಹಾಕಿದೆ.
ತಕ್ಷಣ ಸೇವೆ ದೊರೆಯುವಂತೆ ಕ್ರಮ
ಎನ್ಎಚ್ಎನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ನ್ಯಾಷನಲ್ ಹೈವೇಸ್ ಲಾಜಿಸ್ಟಿಕ್ಸ್ ಮ್ಯಾನೇಜ್ಮೆಂಟ್ ಲಿಮಿಟೆಡ್, ಹೆದ್ದಾರಿಗಳಲ್ಲಿರುವ 'ವೇಸೈಡ್ ಅಮೆನಿಟೀಸ್' ಸಂಕೀರ್ಣಗಳಲ್ಲಿ ತಕ್ಷಣವೇ ವಾಹನ ರಿಪೇರಿ ಮತ್ತು ಪಂಕ್ಚರ್ ಅಂಗಡಿಗಳನ್ನು ಸಕ್ರಿಯಗೊಳಿಸುವಂತೆ ತನ್ನ ಪ್ರಾದೇಶಿಕ ಕಚೇರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಸಾಮಾನ್ಯವಾಗಿ ಹೆದ್ದಾರಿಗಳಲ್ಲಿ ಪ್ರತಿ 40 ರಿಂದ 60 ಕಿಲೋ ಮೀಟರ್ ಅಂತರದಲ್ಲಿ ಪ್ರಯಾಣಿಕರ ವಿಶ್ರಾಂತಿ ಮತ್ತು ಇತರೆ ಸೇವೆಗಳಿಗಾಗಿ ಈ ವೇಸೈಡ್ ಅಮೆನಿಟೀಸ್ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ಸುಮಾರು 4 ಹೆಕ್ಟೇರ್ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ಈ ಹಬ್ಗಳಲ್ಲಿ ಈಗಾಗಲೇ ಇಂಧನ ಕೇಂದ್ರಗಳು, ರೆಸ್ಟೋರೆಂಟ್ಗಳು, ಶೌಚಾಲಯಗಳು, ಇವಿ ಚಾರ್ಜಿಂಗ್ ಪಾಯಿಂಟ್ಗಳು ಮತ್ತು ಟ್ರಕ್ ಚಾಲಕರಿಗೆ ಪ್ರತ್ಯೇಕ ವಿಶ್ರಾಂತಿ ಸ್ಥಳಗಳಂತಹ ಅತ್ಯಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುದೆ. ಈಗ ಇವುಗಳ ಜೊತೆಗೆ ವಾಹನ ರಿಪೇರಿ ಸೇವೆಗಳೂ ಕಡ್ಡಾಯವಾಗಿ ಸೇರಿಕೊಳ್ಳುತ್ತಿರುವುದರಿಂದ ಸವಾರರಿಗೆ ಭಾರಿ ಅನುಕೂಲವಾಗಲಿದೆ.
ವಾಹನ ಸವಾರರಿಗೆ ನೆಮ್ಮದಿ ಸುದ್ದಿ
ವಿಶೇಷವಾಗಿ ಪ್ರವೇಶ ನಿಯಂತ್ರಿತ ಎಕ್ಸ್ಪ್ರೆಸ್ವೇಗಳಲ್ಲಿ ಒಮ್ಮೆ ವಾಹನ ಬ್ರೇಕ್ಡೌನ್ ಆದಲ್ಲಿ ಸವಾರರು ತುರ್ತು ಸಹಾಯ ಸಿಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಹತ್ತಿರದಲ್ಲಿ ಯಾವುದೇ ರಿಪೇರಿ ಅಂಗಡಿಗಳಿಲ್ಲದೆ ಸವಾರರು ಯಾರು ಇಲ್ಲದಂಹ ಪ್ರದೇಶಗಳಲ್ಲಿ ಸಿಲುಕಿಕೊಳ್ಳುವಂತಾಗಿತ್ತು.
ಈ ಮೂಲಸೌಕರ್ಯ ಕೊರತೆಯನ್ನು ನೀಗಿಸಲು ಈ ಹೊಸ ಉಪಕ್ರಮ ಸಹಕಾರಿ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ವಾಹನಗಳು ರಸ್ತೆಯಲ್ಲೇ ಕೆಟ್ಟು ನಿಲ್ಲುವ ಸಮಯವನ್ನು ಕಡಿಮೆ ಮಾಡುವುದಲ್ಲದೆ, ಅಪಘಾತಗಳನ್ನು ತಪ್ಪಿಸಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲಿದೆ.
ಪ್ರಸ್ತುತ ಎನ್ಎಚ್ಎಲ್ಎಂಎಲ್ ಸಂಸ್ಥೆಯು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ದೇಶಾದ್ಯಂತ ಇಂತಹ ಆಧುನಿಕ ರಸ್ತೆಬದಿಯ ಸೌಲಭ್ಯ ಕೇಂದ್ರಗಳ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ಪ್ರಸ್ತುತ ಚಾಲ್ತಿಯಲ್ಲಿರುವ ಒಪ್ಪಂದಗಳ ಅನ್ವಯ ಈ ಸೌಲಭ್ಯಗಳನ್ನು ನಿರ್ವಹಿಸುವ ಆಪರೇಟರ್ಗಳಿಗೆ ರಿಪೇರಿ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ಅನುಮತಿ ಇತ್ತು. ಆದರೆ ಈಗ ಎಚ್ಎನ್ಎಐ ಇದರ ಅನುಷ್ಠಾನ ಪ್ರಕ್ರಿಯೆಯನ್ನು ಮತ್ತಷ್ಟು ವೇಗಗೊಳಿಸುವಂತೆ ಪಾಲುದಾರರಿಗೆ ತುರ್ತು ಮನವಿ ಮಾಡಿದೆ. ಹೆದ್ದಾರಿಗಳಲ್ಲಿ ಪ್ರಯಾಣ ಮತ್ತು ರಿಪೇರಿ ಸೇವೆಗಳನ್ನು ಒಂದೇ ಸೂರಿನಡಿ ತರುವ ಮೂಲಕ ಭಾರತದಾದ್ಯಂತ ದೂರದ ಪ್ರಯಾಣ ಬೆಳೆಸುವ ಸವಾರರಿಗೆ ಸುರಕ್ಷಿತ, ನಿರಂತರ ಮತ್ತು ಬಳಕೆದಾರಸ್ನೇಹಿ ಹೆದ್ದಾರಿ ವ್ಯವಸ್ಥೆಯನ್ನು ಸೃಷ್ಟಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈ ವ್ಯವಸ್ಥೆ ಆದಷ್ಟು ಬೇಗ ಜಾರಿಯಾದ್ರೆ ವಾಹಲ ಸವಾರರಿಗೆ ದೊಟ್ಟ ಮಟ್ಟದ ನೆಮ್ಮದಿ ಸಿಕ್ಕಂತಾಗಲಿದೆ.












Click it and Unblock the Notifications