ರಾಜ್ಯ ಸರ್ಕಾರದಿಂದ PRC ಮೂಲಕ ಮತಬ್ಯಾಂಕ್ ರಾಜಕೀಯ: ತಡೆಯುವಂತೆ ರಾಜ್ಯಪಾಲರಿಗೆ ಬಿಜೆಪಿ ದೂರು
ಬೆಂಗಳೂರು: ರಾಜ್ಯ ಸರ್ಕಾರದ ಕಂದಾಯ ಇಲಾಖೆ ವತಿಯಿಂದ ಇತ್ತೀಚೆಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ಪಡೆಯಲು ಅರ್ಹರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಇದರ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್ಗೆ ಮತ ಹಾಕುವವರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ನೀಡಿ ಅವರನ್ನು ಇಲ್ಲೇ ಶಾಶ್ವತವಾಗಿ ನೆಲೆಸುವಂತೆ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಸರ್ಕಾರ ನಡೆಯನ್ನು ಆಕ್ಷೇಪಿಸಿದ್ದಾರೆ.
ಬುಧವಾರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿ ಬಳಿಕ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ಕೊಡದಂತೆ ತಡೆಯಲು ಕೋರಿ ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಮಾಡಲಾಗಿಯಿತು. 10 ವರ್ಷ ರಾಜ್ಯದಲ್ಲಿ ಇರುವವರಿಗೆ ಪಿಆರ್ಸಿ ನೀಡುವ ಮೂಲಕ ಅವರು ಈ ರಾಜ್ಯದ ಶಾಶ್ವತ ಪ್ರಜೆ ಎಂಬಂತೆ ಬಿಂಬಿಸಿ ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಮನೆ ಮತ್ತಿತರ ಸೌಕರ್ಯಗಳನ್ನು ನೀಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪಿಎಫ್ಐ, ಕೆಎಫ್ಡಿ ಉಪಟಳ ಜಾಸ್ತಿ! ಕೇಂದ್ರಕ್ಕಷ್ಟೇ ಅಧಿಕಾರ
ಪಿಎಫ್ಐ, ಕೆಎಫ್ಡಿ ಉಪಟಳ ರಾಜ್ಯದಲ್ಲಿ ಜಾಸ್ತಿಯಾಗಿದೆ. ಅವರ ಮೇಲಿದ್ದ ಕೇಸುಗಳನ್ನು ಕಾಂಗ್ರೆಸ್ಸಿನವರು ವಾಪಸ್ ಪಡೆಯುತ್ತಿದ್ದಾರೆ. ಈಗ ಬಾಂಗ್ಲಾದೇಶದವರು ಕರ್ನಾಟಕದಲ್ಲಿ 25ರಿಂದ 30 ಲಕ್ಷ ಜನರು ಇರುವ ಮಾಹಿತಿ ಇದೆ. ಈಗ ಎಸ್ಐಆರ್ ನಡೆಯುತ್ತಿದೆ. ಅದಕ್ಕೆ ವಿರುದ್ಧವಾಗಿ ಇವರು ಪಿಆರ್ಸಿ ಕೊಡುವುದು ಸರಿಯಲ್ಲ; ಕೇಂದ್ರ ಸರ್ಕಾರಕ್ಕೆ ಮಾತ್ರ ಇಂಥ ಪ್ರಮಾಣಪತ್ರ ಕೊಡಲು ಅಧಿಕಾರ ಇದೆ ಎಂಬುದನ್ನು ಅವರು ರಾಜ್ಯಪಾಲರ ಗಮನಕ್ಕೆ ತಂದರು.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆಗೆ ಮತದಾರರನ್ನು ಉಳಿಸಿಕೊಳ್ಳಲು ಅಕ್ರಮವಾಗಿ, ದೇಶದ್ರೋಹಿ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುವುದಾಗಿ ರಾಜ್ಯಪಾಲರು ತಿಳಿಸಿದರು.
RCB ಕಾಲ್ತುಳಿತ: ಮುಚ್ಚಿ ಹಾಕಲು ಸರ್ಕಾರ ಯತ್ನ
ಕಳೆದ ವರ್ಷ ಆರ್ಸಿಬಿ ವಿಕ್ಟರಿ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ 11 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ದುರ್ಘಟನೆಗೆ ರಾಜ್ಯ ಸರ್ಕಾರವೇ ನೇರ ಕಾರಣ ಎಂದು ವಿಧಾನಸಭೆಯಲ್ಲಿ ನಾವು ತಿಳಿಸಿದ್ದೆವು. ಈಗ ವರದಿಯಲ್ಲೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅವತ್ತು ಕಮಿಷನರ್, ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಇದೀಗ ದೋಷ ಮುಕ್ತರನ್ನಾಗಿ ಮಾಡಿದ್ದಾರೆ.
ಹೆಂಡತಿ, ಮಕ್ಕಳ, ಮೊಮ್ಮಕ್ಕಳ ಜೊತೆ ವೇದಿಕೆಯಲ್ಲಿ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಅವರ ಮೇಲೆ ಕೇಸೇ ಮಾಡಿಲ್ಲ ಎಂದು ಆಕ್ಷೇಪಿಸಿದರು. ಇದೀಗ ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು? ಈ ಯುವಜನರ ಸಾವಿಗೆ ನ್ಯಾಯ ಎಲ್ಲಿದೆ? ಎಂದು ಕೇಳಿದರು. ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಮಾಡಿದ್ದಾರೆ. ಇದು ಅಕ್ಷಮ್ಯ ಎಂದು ಆರೋಪಿಸಿದರು. ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರ ದಿವಾಳಿ?
ಎಸ್ಡಿಆರ್ಎಫ್ ಹಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು, ಎನ್ಡಿಆರ್ಎಫ್ ಹಣ ಬರಲು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಬರಪೀಡಿತ ಎಂದು ಘೋಷಿಸಿ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು. ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಬಗ್ಗೆ ವರದಿ ಕೊಟ್ಟಿಲ್ಲ. ಪತ್ರ ಬರೆದಿದ್ದೇಕೆ? ನೀವು ಪಾಪರ್ ಆಗಿದ್ದೀರಾ? ಖಜಾನೆ ಖಾಲಿ ಆಗಿದೆಯೇ? ಎಂದು ಮರು ಪ್ರಶ್ನಿಸಿದರು.
ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಲು ಪತ್ರ ಬರೆಯುತ್ತೀರಾ? ಇದು ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು. ರಾಜ್ಯ ಸರ್ಕಾರವು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಬರ ಎಂದು ಪ್ರಕಟಿಸಿ, ಕುಡಿಯುವ ನೀರು, ಜಾನುವಾರುಗಳಿಗೆ ಸಂಬಂಧಿಸಿ ಹಣ ಕೊಡಬೇಕೆಂದು ಆಗ್ರಹಿಸಿದರು.
ಯಾವೆಲ್ಲ ಸಚಿವರು ಮನೆ ನವೀಕರಣಕ್ಕೆ ಎಷ್ಟೆಷ್ಟು ಹಣ ಖರ್ಚು ಮಾಡಿದ್ದಾರೆಂದು ಕೇಳಿ ಸರ್ಕಾರಕ್ಕೆ ಪತ್ರ ಬರೆದು ಒಂದು ತಿಂಗಳಾಗಿದೆ. ಗ್ಯಾರಂಟಿ ಸಮಿತಿ ರಾಜ್ಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕೊಟ್ಟ ಭತ್ಯೆ ಕುರಿತಂತೆ ಕೇಳಿದ್ದು, ಉತ್ತರ ಸಿಕ್ಕಿಲ್ಲ ಎಂದು ದೂರಿದರು. ಈ ಸರ್ಕಾರ ಯಾವ ಪತ್ರಕ್ಕೂ ಉತ್ತರ ಕೊಡುತ್ತಿಲ್ಲ ಎಂದು ಟೀಕಿಸಿದರು. ಲೂಟಿ ಮಾಡುತ್ತಾರೆ. ವಿವರ ಕೇಳಿದರೆ ಉತ್ತರವೇ ನೀಡುವುದಿಲ್ಲ ಎಂದು ಅವರು ದೂರಿದರು.














Click it and Unblock the Notifications