ಯಡಿಯೂರಪ್ಪ, ಶಿವರಾಜ್ ಸಿಂಗ್ ಚವ್ಹಾಣ್ ಕಾಲಿಗೆ ಬಿದ್ದ ಜನಾರ್ದನ ರೆಡ್ಡಿ
ಚಿತ್ರದುರ್ಗ, ಏಪ್ರಿಲ್ 21: ಅತ್ತ ಬಿಜೆಪಿ, ಇತ್ತ ಬಳ್ಳಾರಿ ಎರಡಕ್ಕೂ ಸಲ್ಲದೆ ಮಧ್ಯದಲ್ಲಿ ನಿಂತಿರುವ ಜನಾರ್ದನ ರೆಡ್ಡಿ ಬಹಳ ಕಾಲದ ನಂತರ ಬಹಿರಂಗವಾಗಿ ಬಿಜೆಪಿ ವರಿಷ್ಠರ ಜೊತೆ ಕಣಿಸಿಕೊಂಡರು.
ಇಂದು ಜನಾರ್ದನ ರೆಡ್ಡಿ ಅವರ ಆತ್ಮೀಯ ಗೆಳೆಯ ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಈ ಸಮಯ ಜನಾರ್ದನ ರೆಡ್ಡಿಯೂ ರಾಮುಲು ಅವರ ಜೊತೆಯಲ್ಲಿದ್ದರು. ರಾಮುಲು ನಾಮಪತ್ರ ಸಲ್ಲಿಕೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸಹ ಭಾಗವಹಿಸಿದ್ದರು.
ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಜನಾರ್ದನ ರೆಡ್ಡಿ
ಈ ಸಮಯ ಯಡಿಯೂರಪ್ಪ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮುಖಾಮುಖಿಯಾದ ಜನಾರ್ದನ ರೆಡ್ಡಿ ಅವರು ಮೊದಲಿಗೆ ಯಡಿಯೂರಪ್ಪ ಅವರ ಕಾಲಿಗೆ ಎರಗಿ ಆಶೀರ್ವಾದ ಪಡೆದರು. ಜನಾರ್ದನ ರೆಡ್ಡಿ ಅವರ ಭೇಟಿಯಿಂದ ಸಂತೋಶಗೊಂಡಂತೆ ಕಂಡ ಯಡಿಯೂರಪ್ಪ ಸಾಮಾನ್ಯಕ್ಕಿಂತ ಕೊಂಚ ಹೆಚ್ಚೇ ನಗುತ್ತಾ ಕೆಲ ಕಾಲ ಕುಶಲೋಪರಿ ನಡೆಸಿದರು. ಆ ನಂತರ ಅಲ್ಲಿಯೇ ಇದ್ದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರ ಕಾಲಿಗೂ ಬಿದ್ದ ಜನಾರ್ಧನ ರೆಡ್ಡಿ ಅವರೊಂದಿಗೂ ಕೆಲ ಕಾಲ ಮಾತನಾಡಿದರು.
ಆ ನಂತರ ಎಲ್ಲ ನಾಯಕರು ಮೆರವಣಿಗೆಯಲ್ಲಿ ಸಾಗಿ ಶ್ರೀರಾಮುಲು ಅವರ ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾದರು.
ಬಳ್ಳಾರಿಯಲ್ಲಿ ರೆಡ್ಡಿ ಮಾಸ್ಟರ್ ಪ್ಲಾನ್, ಒಂದೇ ಕಲ್ಲಿಗೆ ಮೂರು ಹಕ್ಕಿ
ಅಮಿತ್ ಶಾ ಅವರು ಈಗಾಗಲೇ ಜನಾರ್ದನ ರೆಡ್ಡಿ ಮತ್ತು ಬಿಜೆಪಿಗೆ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ, ಆದರೆ ಜನಾರ್ದನ ರೆಡ್ಡಿ ಅವರು ಪರೋಕ್ಷವಾಗಿ ಮಾತ್ರವೇ ಅಲ್ಲದೆ ಪ್ರತ್ಯಕ್ಷವಾಗಿಯೂ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇದು ಗೊಂದಲ ಮೂಡಿಸಿದೆ.