ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾಮರಾಜನಗರ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪರಿಚಯ

|
Google Oneindia Kannada News

ಚಾಮರಾಜನಗರ, ಏಪ್ರಿಲ್ 18: ಗಡಿ ಜಿಲ್ಲೆ ಚಾಮರಾಜನಗರಲ್ಲಿ ರಾಜಕೀಯ ಚಟುವಟಿಕೆ ಉಳಿದ ಕ್ಷೇತ್ರಗಳಿಗೆ ಹೋಲಿಸಿದರೆ ಬಿರುಸಾಗಿರದಿದ್ದರೂ, ರಾಜ್ಯ ರಾಜಕಾರಣದಲ್ಲಿ ತನ್ನದೇ ಪ್ರಾಮುಖ್ಯ ಪಡೆದುಕೊಂಡಿದೆ. ದಿವಂಗತ ಎಚ್.ಎಸ್. ಮಹದೇವಪ್ರಸಾದ್, ಬಿ. ರಾಚಯ್ಯ, ಕೆ.ಎಸ್. ನಾಗರತ್ನಮ್ಮ, ರಾಜೂಗೌಡ ಮುಂತಾದ ಪ್ರಭಾವಿ ನಾಯಕರು ಇಲ್ಲಿಂದ ಆಯ್ಕೆಯಾಗಿದ್ದರು.

ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಇಲ್ಲಿನ ನಾಲ್ಕು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಎಸ್‌ಪಿಯೊಂದಿಗೆ ಚುನಾವಣಾ ಹೊಂದಾಣಿಕೆ ಮಾಡಿಕೊಂಡಿರುವ ಜೆಡಿಎಸ್, ಹನೂರು ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಉದ್ದೇಶಿಸಿದೆ. ಆದರೆ, ಅಲ್ಲಿ ಇನ್ನೂ ತನ್ನ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ.

ಕ್ಷೇತ್ರ ಪರಿಚಯ: ಚಾಮರಾಜನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಸಮಾನ ಅವಕಾಶಕ್ಷೇತ್ರ ಪರಿಚಯ: ಚಾಮರಾಜನಗರದಲ್ಲಿ ಬಿಜೆಪಿ-ಕಾಂಗ್ರೆಸ್ ಗೆ ಸಮಾನ ಅವಕಾಶ

ಉಳಿದ ಮೂರು ಕ್ಷೇತ್ರಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅವರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಬಿಎಸ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎನ್. ಮಹೇಶ್ ಅವರ ಸ್ಪರ್ಧೆ ಮಾತ್ರ ಖಚಿತವಾಗಿದೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಯಾರು ಕಣಕ್ಕೆ ಇಳಿಯಲಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಚಾಮರಾಜನಗರಕ್ಕೆ ಕಾಲಿಟ್ಟರೆ ಅಧಿಕಾರ ಹೋಗುತ್ತದೆ ಎಂಬ ನಂಬಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಾಗಿಸಿದ್ದಾರೆ. ಒಂದು ಕಾಲದಲ್ಲಿ ಜೆಡಿಎಸ್‌ನ ಭದ್ರಕೋಟೆ ಎನಿಸಿಕೊಂಡಿದ್ದ ಇಲ್ಲಿ ಈಗ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಇದುವರೆಗಿನ ಚುನಾವಣೆಗಳಲ್ಲಿ ಕೇವಲ ಎರಡು ಬಾರಿ ಗೆದ್ದಿರುವ ಬಿಜೆಪಿಗೆ ದೊಡ್ಡ ಸವಾಲು ಇದೆ.

ಚಾಮರಾಜನಗರದಲ್ಲಿ ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ರಾಮಚಂದ್ರ ಅವರಿಗೆ ಟಿಕೆಟ್ ಸಿಗಲಿದೆ ಎನ್ನಲಾಗಿತ್ತು. ಆದರೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರಿಗೆ ಮತ್ತೊಂದು ಅವಕಾಶ ನೀಡಲಾಗಿದೆ.

ಎ.ಆರ್. ಕೃಷ್ಣಮೂರ್ತಿಯನ್ನು ಬೆಂಬಲಿಸುತ್ತಾರಾ ಕಾಂಗ್ರೆಸ್ಸಿಗರು?ಎ.ಆರ್. ಕೃಷ್ಣಮೂರ್ತಿಯನ್ನು ಬೆಂಬಲಿಸುತ್ತಾರಾ ಕಾಂಗ್ರೆಸ್ಸಿಗರು?

ಮಾಜಿ ಸಚಿವ ಎಚ್. ನಾಗಪ್ಪ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಮಗ ಪ್ರೀತನ್ ನಾಗಪ್ಪ ಈ ಬಾರಿಯ ಚುನಾವಣೆಯಲ್ಲಿನ ಹೊಸ ಮುಖವಾಗಿದೆ.

ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ

ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ

ಚಾಮರಾಜನಗರ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡವರು.

ಮೈಸೂರು ಜಿಲ್ಲೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಆಯ್ಕೆಯಾಗಿದ್ದ ಅವರು, ಯಡಿಯೂರಪ್ಪ ಕೆಜೆಪಿ ಸ್ಥಾಪಿಸಿದ ನಂತರ 2013ರಲ್ಲಿ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿ ಕೆಜೆಪಿ ಸೇರಿಕೊಂಡಿದ್ದರು. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಿ. ಪುಟ್ಟರಂಗಶೆಟ್ಟಿ ಅವರೊಂದಿಗೆ ನೇರ ಪೈಪೋಟಿ ನಡೆಸಿದ್ದ ಮಲ್ಲಿಕಾರ್ಜುನಪ್ಪ, 43,244 ಮತ ಪಡೆದು 11,196 ಮತಗಳಿಂದ ಸೋಲು ಅನುಭವಿಸಿದ್ದರು.

ಕ್ಷೇತ್ರದಲ್ಲಿ ಉಪ್ಪಾರ ಮತ್ತು ಲಿಂಗಾಯತ ಮತಗಳು ನಿರ್ಣಾಯಕವಾಗಿವೆ. ಸತತ ಎರಡು ಬಾರಿ ಗೆದ್ದಿರುವ ಉಪ್ಪಾರ ಜನಾಂಗದ ಪುಟ್ಟರಂಗಶೆಟ್ಟಿ ವಿರುದ್ಧ ಮಲ್ಲಿಕಾರ್ಜುನಪ್ಪ ಸೆಣಸಲಿದ್ದಾರೆ. ಮಲ್ಲಿಕಾರ್ಜುನಪ್ಪ ಅವರಿಗೆ ಟಿಕೆಟ್ ಕೈತಪ್ಪುವ ಸನ್ನಿವೇಶ ಎದುರಾದಾಗ, ಕ್ಷೇತ್ರದ ಲಿಂಗಾಯತ ಸಮುದಾಯದ ಮುಖಂಡರು ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿ ಲಿಂಗಾಯತ ಅಭ್ಯರ್ಥಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದ್ದರು. ಅದರಂತೆ ರಾಮಚಂದ್ರ ಅವರಿಗೆ ಸಿಗಬಹದಾಗಿದ್ದ ಟಿಕೆಟ್, ಮಲ್ಲಿಕಾರ್ಜುನಪ್ಪ ಅವರ ಪಾಲಾಗಿದೆ.

ಜಿ.ಎನ್. ನಂಜುಂಡಸ್ವಾಮಿ

ಜಿ.ಎನ್. ನಂಜುಂಡಸ್ವಾಮಿ

ಪರಿಶಿಷ್ಟ ಜಾತಿಗೆ ಮೀಸಲಾದ ಕೊಳ್ಳೇಗಾಲ ಕ್ಷೇತ್ರದ ಅಭ್ಯರ್ಥಿಯಾಗಿ ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ ಸ್ಪರ್ಧೆಗೆ ಇಳಿದಿದ್ದಾರೆ. ಕ್ಷೇತ್ರದ ಟಿಕೆಟ್‌ಗಾಗಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಚಂದ್ರಕಲಾ ಬಾಯಿ ಮತ್ತು ನಂಜುಂಡಸ್ವಾಮಿ ನಡುವೆ ಪೈಪೋಟಿ ಇತ್ತು.

1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಜನತಾ ಪರಿವಾರದ ಎಸ್. ಜಯಣ್ಣ ಎದುರು ಸೋತಿದ್ದ ನಂಜುಂಡಸ್ವಾಮಿ, 1999ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 2008ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ ಕಾಂಗ್ರೆಸ್‌ನ ಆರ್. ಧ್ರುವನಾರಾಯಣ, 2009ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದರು. ಇದರಿಂದ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಕಂಡರು.

2013ರ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಕಣಕ್ಕಿಳಿದಿದ್ದ ನಂಜುಂಡಸ್ವಾಮಿ, 17,224 ಮತಗಳನ್ನು ಪಡೆದು ನಾಲ್ಕನೆಯ ಸ್ಥಾನ ಗಳಿಸಿದ್ದರು. ಬಿಜೆಪಿಯಿಂದ ಇತ್ತೀಚೆಗೆ ಪಕ್ಷ ಸೇರಿರುವ ಕಾಂಗ್ರೆಸ್‌ನ ಎ.ಆರ್, ಕೃಷ್ಣಮೂರ್ತಿ ಮತ್ತು ಕಳೆದ ಬಾರಿ ಎರಡನೆಯ ಸ್ಥಾನ ಗಳಿಸಿದ್ದ ಬಿಎಸ್‌ಪಿಯ ಎನ್. ಮಹೇಶ್ ಹಾಗೂ ನಂಜುಂಡಸ್ವಾಮಿ ಅವರ ನಡುವೆ ತ್ರಿಕೋನ ಸ್ಪರ್ಧೆಯ ನಿರೀಕ್ಷೆ ಇದೆ.

ಸಿ.ಎಸ್. ನಿರಂಜನಕುಮಾರ್

ಸಿ.ಎಸ್. ನಿರಂಜನಕುಮಾರ್

ಗಂಡ ಮತ್ತು ಹೆಂಡತಿ ಇಬ್ಬರ ವಿರುದ್ಧವೂ ಸ್ಪರ್ಧಿಸಿ ಪರಾಭವಗೊಂಡಿರುವ ಸಿ.ಎಸ್. ನಿರಂಜನಕುಮಾರ್ ಬಿಜೆಪಿಯ ಅಭ್ಯರ್ಥಿಯಾಗಿ ಮತ್ತೆ ಮತಪರೀಕ್ಷೆಗೆ ಒಡ್ಡಿಕೊಳ್ಳುತ್ತಿದ್ದಾರೆ.

2013ರಲ್ಲಿ ಕಾಂಗ್ರೆಸ್‌ನ ಎಚ್‌.ಎಸ್. ಮಹದೇವಪ್ರಸಾದ್ ಎದುರು ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಿರಂಜನಕುಮಾರ್, 66,048 ಮತ ಗಳಿಸಿ 7,675 ಮತಗಳಿಂದ ಸೋಲು ಕಂಡಿದ್ದರು. ಮಹದೇವಪ್ರಸಾದ್ ಅವರ ಹಠಾತ್ ನಿಧನದಿಂದ ತೆರವಾದ ಕ್ಷೇತ್ರಕ್ಕೆ 2017ರಲ್ಲಿ ಉಪಚುನಾವಣೆ ನಡೆಯಿತು. ಆಗ ಯಡಿಯೂರಪ್ಪ ಅವರೊಂದಿಗೆ ಬಿಜೆಪಿಗೆ ಮರಳಿದ್ದ ನಿರಂಜನಕುಮಾರ್, 79,381 ಮತ ಪಡೆದುಕೊಂಡು ಮೋಹನಕುಮಾರಿ (ಗೀತಾ ಮಹದೇವಪ್ರಸಾದ್) ಅವರ ಎದುರು 10,877 ಮತಗಳಿಂದ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ಜಿಲ್ಲಾ ಉಸ್ತುವಾರಿ ಸಚಿವೆಯೂ ಆಗಿರುವ ಮೋಹನಕುಮಾರಿ ಅವರ ಎದುರು ಮತ್ತೆ ಸ್ಪರ್ಧಿಸಲಿದ್ದಾರೆ.

ಪ್ರೀತನ್ ನಾಗಪ್ಪ

ಪ್ರೀತನ್ ನಾಗಪ್ಪ

ಕುಟುಂಬ ರಾಜಕಾರಣದ ಕ್ಷೇತ್ರವಾಗಿರುವ ಹನೂರಿನಲ್ಲಿ ಮಾಜಿ ಶಾಸಕ, ದಿವಂಗತ ಎಚ್. ನಾಗಪ್ಪ ಮತ್ತು ಮಾಜಿ ಶಾಸಕಿ ಪರಿಮಳಾ ನಾಗಪ್ಪ ಅವರ ಮಗ ಪ್ರೀತನ್ ಬಿಜೆಪಿಯ ಅಭ್ಯರ್ಥಿ.

ಇದುವರೆಗೆ ರಾಜಕೀಯ ವಲಯದಲ್ಲಿ ಗುರುತಿಸಿಕೊಳ್ಳದಿದ್ದ ಪ್ರೀತನ್ ನಾಗಪ್ಪ, ವೃತ್ತಿಯಿಂದ ಡಾಕ್ಟರ್. ಟಿಕೆಟ್ ಪೈಪೋಟಿ ಶುರುವಾದಂತೆ ಪ್ರೀತನ್ ಹೆಸರು ಚಾಲ್ತಿಗೆ ಬಂದಿತ್ತು. ಬಿಜೆಪಿ ಮುಖಂಡ ವಿ. ಸೋಮಣ್ಣ ಇದೇ ಕ್ಷೇತ್ರದಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ, ಪರಿಮಳಾ ನಾಗಪ್ಪ ತಮ್ಮ ಮಗನಿಗೇ ಟಿಕೆಟ್ ನೀಡಬೇಕು ಎಂದು ಪಟ್ಟುಹಿಡಿದಿದ್ದರು.

2013ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪರಿಮಳಾ ನಾಗಪ್ಪ 44,135 ಮತ ಪಡೆದು 11,549 ಮತಗಳ ಅಂತರದಿಂದ ಕಾಂಗ್ರೆಸ್‌ನ ಆರ್. ನರೇಂದ್ರ ಅವರ ಎದುರು ಸೋತಿದ್ದರು. ಬಿಜೆಪಿ ಇಲ್ಲಿ ಎಂಟನೇ ಸ್ಥಾನ ಪಡೆದಿತ್ತು.

English summary
BJP has announced list of candidates for Chamarajanagar District of all four constituencies. Preethan Nagappa from Hanur Constituency is the new face in bjp
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X