ಚಾಮರಾಜನಗರ: ಕಾಡಂಚಿನ ಗ್ರಾಮಗಳಿಗೆ ರೋಟರಿ ಸಂಸ್ಥೆಯಿಂದ ಮೂಲಭೂತ ಸೌಲಭ್ಯ
ಚಾಮರಾಜನಗರ, ನವೆಂಬರ್ 25: ಕಾಡಂಚಿನ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯ ಒದಗಿಸಲು ಬೆಂಗಳೂರಿನ 56 ರೋಟರಿ ಕ್ಲಬ್ ಗಳ ಜಂಟಿ ಸಹಯೋಗದಲ್ಲಿ ವೈಲ್ಡ್ ಲೈಫ್ ಕನ್ಸರ್ವೇಷನ್ ಫೌಂಡೇಷನ್ ಮುಂದಾಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನದ ಅಂಚಿನಲ್ಲಿರುವ ಮಂಗಳ ಗ್ರಾಮಗಳಲ್ಲಿ 25 ಶೌಚಾಲಯಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಬೆಂಗಳೂರಿನ ರೋಟರಿ-3190 ಸಂಸ್ಥೆಯು ಅನುಷ್ಠಾನಗೊಳಿಸುತ್ತಿದೆ. ಈ ಕಾಮಗಾರಿಗೆ ರೋಟರಿ ಕ್ಲಬ್ ಸಮೂಹ ಸಂಸ್ಥೆ ಅಧ್ಯಕ್ಷ ನಾಗೇಂದ್ರ ಪ್ರಸಾದ್, ಕಾರ್ಯುದರ್ಶಿ ಬಿ.ಆರ್.ಶ್ರೀಧರ್ ಚಾಲನೆ ನೀಡಿದರು.
ಕಾಡನಂಚಿನ ಗ್ರಾಮಗಳಲ್ಲಿ ವನ್ಯಪ್ರಾಣಿ-ಮಾನವ ಸಂಘರ್ಷ ತಡೆಯಲು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಕಾಡಂಚಿನ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. ಆದ್ಯತೆ ಮೇಲೆ ಯಾರಿಗೆ ಶೌಚಾಲಯವಿಲ್ಲವೋ ಅವರಿಗೆ ಶೌಚಾಲಯ ನಿರ್ಮಿಸುವ ಕಾರ್ಯ ಮಾಡಲಿದೆ.

ಡಬ್ಲ್ಯೂಸಿಎಫ್ ಸಂಸ್ಥೆಯ ರಾಜ ಕುಮಾರ್ ಅವರು ಮಾತನಾಡಿ, ಕಾಡಿನಂಚಿನ ಗ್ರಾಮಗಳಲ್ಲಿ ಬಯಲು ಶೌಚ ಕಷ್ಟಕರ. ಬಯಲು ಶೌಚದ ಸಮಯದಲ್ಲಿ ವನ್ಯಪ್ರಾಣಿಗಳ ದಾಳಿ ಮಾಡಿರುವ ಉದಾಹರಣೆಗಳಿವೆ. ಹೀಗಾಗಿ ಕಾಡಂಚಿನ ಗ್ರಾಮಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಬೆಂಗಳೂರಿನ ರೋಟರಿ ಸಂಸ್ಥೆ ಮುಂದೆ ಬಂದಿದೆ. ಇದು ಈ ಭಾಗದ ಜನರಿಗೆ ಅನುಕೂಲವಾಗುವ ಜತೆಗೆ ರೋಟರಿ ಸಂಸ್ಥೆ ಕಾರ್ಯ ಶಾಶ್ವತವಾಗಿ ಉಳಿಯಲಿದೆ,''ಎಂದು ಹೇಳಿದರು.
ಈ ಸಂಸ್ಥೆಯು ಮೊದಲು ನಗರ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣಕ್ಕೆ ಮುಂದಾಗಿತ್ತು. ಕಾಡಂಚಿನ ಗ್ರಾಮಗಳ ಸ್ಥಿತಿಗತಿ ತಿಳಿಸಿ, ಡಬ್ಲ್ಯೂಸಿಎಫ್ ಈ ಯೋಜನೆಯನ್ನು ಮಂಗಳ ಗ್ರಾಮಕ್ಕೆ ತಂದಿದೆ. ಶೌಚಾಲಯ ಅಲ್ಲದೆ ಹಲವು ಸೌಲಭ್ಯಗಳನ್ನು ಒದಗಿಸಲು ರೋಟರಿ ಸಂಸ್ಥೆಯು ಯೋಜಿಸಿದೆ ಎಂದರು.












Click it and Unblock the Notifications