ಅಪಘಾತದ ವಿಡಿಯೋ ಮಾಡಿದ್ರು, ಗಾಯಾಳು ನೋವು ಕಾಣಲಿಲ್ಲ
ಬೆಂಗಳೂರು, ಮಾರ್ಚ್ 13: ಅಪಘಾತದಲ್ಲಿ ಕಾಲು ಮುರಿದು ಏಳಲಾಗದೆ ರಕ್ತಸಿಕ್ತವಾಗಿ ರಸ್ತೆಯಲ್ಲಿ ಬಿದ್ದಿದ್ದರೂ ಆಸ್ಪತ್ರೆಗೆ ಸೇರಿಸಲು ಮುಂದೆ ಬಾರದೆ ಮೊಬೈಲ್ ನಲ್ಲಿ ವಿಡಿಯೋ ಮಾಡುವುದರಲ್ಲಿ ಬಿಜಿಯಾಗಿದ್ದ ಜನತೆಗೆ ಅದೇನು ಹೇಳಬೇಕೋ..
ನಾಯಂಡಹಳ್ಳಿ ಜಂಕ್ಷನ್ ಬಳಿ ಮಂಗಳವಾರ ಮಧ್ಯಾಹ್ನ ಬೈಕ್ ಒಂದು ಅಪಘಾತಕ್ಕೀಡಾಗಿದೆ. ಅಪಘಾತದಲ್ಲಿ ಬೈಕ್ ಸವಾರ ಮದನ್ ಲಾಲ್ ಕಾಲು ಮುರಿದುಕೊಂಡು ರಸ್ತೆಯಲ್ಲೇ ಬಿದ್ದಿದ್ದಾರೆ, ಅಲ್ಲಿನ ಸುತ್ತಮುತ್ತಲ ಜನರು ನೋಡಿದ್ದರೂ ಕೂಡ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಯಾರೂ ಕೂಡ ಮುಂದಾಗಿಲ್ಲ ಎನ್ನುವುದು ಬೇಸರದ ಸಂಗತಿ.
ರಕ್ತಸಿಕ್ತವಾದ ಕಾಲಿನೊಂದಿಗೆ ರಸ್ತೆಯಲ್ಲೇ ಬಿದ್ದಿದ್ದಾರೆ, ಅವರನ್ನು ನೋಡಿಯೂ ನೋಡದಂತೆ ತೆರಳಿದವರು ಹಲವಾರು, ಇನ್ನುಳಿದವರು ವಿಡಿಯೋ ಮಾಡಿಕೊಳ್ಳುವುದರಲ್ಲಿ ಬಿಜಿಯಾಗಿದ್ದರು. 20ನಿಮಿಷಗಳ ಕಾಲ ರಸ್ತೆಯಲ್ಲೇ ಬಿದ್ದು ಒದ್ದಾಡಿದ್ದಾರೆ, ನಂತರ ಅಂಬ್ಯುಲೆನ್ಸ್ ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳ್ಳಾರಿಯಲ್ಲೂ ಕೂಡ ಇಂತಹುದೇ ಒಂದು ಘಟನೆ ನಡೆದಿದೆ, ಲಾರಿ-ಬೈಕ್ ನಡುವೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ರಸ್ತೆಯಲ್ಲೇ ಬಿದ್ದು ಒದ್ದಾಡಿ ಮೃತಪಟ್ಟಿದ್ದಾರೆ,ಎಲ್ಲರೂ ಮಾನವೀಯತೆ ಮರೆದು ವಿಡಿಯೋ ಚಿತ್ರೀಕರಿಸುವುದರಲ್ಲಿ ಮಗ್ನರಾಗಿದ್ದರು. ಇದೆಲ್ಲ ನೋಡಿದರೆ ನಮ್ಮ ಜನರಿಗೆ ಮಾನವೀಯತೆಯೇ ಇಲ್ಲವೇ ಅಥವಾ ತಮ್ಮ ಕುಟುಂಬಕ್ಕೆ ಮಾತ್ರವೇ ಅದು ಮೀಸಲಾ ಎನ್ನುವ ಪ್ರಶ್ನೆ ಕಾಡುತ್ತದೆ.