ಪ್ರಶಾಂತ್ ಸಂಬರಗಿ ವಿರುದ್ಧ ಕಾನೂನು ಕ್ರಮಕ್ಕೆ ಕೋರಿ ದೂರು ಸಲ್ಲಿಸಿದ ಪತ್ರಕರ್ತ ಚಂದ್ರಚೂಡ್
ಬೆಂಗಳೂರು, ಸೆ. 15: ಸ್ಯಾಂಡಲ್ವುಡ್ ಡ್ರಗ್ ಪ್ರಕರಣದ 'ಮಾಹಿತಿದಾರ' ಎಂದೆನಿಸಿಕೊಂಡು ಸುದ್ದಿ ಕೇಂದ್ರಕ್ಕೆ ಬಂದಿದ್ದ ಪ್ರಶಾಂತ್ ಸಂಬರಗಿ ವಿರುದ್ಧ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಚಂದ್ರಚೂಡ್ ನೀಡಿರುವ ದೂರನ್ನು ಸ್ವೀಕರಿಸಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್, ದೂರಿನ ಕುರಿತು ವಿಚಾರಣೆ ನಡೆಸುವಂತೆ ಸಿಸಿಬಿ ಪೊಲೀಸರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಸಂಬರಗಿ ಎಂಬ ವ್ಯಕ್ತಿ ರಾಜಕಾರಣಿಗಳು ಹಾಗೂ ನಟಿಯರನ್ನು ಗುರಿಯಾಗಿಸಿಕೊಂಡು ಸಾಕ್ಷಿಗಳು ಇಲ್ಲದೇ ಸುಳ್ಳು ಆರೋಪ ಮಾಡಿ ದಾಖಲಾತಿ ಮಾಡುವುದಾಗಿ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಹೀಗಾಗಿ ಸಂಬರಗಿಯನ್ನು ವಿಚಾರಣೆಗೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರ ಮನವಿ ಮಾಡಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣ ಬೆಳಕಿಗೆ ಬಂದಾಗಲೂ ಕೆಲ ನಟಿಯರ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿಕೆ ನೀಡಿದ್ದರು. ಕೋಟಿ ಕೋಟಿ ವಹಿವಾಟು ನಟಿಯರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದರು. ಸಿಸಿಬಿಗೆ ದಾಖಲೆಗಳನ್ನು ನೀಡುವುದಾಗಿ ಹೇಳಿದ್ದರು. ಆದರೆ, ಸಿಸಿಬಿ ಪೊಲೀಸರು ಡ್ರಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೊಪ ಪಟ್ಟಿ ಸಲ್ಲಿಸಿದ್ದು, ಸಂಬರಗಿ ಹೇಳಿಕೆಯನ್ನು ಪರಿಗಣಿಸಿರಲಿಲ್ಲ. ಸಂಬರಗಿ ಎಂಬ ಹೆಸರು ಕೂಡ ಪ್ರಸ್ತಾಪವಾಗಿಲ್ಲ ಎಂಬುದರ ಬಗ್ಗೆ ಒನ್ಇಂಡಿಯಾ ಕನ್ನಡ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಸಂಬರಗಿ ವಿರುದ್ಧ ಪತ್ರಕರ್ತ ಚಂದ್ರಚೂಡ್ ದೂರು ಸಲ್ಲಿಕೆಯಾಗಿದೆ.
ಮೂರು ವರ್ಷದ ಹಿಂದೆ ನಡೆದ ಮೀಟೂ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಶ್ರುತಿ ಹರಿಹರನ್ ಅಂತಾರಾಷ್ಟ್ರೀಯ ಕ್ರೈಸ್ತ ಮಿಷನರಿಗಳಿಂದ ಕೋಟಿ ಕೋಟಿ ಹಣ ಪಡೆದು ಅದನ್ನು ಭಾರತದ ದೇಶದ್ರೋಹಿ ಕೃತ್ಯಕ್ಕೆ ಬಳಕೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕುರಿತು ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು. ಈ ಕುರಿತು ಪೊಲೀಸ್ಗಾಗಲೀ ಮಾಧ್ಯಮಗಳಿಗಾಗಲೀ ಸಂಬರಗಿ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಿರುವುದಿಲ್ಲ ಈ ಕುರಿತು ವಿಚಾರಣೆ ನಡೆಸುವಂತೆ ದೂರಿನಲ್ಲಿ ಕೋರಲಾಗಿದೆ.
ಸ್ಯಾಂಡಲ್ವುಡ್ ಡ್ರಗ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ನಟಿ ಸಂಜನಾ ಮತ್ತು ರಾಗಿಣಿ ಇತರರು ದಂಧೆ ಮಾಡುತ್ತಿದ್ದಾರೆ. ಇದರಿಂದಲೇ ಹಣ ಸಂಪಾದನೆ ಮಾಡಿ ಮೋಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಡ್ರಗ್ ಪ್ರಕರಣದ ತನಿಖೆಗೆ ಯಾವುದೇ ದಾಖಲೆ ನೀಡಿಲ್ಲ ಎಂಬುದು ತನಿಖಾ ವರದಿಯಿಂದ ಗೊತ್ತಾಗಿದ್ದು, ತನಗಾಗದವರ ವಿರುದ್ಧ ಷಡ್ಯಂತ್ರ ಮಾಡಿ ಇದೀಗ ಅಸಲಿ ಸತ್ಯ ಬಯಲಿಗೆ ಬಂದಿದೆ. ಸಿನಿಮಾ ರಂಗಕ್ಕೆ ಪಾಪದ ದುಡ್ಡು ಬರ್ತಿದೆ ಎಂಬ ಹೇಳಿಕೆ ನೀಡಿದ್ದು, ಇದಕ್ಕೆ ಸಂಬಂಧಿಸಿದ ಯಾವ ದಾಖಲೆಗಳನ್ನು ಬಿಡುಗಡೆ ಮಾಡಿರುವುದಿಲ್ಲ. ಇದೇ ರೀತಿ ನಿರೂಪಕಿ ಅನುಶ್ರೀ ಪ್ರಕರಣಕ್ಕೂ ಸಂಬಂಧಿಸಿದಂತೆ ಮಾಧ್ಯಮಗಳಿಗೆ ದಾಖಲೆ ಬಿಡುಗಡೆ ಮಾಡುತ್ತೀನಿ ಎಂದು ಹೇಳಿ ದಿಕ್ಕು ತಪ್ಪಿಸಿದ್ದಾರೆ. ಇವರ ನಡವಳಿ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಪ್ರಶಾಂತ್ ಸಂಬರಗಿಯನ್ನು ವಿಚಾರಣೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರ ಮನವಿ ಮಾಡಿದ್ದಾರೆ.
Recommended Video
ನಿರೂಪಕಿ ಅನುಶ್ರೀ ಮೇಲಿನ ಡ್ರಗ್ ಸೇವನೆ ಆರೋಪ ಸಂಬಂಧ ಮಂಗಳೂರು ಡ್ರಗ್ ಪ್ರಕರಣದ ದೋಷಾರೋಪ ಪಟ್ಟಿ ಮಾಧ್ಯಮದಲ್ಲಿ ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಪ್ರಶಾಂತ್ ಸಂಬರಗಿ, ನಟಿ ಅನುಶ್ರೀ ಹನ್ನೆರಡು ಕೋಟಿ ರೂ. ಮನೆ ಕಟ್ಟಿದ್ದಾರೆ. ಇಷ್ಟು ಹಣ ಎಲ್ಲಿಂದ ಬಂತು ? ಬೆಂಗಳೂರಿನಲ್ಲಿ ನಾಲ್ಕು ಕೋಟಿ ಮನೆ ಖರೀದಿ ಮಾಡಿದ್ದಾರೆ. ಅನುಶ್ರೀ ಡ್ರಗ್ ಪೆಡ್ಲರ್ ಎಂದು ನೇರ ಆರೋಪ ಮಾಡಿದ ಸಂಬರಗಿ ದಾಖಲೆಗಳನ್ನು ನವೆಂಬರ್ನಲ್ಲಿ ಬಿಡುಗಡೆ ಮಾಡುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇದಲ್ಲದೇ ಶುಗರ್ ಡ್ಯಾಡಿ ಜತೆ ಸಂಬಂಧವಿದೆ, ಈ ಕುರಿತು ಅಡಿಯೋ ಬಿಡುಗಡೆ ಮಾಡ್ತೀನಿ ಎಂದು ಆರೋಪಿಸಿದ್ದರು. ಅಂಶವನ್ನು ಸಹ ಉಲ್ಲೇಖಿಸಿ ಚಂದ್ರಚೂಡ್ ದೂರು ಸಲ್ಲಿಸಿದ್ದಾರೆ.