ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕ: ರಾಮಲಿಂಗಾರೆಡ್ಡಿ ಆರೋಪ
ಬೆಂಗಳೂರು, ಜು.16: ಬಿಬಿಎಂಪಿ ವಾರ್ಡ್ ಮರುವಿಂಗಡಣೆ ಅವೈಜ್ಞಾನಿಕವಾಗಿದ್ದು, ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಿಕೊಂಡಿದ್ದಾರೆ. ವಾರ್ಡ್ ಮರು ವಿಂಗಡಣೆಗೆ 3 ಸಾವಿರಕ್ಕೂ ಹೆಚ್ಚು ಆಕ್ಷೆಪಗಳು ವ್ಯಕ್ತವಾಗಿವೆ. ಹೆಸರು ಬದಲಾವಣೆ ಮಾಡಿದ್ದಾರೆಯೇ ಹೊರತು ಯಾವುದೇ ವಾರ್ಡ್ಗಳಲ್ಲಿ ಬದಲಾವಣೆ ತಂದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ವಾರ್ಡ್ ಮರುವಿಂಗಡಣೆಯನ್ನು ಪ್ರಕಟಿಸಿ, 15 ದಿನ ಆಕ್ಷೇಪಗಳಿಗೆ ಅವಕಾಶ ಮಾಡಿಕೊಟ್ಟಿತ್ತು. ಇದಕ್ಕೆ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಹಲವು ಆಕ್ಷೇಪಗಳು ವಾರ್ಡ್ಗಳ ಹೆಸರು ಬದಲಾವಣೆ ವಿಚಾರವಾಗಿವೆ. ಇನ್ನುಳಿದ ಆಕ್ಷೇಪಗಳಲ್ಲಿ ಅವೈಜ್ಞಾನಿಕವಾಗಿ ವಾರ್ಡ್ ಮರುವಿಂಗಡಣೆ ಮಾಡಲಾಗಿದೆ," ಎಂದು ದೂರುಗಳು ಕೇಳಿಬಂದಿದ್ದವು ಎಂದಿದ್ದಾರೆ.
ಸಿಎಂ ಮಹತ್ವಾಕಾಂಕ್ಷಿ ಯೋಜನೆಗೆ ಬಿಬಿಎಂಪಿ ಅಡ್ಡಿ- ಮಹಿಳೆಯರು ಓದಲೇಬೇಕಾದ ಸುದ್ದಿ
ಅಮಿಬಾಗಳಿಗಾದರೂ ತಕ್ಕಮಟ್ಟಿಗೆ ಆಕಾರವಿರುತ್ತದೆ. ಆದರೆ ಈಗ ಮರುವಿಂಗಡಣೆಯಾದ ವಾರ್ಡ್ಗಳಿಗೆ ಆಕಾರವೇ ಇಲ್ಲದಂತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಈ ವಿಚಾರವಾಗಿ ನಾನು ಈ ಹಿಂದೆ ಅನೇಕ ಬಾರಿ ಪ್ರಸ್ತಾಪಿಸಿದ್ದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಕಂದಾಯ ಅಧಿಕಾರಿಗಳು, ಜಂಟಿ ಆಯುಕ್ತರು ಸೇರಿ ವಾರ್ಡ್ಗಳ ಗಡಿ ಕುರಿತು ಚರ್ಚೆ ಮಾಡಿ ಮಾರ್ಗಸೂಚಿಯಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಕಂದಾಯ ಅಧಿಕಾರಿಗಳಿಗೆ, ಜಂಟಿ ಆಯುಕ್ತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ನಿರ್ಧಾರವಾಗಿ ಕೇಶವಕೃಪದಲ್ಲಿ ಮರುವಿಂಗಡಣೆ ಪ್ರಕ್ರಿಯೆಗೆ ಅಂತಿಮ ಒಪ್ಪಿಗೆ ಪಡೆಯಲಾಗಿದೆ.
ಕಾಂಗ್ರೆಸ್ ಕ್ಷೇತ್ರಗಳಿಗೆ ಅನ್ಯಾಯ
ಆಕ್ಷೇಪಗಳು ವ್ಯಕ್ತವಾದ ಬಳಿಕವೂ ಕಂದಾಯ ಅಧಿಕಾರಿಗಳಾಗಲಿ, ಜಂಟಿ ಆಯುಕ್ತರಾಗಲಿ ಬಂದು ಪರಿಶೀಲನೆ ನಡೆಸಲೇ ಇಲ್ಲ. 243 ವಾರ್ಡ್ಗಳು ಸರಿಯಾಗಿವೆ ಎಂದು ಹೇಳುತ್ತಿದ್ದಾರೆ. ಕೇವಲ ಹೆಸರಿಗೆ ಮಾತ್ರ ಆಕ್ಷೇಪಗಳನ್ನು ಸಂಗ್ರಹಿಸಿದ್ದಾರೆ. ಇದು ಜನರಿಗೆ ಅನುಕೂಲವಾಗಲು ಮಾಡಿಲ್ಲ. ಬದಲಾಗಿ ಬಿಜೆಪಿ ಪಕ್ಷಕ್ಕೆ ಅನುಕೂಲವಾಗುವಂತೆ ಮಾಡಲಾಗಿದೆ. ಪ್ರತಿ ವಾರ್ಡ್ ಜನಸಂಖ್ಯೆ ಸರಾಸರಿ 35 ಸಾವಿರ ಇರಬೇಕು. ಕಾಂಗ್ರೆಸ್ ಪಕ್ಷ ಇರುವ ಕಡೆಗಳಲ್ಲಿ ಪ್ರತಿ ವಾರ್ಡ್ನಲ್ಲೂ 36,753 ಮತದಾರರು ಇದ್ದಾರೆ. ಬಿಜೆಪಿ ಇರುವ ಕಡೆಗಳಲ್ಲಿ 33,927 ಮತದಾರರು ಬರುತ್ತಾರೆ. ಗೋವಿಂದರಾಜನಗರ ಕ್ಷೇತ್ರದ ವಾರ್ಡ್ಗಳಲ್ಲಿ 30 ಸಾವಿರಕ್ಕಿಂತಲೂ ಕಡಿಮೆ ಮತದಾರರಿದ್ದಾರೆ. ಈ 35 ಸಾವಿರ ಸರಾಸರಿಯಲ್ಲಿ ನೋಡಿದರೆ ಬಿಜೆಪಿ ಇರುವ ಕ್ಷೇತ್ರಗಳಲ್ಲಿ 140 ವಾರ್ಡ್ಗಳು ಇರಬೇಕಿತ್ತು. ಆದರೆ ಈಗ 145 ಸ್ಥಾನಗಳನ್ನು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ 103ರ ಬದಲಿಗೆ ಕೇವಲ 98 ವಾರ್ಡ್ಗಳನ್ನು ನೀಡಿದ್ದಾರೆ.
ಸರ್ಕಾರ ಪರೋಕ್ಷ ಸಹಾಯ ಮಾಡಿದೆ
ಬ್ಯಾಟರಾಯನಪುರ ಜಯನಗರ, ಚಾಮರಾಜಪೇಟೆ, ದಾಸರಳ್ಳಿ ಕ್ಷೇತ್ರಗಳಲ್ಲಿ ಜನಸಂಖ್ಯೆ ಪರಿಗಣಿಸಿದರೆ ವಾರ್ಡ್ಗಳನ್ನು ಕಡಿಮೆ ಮಾಡಿ ಬಿಜೆಪಿ ಇರುವ ಕ್ಷೇತ್ರಗಳಲ್ಲಿ ಸೇರಿಸಿಕೊಂಡಿದ್ದಾರೆ. ಚಾಮರಾಜಪೇಟೆಯ ವಾರ್ಡ್ಗಳಲ್ಲಿನ 39 ಸಾವಿರ ಸರಾಸರಿಯಲ್ಲಿ ಜನಸಂಖ್ಯೆ ಇದ್ದರೆ, ಚಿಕ್ಕಪೇಟೆ ಕ್ಷೇತ್ರದ ವಾರ್ಡ್ಗಳಲ್ಲಿ ಜನಸಂಖ್ಯೆ ಪ್ರಮಾಣ 32 ಸಾವಿರ ಸರಾಸರಿಯಷ್ಟಿದೆ. ಹೀಗೆ ಜನಸಂಖ್ಯೆ ಆಧಾರದಲ್ಲೂ ತಮಗೆ ತಕ್ಕಂತೆ ವಾರ್ಡ್ಗಳನ್ನು ವಿಂಗಡಣೆ ಮಾಡಿದ್ದಾರೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿದೆ ಎಂದು ಪರೋಕ್ಷವಾಗಿ ರಾಮಲಿಂಗರೆಡ್ಡಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿ ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು
ಬೆಂಗಳೂರು ಅಭಿವೃದ್ಧಿ ಎಂದರೆ 28 ಕ್ಷೇತ್ರಗಳ ಅಭಿವೃದ್ಧಿಯೇ ಹೊರತು, ಕೇವಲ ಬಿಜೆಪಿ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯಲ್ಲ. ಬಿಜೆಪಿ ಶಾಸಕರಿಗೆ 2718 ಕೋಟಿ, ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೆ 1022 ಕೋಟಿ, ಜೆಡಿಎಸ್ನ ದಾಸರಹಳ್ಳಿ ಕ್ಷೇತ್ರಕ್ಕೆ 125 ಕೋಟಿ ಕೊಟ್ಟು ತಾರತಮ್ಯ ಮಾಡುತ್ತಿದ್ದಾರೆ. ಈ ವಿಚಾರವಾಗಿ ಸೋಮವಾರ ವಕೀಲರನ್ನು ಭೇಟಿ ಮಾಡಿ ಅವರ ಅಭಿಪ್ರಾಯ ಪಡೆಯುತ್ತೇವೆ. ಇಲ್ಲಿ ನಮ್ಮ ಪಕ್ಷಕ್ಕೆ ತೊಂದರೆ ಆಗುವುದಕ್ಕಿಂತ ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದೇವೆ. ಮಡಿವಾಳವನ್ನು ಕೇವಲ ಹೆಸರಿಗಷ್ಟೇ ಇದೆ. ಈ ಗ್ರಾಮವನ್ನೇ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಪ್ರತಿ ಕ್ಷೇತ್ರದ ಕಂದಾಯ ಅಧಿಕಾರಿಗಳು ಕೆಲಸ ಮಾಡಿದ್ದರೆ ಅವರಿಗೆ ಜ್ಞಾನವಿರುತ್ತಿತ್ತು. ಆದರೆ ಬಿಜೆಪಿ ಶಾಸಕರು ಮಂತ್ರಿಗಳ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮೂರು ವರ್ಷಗಳಲ್ಲಿ ತನಿಖೆ ಮಾಡಿಸಬಹುದಿತ್ತು
ನಾವು ನ್ಯಾಯಾಲಯಕ್ಕೆ ಹೋದರೂ 10-15 ದಿನಗಳಲ್ಲಿ ಅರ್ಜಿ ಇತ್ಯರ್ಥ ಮಾಡಿ ಎಂದು ಕೇಳುತ್ತೇವೆ ಎಂದಿದ್ದಾರೆ. ನಾವು ಅಧಿಕಾರ ಕಳೆದುಕೊಂಡು 4 ವರ್ಷವಾಗಿದೆ. ಕಳೆದ ಮೂರು ವರ್ಷಗಳಿಂದ ಬಿಜೆಪಿ ಅವರು ಆಡಳಿತ ನಡೆಸುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಅಕ್ರಮ ನಡೆದಿದ್ದರೆ, ಕಳೆದ 3 ವರ್ಷಗಳಲ್ಲಿ ತನಿಖೆ ಮಾಡಬಹುದಿತ್ತು. ಬೇಡ ಎಂದಿದ್ದೆವಾ? ನಾವು ಅವರನ್ನು ಕಟ್ಟಿಹಾಕಿದ್ದೆವಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.