ರಾಜಭವನದಲ್ಲಿ ಬೆಕ್ಕು ಹಿಡಿಯಲು ಬರೋಬ್ಬರಿ 1 ಲಕ್ಷಕ್ಕೆ ಗುತ್ತಿಗೆ
ಬೆಂಗಳೂರು, ಮಾರ್ಚ್ 8: ರಾಜಭವನದಲ್ಲಿ ಬೆಕ್ಕುಗಳ ಹಾವಳಿ ವಿಪರೀತವಾಗಿದ್ದು ಇದಕ್ಕೆ ಪರಿಹಾರ ಕಂಡುಹಿಡಿಯಲೇ ಬೇಕು ಎಂದು ರಾಜಭವನ ಆಡಳಿತ ಮಂಡಳಿ ಬಿಬಿಎಂಪಿ ಮೊರೆ ಹೋಗಿತ್ತು.
ರಾಜಭವನದಲ್ಲಿರುವ ಸುಮಾರು 35 ಬೆಕ್ಕುಗಳನ್ನು ಹಿಡಿಯಲು ಬಿಬಿಎಂಪಿ ಬರೋಬ್ಬರಿ 98 ಸಾವಿರ ರೂ ವೆಚ್ಚ ಮಾಡಲು ಮುಂದಾಗಿದೆ.
ನಗರದಲ್ಲಿ ಈವರೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿತ್ತು ಅದರ ಜೊತೆಗೆ ಬಿಬಿಎಂಪಿಗೆ ಇಲಿಗಳ ತೊಂದರೆಯನ್ನು ಕೂಡ ಎದುರಿಸುತ್ತಿದೆ ಇದರ ಮಧ್ಯೆ ಬೆಕ್ಕುಗಳ ಹಾವಳಿ ತಲೆನೋವಾಗಿದೆ.

ರಾಜಭವನ ಉದ್ಯಾನದ ಹಿರಿಯ ತೋಟಗಾರಿಕೆ ನಿರ್ದೇಶಕರು ರಾಜಭವನದಲ್ಲಿ ಬೆಕ್ಕುಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿದು ಪುನರ್ವಸತಿ ಕಲ್ಪಿಸುವಂತೆ ಬಿಬಿಎಂಪಿ ಪಶುವಿಭಾಗದ ಜಂಟಿ ಆಯುಕ್ತರಿಗೆ ಮನವಿ ಮಾಡಿದ್ದರು.
ಆ ಪತ್ರವನ್ನಾಧರಿಸಿ ಪರಿಶೀಲನೆ ನಡೆಸಿರುವ ಬಿಬಿಎಂಪಿ, ಇದೀಗ ರಾಜಭವನದಲ್ಲಿ ಎದುರಾಗಿರುವ ಬೆಕ್ಕುಗಳ ಕಾಟಕ್ಕೆ ಮುಕ್ತಿ ನೀಡಲು ಮುಂದಾಗಿದೆ.
ರಾಜಭವನದಲ್ಲಿ ಬೆಕ್ಕುಗಳನ್ನು ಹಿಡಿಯಲು ಟೆಂಡರ್ ಕರೆಯಲಾಗಿತ್ತು. ಅದರಂತೆ ಈಗ ಜಯರಾಜ್ ಎಂಬುವವರಿಗೆ ಗುತ್ತಿಗೆ ನೀಡಿ ಕೆಲಸ ಆರಂಭಿಸುವುದಕ್ಕೆ ಕಾರ್ಯಾದೇಶ ಪತ್ರವನ್ನು ಬಿಬಿಎಂಪಿ ನೀಡಿದೆ.
ಕಬ್ಬನ್ ಉದ್ಯಾನ, ಇಂದಿರಾಗಾಂಧಿ ಕಾರಂಜಿ, ನೆಹರೂ ತಾರಾಲಯ, ವಿಧಾನಸೌಧ ಭಾಗಗಳಿಂದ ಬೆಕ್ಕುಗಳು ಬಂದಿರುವ ಕುರಿತು ಅಧಿಕಾರಿಗಳು ಮಾಹಿತಿ ನೀಡಿದ್ದರು.












Click it and Unblock the Notifications