ಕಿತ್ತೂರಿನಲ್ಲಿ ಅಭ್ಯರ್ಥಿ ಯಾರು?: ಮುಖಂಡರ ಬೆಂಬಲಿಗರ ಪ್ರತಿಭಟನೆ
ಬೆಳಗಾವಿ, ಏಪ್ರಿಲ್ 16: ವಿಧಾನಸಭೆ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿರುವ ಕಾಂಗ್ರೆಸ್, ಇನ್ನೂ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಬಹಿರಂಗಪಡಿಸಿಲ್ಲ. ಅದರಲ್ಲಿ ಬೆಳಗಾವಿ ಜಿಲ್ಲೆಯ ಕಿತ್ತೂರು ಕ್ಷೇತ್ರವೂ ಒಂದು.
ಕ್ಷೇತ್ರ ಪರಿಚಯ: ಬೆಳಗಾವಿ ಉತ್ತರದ ಗದ್ದುಗೆ ಯಾರ ಪಾಲಿಗೆ?
ಕಿತ್ತೂರು ಕ್ಷೇತ್ರದ ಅಭ್ಯರ್ಥಿಯ ಹೆಸರು ಇನ್ನೂ ಬಹಿರಂಗವಾಗಿಲ್ಲ. ಅದಕ್ಕೂ ಮುನ್ನವೇ ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವಣ ಕದನ ತಾರಕಕ್ಕೇರಿದೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿಗಳಾದ ಡಿ.ಬಿ. ಇನಾಮದಾರ್ ಮತ್ತು ಬಾಬಾ ಸಾಹೇಬ್ ಪಾಟೀಲರ ಬಣಗಳ ನಡುವೆ ಕಿತ್ತಾಟ ಆರಂಭವಾಗಿದೆ. ತಮ್ಮ ನಾಯಕರಿಗೇ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ಇಬ್ಬರೂ ನಾಯಕರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ.
ಡಿ.ಬಿ. ಇನಾಮದಾರ್ ಅವರಿಗೇ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಕೋಟೆ ಮುಂಭಾಗದಲ್ಲಿರುವ ಅರಳಿಕಟ್ಟೆ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಅದಕ್ಕೆ ಪ್ರತಿಯಾಗಿ ಬಾಬಾ ಸಾಹೇಬ್ ಪಾಟೀಲ್ ಅವರ ಅಭಿಮಾನಿಗಳು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಟಿಕೆಟ್ ನೀಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಉಭಯ ಬಣಗಳು ಎಚ್ಚರಿಕೆ ನೀಡಿವೆ.
ಬಾಬಾಸಾಹೇಬ್ ಅವರಿಗೆ ಟಿಕೇಟ್ ಕೈ ತಪ್ಪಿದರೆ, ಪಕ್ಷದ ಸದಸ್ಯತ್ವ ಸ್ಥಾನಕ್ಕೆ ಸಾಮೂಹಿಕವಾಗಿ ರಾಜಿನಾಮೆ ನೀಡುವುದಾಗಿ ಬೆಂಬಲಿಗರು ಬೆದರಿಕೆ ಒಡ್ಡಿದ್ದಾರೆ. ತಮ್ಮ ನಾಯಕರಿಗೆ ಟಿಕೆಟ್ ನೀಡದಿದ್ದರೆ ವಿಷಯ ಕುಡಿಯುವುದಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಮುದುಕಪ್ಪ ಮರಡಿ ಹೈಕಮಾಂಡ್ಗೆ ಎಚ್ಚರಿಕೆ ನೀಡಿದ್ದಾರೆ.