ಅನಂತಕುಮಾರ್ ಕಚೇರಿಯನ್ನು ಉಳಿಸಿಕೊಂಡ್ರು!
ಬೆಂಗಳೂರು, ಮೇ 16: ಸರಿಯಾಗಿ ಒಂದು ಮಾಸದ ಹಿಂದೆ ಹೆಬ್ಬೆಟ್ಟಿನ ಮೇಲೆ ಹಾಕಿಸಿಕೊಂಡ ಮತದಾನ ಗುರುತಿನ ಶಾಯಿ ಮಾರ್ಕು ಇನ್ನೂ ಮಾಸಿಲ್ಲ. ಫಲಿತಾಂಶದ ದಿನ ಬಂದೇ ಬಿಟ್ಟಿದೆ. ಇನ್ನೇನು ಸ್ವಲ್ಪವೇ ಹೊತ್ತಿನಲ್ಲಿ ಫಲಿತಾಂಶಗಳ ಮಹಾಪೂರ ಹರಿದುಬರಲಿದೆ.
ನಿಲೇಕಣಿಗೆ ಲಕ್ಷ ಲಕ್ಷ ಮತಗಳ ಅಂತರದ ಸೋಲು: ಈ ಮಧ್ಯೆ... ತಾಜಾ ಫಲಿತಾಂಶಗಳ ಪ್ರಕಾರ ಅನಂತಕುಮಾರ್ ಕಚೇರಿಯನ್ನು ಉಳಿಸಿಕೊಂಡಿದ್ದು, ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅನಂತಕುಮಾರ್ ಈ ಕಚೇರಿಯನ್ನು (ಕೆಳಗಿನ ಚಿತ್ರ ನೋಡಿ) ಉಳಿಸಿಕೊಳ್ಳುತ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸಾಂದರ್ಭಿಕವಾಗಿ ಹೇಳಬೇಕೆಂದರೆ ಅನಂತಕುಮಾರ್ ಅವರು ಪ್ರತಿನಿಧಿಸುತ್ತಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರ ಕಚೇರಿಯು ನಿಮ್ಮ ದಟ್ಸ್ ಕನ್ನಡ ಕಚೇರಿಯಿಂದ ಕೂಗಳೆತೆಯ ದೂರದಲ್ಲಿದೆ. ಹಾಗಾಗಿ ಕ್ಷೇತ್ರದ ಫಲಿತಾಂಶದ ಬಗ್ಗೆ ನಾವೂ ಸಹ ಕುತೂಹಲಿಗಳಾಗಿದ್ದೇವೆ.
ನಿನ್ನೆ ಸಂಜೆ ಅನಂತಕುಮಾರ್ ಅವರ ಕಚೇರಿಯ ಮುಂದೆ ಹಾದುಹೋಗುವಾಗ ಈ ಬೋರ್ಡ್ ಕಣ್ಣಿಗೆ ಬಿತ್ತು. ಅದನ್ನು ಕ್ಲಿಕ್ಕಿಸಿ, ನಮ್ಮ ಓದುಗರಿಗಾಗಿ ಇಲ್ಲಿ ನೀಡಲಾಗಿದೆ. ಕ್ಷೇತ್ರದ ಫಲಿತಾಂಶದ ಬಗ್ಗೆ ಹೆಚ್ಚು ಕುತೂಹಲ ಏಕೆಂದರೆ ಇದು ಕರ್ನಾಟಕದಲ್ಲಿ ಹೆಚ್ಚು ಪ್ರತಿಷ್ಠಿತ ಕ್ಷೇತ್ರವಾಗಿ ಪರಿಗಣನೆಯಾಗಿದೆ.
ಮುಖ್ಯವಾಗಿ ಈ ಬಾರಿ ಇನ್ಫೋಸಿಸ್ ಕಂಪನಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಅವರು ಕಣದಲ್ಲಿರುವುದರಿಂದ ಸ್ಪರ್ಧೆಗೆ ಹೆಚ್ಚು ಮೆರಗು/ಮಹತ್ವ ಬಂದಿದೆ. ಆರನೇ ಬಾರಿಗೆ ಗೆಲ್ಲಲು ಹೊರಟಿರುವ ಅನಂತಕುಮಾರ್ ಇಂದು ಡಬಲ್ ಹ್ಯಾಟ್ರಿಕ್ ಬಾರಿಸುತ್ತಾರಾ? ಅಥವಾ ನಂದನ್ ನಿಲೇಕಣಿ ಅನಂತ್ ರನ್ನು ಮಣಿಸುತ್ತಾರಾ?
ಏನೇ ಆಗಲಿ ಬೋರ್ಡ್ ಗೆ ಅಂಟಿಸಿರುವ ಪೇಪರ್ ಮುಖವಾಡ ಇಂದು ಕಳಚಿಬಿದ್ದು, ಕ್ಷೇತ್ರದ ಸಂಸದರು ಯಾರು ಎಂಬುದು ಅನಾವರಣಗೊಳ್ಳಲಿದೆ. ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ (ಚುನಾವಣಾ ಫಲಿತಾಂಶ ವೀಕ್ಷಣೆಗೆ ಸುಸ್ವಾಗತ)