ಮುದ್ದು ಮಕ್ಕಳ ರೂಪದಲ್ಲಿ ಅವತರಿಸಿದ್ದಾನೆ ಬೆಣ್ಣೆಕೃಷ್ಣ
ಬೆಂಗಳೂರು, ಆ. 28 : ಮುಖಕ್ಕೆ ತಿಳಿ ನೀಲಿ ಬಣ್ಣ, ಅರಳಿದ ಕಂಗಳಿಗೆ ಕಪ್ಪು ಕಾಡಿಗೆ, ತೀಡಿದ ಹುಬ್ಬು, ತುಟಿಗೆ ರಬ್ಬಾರುಬ್ಬಿ ಲಿಪ್ ಸ್ಟಿಕ್ಕು, ಹಣೆಯ ಮೇಲೆ ನಾಮ, ತಲೆಯ ಮೇಲೊಂದು ಕಿರೀಟ, ಅದಕ್ಕೆ ಸಿಕ್ಕಿಸಿದ ನವಿಲುಗರಿ, ಕೈಯಲ್ಲೊಂದು ಬಣ್ಣದ ಕಾಗದ ಸುತ್ತಿದ ಕೊಳಲು, ಪಕ್ಕದಲ್ಲೊಬ್ಬಳು ಗಡಿಗೆ ಹಿಡಿದುಕೊಂಡ ರಾಧೆ!
ಭಾರತ ದೇಶದಲ್ಲಿ ಏಲ್ಲೇ ನೋಡಿರಿ ಎಲ್ಲೆಲ್ಲೂ ಇದೇ ದೃಶ್ಯ. ಅಮ್ಮಂದಿರ ಕಲ್ಪನೆಯಲ್ಲಿ ಮೂಡಿಬಂದ ಮುದ್ದು ಪುಟಾಣಿ ಬೆಣ್ಣೆ ಕೃಷ್ಣ. ಯಶೋಧೆ ಲಾಲಿಸಿದ ಬಾಲಕೃಷ್ಣನೂ ಹೀಗೇ ಇದ್ದನೇನೋ? ಈ ಮುದ್ದುಮುಖಗಳನ್ನು ನೋಡಿದರೆ ಏನೋ ಆನಂದ. ಅಂತೂ ದೇಶದಲ್ಲೆಲ್ಲ ಕೃಷ್ಣ ಬಾಲಕನಾಗಿ ಕೃಷ್ಣ ಜನ್ಮಾಷ್ಟಮಿಯ ದಿನ ಅವತರಿಸಿದ್ದಾನೆ. ಕೋಟ್ಯಾನುಕೋಟಿ ಜನರ ಸಂತಸಕ್ಕೆ ಕಾರಣನಾಗಿದ್ದಾನೆ.
ಕರ್ನಾಟಕದಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮನೆಮಾಡಿದೆ. ಮನೆಮನೆಗಳಲ್ಲಿ, ದೇವದೇವಸ್ಥಾನಗಳಲ್ಲಿ, ಉಡುಪಿ ಕೃಷ್ಣಮಠದಲ್ಲಿ, ಬೆಂಗಳೂರಿನ ಇಸ್ಕಾನ್ ನಲ್ಲಿ ಬುಧವಾರ ರಾತ್ರಿ ಹನ್ನೆರಡು ಗಂಟೆಗೆ ಬಾಲಕೃಷ್ಣನಿಗೆ ವಿಶೇಷ ಪೂಜೆ ಸಲ್ಲಲಿದೆ. ಇಡೀ ದಿನ ಉಪವಾಸವಿದ್ದು, ಹನ್ನೆರಡು ಗಂಟೆಗೆ ಹಾಲುನೀರು ತರ್ಪಣ ಬಿಟ್ಟನಂತರವೇ ಫಲಾಹಾರ.
'ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಯದುಕುಲ ತಿಲಕನ' ಎಂಬ ಹಾಡನ್ನು ಹೆಂಗಳೆಯರೆಲ್ಲ ಹಾಡುತ್ತಿದ್ದರೆ, ಮಕ್ಕಳು ಶಾಲೆಗೆ ಚಕ್ಕರ್ ಹೊಡೆದು (ರಜಾ ಇವತ್ತು) ಕೃಷ್ಣನ ವೇಷ ತೊಟ್ಟು, ಬೆಣ್ಣೆ ಮೆಲ್ಲುತ್ತ ಮಜಾ ಉಡಾಯಿಸುತ್ತಿದ್ದಾರೆ. ಈ ವೇಷ ಎಲ್ಲ ಕಳಚಿಟ್ಟು ನಾಳೆ ಶಾಲೆಗೆ ಹೋಗೋಕೆ ಅವುಗಳಿಗೆಲ್ಲ ತುಂಬಾ ಬೋರು, ಏನ್ಮಾಡೋದು?
ದೇಶದ ಇತರ ನಗರಗಳಲ್ಲಿ ಜನ್ಮಾಷ್ಟಮಿ ಉತ್ಸವ ಹೇಗೆ ಸಾಗಿದೆ, ಮಕ್ಕಳೆಲ್ಲ ಯಾವ ರೀತಿ ಅಲಂಕರಿಸಿಕೊಂಡಿದ್ದಾರೆ, ಒಂದು ಸುತ್ತು ಹಾಕಿಕೊಂಡು ಬರೋಣ.
ಕೊಳಲು ಹೆಂಗೇ ಹಿಡಕೊಂಡ್ರೂ ನಾದ ಹೊಮ್ಮತ್ತೆ
ಬೆಂಗಳೂರಿನಲ್ಲಿ ಅಪಾರ್ಟ್ಮೆಂಟೊಂದರಲ್ಲಿ ನಡೆದ ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಕೃಷ್ಣವೇಷಧಾರಿಯಾಗಿ ನಿಂತ ಬಾಲಕರಿಬ್ಬರು.
ಹೆಂಗ್ ಕಾಣಾಕತ್ತೇನ್ರೀ, ಹೆಂಗೈತ್ರಿ ಪೋಜು
ಹುಬ್ಬಳ್ಳಿ ಹುಡುಗೂರ ರಾಧಾಕೃಷ್ಣನ ಆಟಾ ನೋಡ್ರಿ. ಕೃಷ್ಣ ಜನ್ಮಾಷ್ಟಮಿಯಂದು ಅಲಂಕಾರ ಮಾಡಿಕೊಂಡು ನಿಂತ ಪುಟಾಣಿಗಳು.
ಗುವಾಹಾಟಿಯಲ್ಲಿ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್
ಗುವಾಹಾಟಿಯಲ್ಲಿ ಬುಧವಾರ ನಡೆದ ಫ್ಯಾನ್ಸಿ ಡ್ರೆಸ್ ಕಾಂಪಿಟಿಷನ್ ನಲ್ಲಿ ಕೃಷ್ಣನ ವೇಷ ಧರಿಸಿ ಸಾಲಾಗಿ ನಿಂತ ಮಕ್ಕಳು.
ಕೊಳಲು ಊದೋ ಅಂದ್ರೆ ಕಚ್ತೀಯಾ
ರಾಜಸ್ತಾನದ ಬಿಕನೇರ್ ನಲ್ಲಿ ಕೃಷ್ಣನ ವೇಷ ತೊಟ್ಟು ನಿಂತ ಮುದ್ದುಮರಿ. ಅಮ್ಮಂದಿರು ಮನೆಗೆ ಹೋಗಿ ಈ ಮಕ್ಕಳ ದೃಷ್ಟಿ ತೆಗೆಯಬೇಕು.
ಬೆಣ್ಣೆಗಾಗಿ ಕೃಷ್ಣಂದಿರ ಸ್ಪರ್ಧೆ
ಏನೇ ವೇಷ ಹಾಕಿ ಮಕ್ಕಳು ಮುದ್ದುಮುದ್ದಾಗೇ ಕಾಣ್ತಾವೆ. ಅದರಲ್ಲೂ ಕೃಷ್ಣನ ವೇಷ ಅಂದ್ರೆ ಕೇಳಬೇಕಾ. ಇಲ್ಲಿ ನೋಡಿ ಉತ್ತರಪ್ರದೇಶದ ಮೋರಾದಾಬಾದ್ ನಲ್ಲಿ ಬೆಣ್ಣೆ ತಿನ್ನಲು ಸ್ಪರ್ಧೆಗಿಳಿದಿರುವ ಮಕ್ಕಳು.
ಗೋಪಾಲ ಮತ್ತು ಗೋಪಿಕಾ ಸ್ತ್ರೀಯರು
ಕೃಷ್ಣ ಕೊಳಲ ನಾದಕ್ಕೆ ತಲೆದೂಗಿ ಗೋವುಗಳೆಲ್ಲ ಓಡೋಡಿ ಬರುತ್ತಿದ್ದವಂತೆ. ರಾಜಸ್ತಾನದ ಜೋಧಪುರದಲ್ಲಿ ಗೋಪಾಲ ಮತ್ತು ಗೋಪಿಕಾ ಸ್ತ್ರೀಯರ ವೇಷತೊಟ್ಟ ಮಕ್ಕಳು ಹಸುಗಳಿಗೆ ಹುಲ್ಲು ತಿನ್ನಿಸುತ್ತಿದ್ದಾರೆ.
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ
ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ ಅಂತ ಇನ್ನೂ ಮಾತಾಡಲು ಬಾರದ ಪುಟಾಣಿಯೊಂದು ಹಾಡುತ್ತಿರುವಂತಿದೆ. ನೇಪಾಳದಲ್ಲಿಯೂ ಕೃಷ್ಣ ಜನ್ಮಾಷ್ಟಮಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ.