ಮಣಿಪಾಲ್ ರೇಪ್: ಮೂವರು ಪಾತಕಿಗಳು ಇವರೇ
ಉಡುಪಿ, ಜೂನ್ 28: ಮಣಿಪಾಲದ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಅನುಮಾನಕ್ಕೆ ಎಡೆಯಿಲ್ಲದಂತೆ ಅಷ್ಟೂ ಪಾತಕಿಗಳನ್ನು (ಮೂವರು) ನಿಖರವಾಗಿ ಪತ್ತೆಹಚ್ಚಿ, ಬಂಧಿಸಿದ್ದಾರೆ. ಹಿರಿಯಡ್ಕ ಓಂತಿಬೆಟ್ಟಿನ ಯೋಗೇಶ್(30), ಹರಿಪ್ರಸಾದ ಪೂಜಾರಿ (27) ರಿಕ್ಷಾ ಚಾಲಕ, ಮೂರನೆಯ ಆರೋಪಿ ಬಡಗುಬೆಟ್ಟು ನಿವಾಸಿ ಆನಂದ (33) ಬಂಧಿತ ಆರೋಪಿಗಳು.
ಅಷ್ಟಕ್ಕೂ ಪಾತಕಿಗಳಿಗೆ ಗಾಳ ಬೀಸುವಲ್ಲಿ ನೆರವಾದವರು ಸ್ಥಳೀಯ ಕಾಂಗ್ರೆಸ್ ಮುಖಂಡ ಸುಖೇಶ್ ಕುಂದರ್. ಆರೋಪಿಗಳಲ್ಲಿ ಒಬ್ಬ ತಮ್ಮ ಪಕ್ಷದ ಕಾರ್ಯಕರ್ತ. ಪ್ರಕರಣದಲ್ಲಿ ಅವನೂ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ ಮೇಲೆ ಪೊಲೀಸರ ಸೂಚನೆಯಂತೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡರೂ ಅವನಿಗೆ ಜಾಮೀನು ಕೊಡಿಸುವುದಾಗಿ ಪುಸಲಾಯಿಸಿ ಅವನ್ನು ತಮ್ಮ ವ್ಯಾಪ್ತಿಗೆ ತೆಗೆದುಕೊಂಡ ಪೊಲೀಸರು ಅವನನ್ನು ಬಂಧಿಸಿದರು.
ಪ್ರಕರಣದ details ಇಲ್ಲಿದೆ:
ಪ್ರಕರಣದಲ್ಲಿ 3 ಮಂದಿ ಭಾಗಿಗಳಾಗಿದ್ದು, ಅತ್ಯಾಚಾರಕ್ಕೆ ಮೊದಲು ವಿದ್ಯಾರ್ಥಿನಿಯ ಅಪಹರಣಕ್ಕೆ ಆಟೋ ಬಳಸಲಾಗಿದೆ ಎಂಬ 2 ಮಾಹಿತಿಗಳನ್ನು ಬಿಟ್ಟರೆ ಪೊಲೀಸರಿಗೆ ಬೇರೆ ಯಾವುದೇ ಮಾಹಿತಿ/ಸುಳಿವು ಇರಲಿಲ್ಲ.
ಸ್ಥಳೀಯ ಪೊಲೀಸರಿಗೆ ಮೊದಲ 3 ದಿನ ತನಿಖೆಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲಿಕ್ಕಾಗಿರಲಿಲ್ಲ. ಆದರೆ, 4ನೇ ದಿನ ಮಣಿಪಾಲ ಠಾಣೆಯ ರೌಡಿ ಶೀಟರುಗಳನ್ನು ಎಬ್ಬಿಸಿ ಕರೆತಂದು ವಿಚಾರಣೆ ನಡೆಸಿದರು. ಆದರೆ, ಒಬ್ಬ ರೌಡಿಶೀಟರ್ ಆಮ್ಲೆಟ್ ಯೋಗೀಶ ಮಾತ್ರ ಸಿಗಲಿಲ್ಲ. ಫೋನ್ ಕರೆಗಳನ್ನೂ ಸ್ವೀಕರಿಸುತ್ತಿರಲಿಲ್ಲ. ಇದು ಪೊಲೀಸರಿಗೆ ಅಸಹಜ ಅನ್ನಿಸತೊಡಗಿತು.
ಮುಂದೆ ಪೊಲೀಸರು ಮೊಬೈಲ್ ಟವರ್ ನೆರವಿಗೆ ಮೊರೆಹೋದರು. ಅದರಿಂದ ಯೋಗೀಶ ಮೈಸೂರಿನಲ್ಲಿರುವುದು ಪತ್ತೆಯಾಯಿತು. ಅವನ ಫೋನ್ ಕಾಲ್ ಪಟ್ಟಿ ತೆಗೆದು ನೋಡಿದಾಗ ಕಾಂಗ್ರೆಸ್ ಕಾರ್ಯಕರ್ತ ಸುಖೇಶ್ ಕುಂದರ್ ಗೆ ಅವನು ತಿಳಿದವನು ಎಂಬುದು ತಿಳಿದುಬಂತು. ತಕ್ಷಣ ಪೊಲೀಸರು ಸುಖೇಶ್ ಅವರ ಸಹಾಯ ಕೋರಿದರು.
ಸುಖೇಶ್ ಅವರಿಂದ ಯೋಗೀಶನಿಗೆ ಕರೆ ಮಾಡಿಸಿದರು. ಯೋಗೀಶ ಫೋನಿನಲ್ಲಿ ಅದೂ ಇದೂ ಮಾತನಾಡುತ್ತಾ ಇರುವಾಗ ಸುಖೇಶ್ ನೇರವಾಗಿ ವೈದ್ಯಕೀಯ ವಿದ್ಯಾರ್ಥಿಯ ಗ್ಯಾಂಗ್ ರೇಪ್ ಅನ್ನು ಪ್ರಸ್ತಾಪಿಸಿದ್ದಾರೆ. 'ಏನಾದರೂ ಗೊತ್ತಿದ್ದರೆ ಹೇಳು, ನಮ್ಮದೇ ಸರ್ಕಾರವಿದೆ. ಸೇಫ್ ಮಾಡೋಣ' ಎಂದೆಲ್ಲಾ ಭರವಸೆ ನೀಡಿ ಅವನನ್ನು ತುಂಬು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರ ಉಪಾಯ ಆಗ ಫಲಿತಸತೊಡಗಿದೆ. ಅಪರಾಧಿ ಮನೋಭಾವದಿಂದ ನರಳುತ್ತಿದ್ದ ಯೋಗೀಶ, ಸಾರ್ ಹೀಗೆ ಹೀಗೆ ನಾವೇ ಆ ಕೃತ್ಯವೆಸಗಿದ್ದು ಎಂದು ಸುಖೇಶ್ ಅವರ ಮುಂದೆ ಅಲವತ್ತುಕೊಂಡಿದ್ದಾನೆ. ರಾಜಕೀಯ ಬಣ್ಣ ಪಡೆದು ಪ್ರಕರಣ ನಾನಾ ದಿಕ್ಕುಗಳಿಂದ ಒತ್ತಡಕ್ಕೆ ಒಳಗಾಗಿದ್ದ ಪೊಲೀಸರು ಆಗ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ.
ಮುಂದ!?: ನಿನ್ನೆ ಗುರುವಾರ ಮುಂಜಾನೆ ಊರಿಗೆ ಬಂದ ಯೋಗೀಶ ಸೀದಾ ಮನೆಗೆ ಹೋಗಿದ್ದಾನೆ. ಅವನ ಅಣ್ಣನನ್ನು ಪೊಲೀಸರು ಹಿಂದಿನ ದಿನವೇ ಠಾಣೆಗೆ ಕರೆದೊಯ್ದಿರುವುದು ಯೋಗೀಶನಿಗೆ ಗಮನಕ್ಕೆ ಬಂದಿದೆ. ಅಲ್ಲಿಗೆ ತಾನು ಪೊಲೀಸರ ಬಲೆಗೆ ಬಿದ್ದಿದ್ದೇನೆ ಎನ್ನುವುದು ಅವನಿಗೆ ಖಚಿತವಾಗಿದೆ.
ಇನ್ನು ತನಗೆ ಉಳಿಗಾಲ ಇಲ್ಲ ಎಂದು ಯೋಗೀಶ್ ಮನೆಯ ಹಿಂಬದಿಯ ಗುಡ್ಡದಲ್ಲಿ ಕೀಟನಾಶಕ ಕುಡಿದು, ಸುಖೇಶ್ ಕುಂದರ್ ಅವರಿಗೊಂದು, ಐಜಿಪಿ ಪ್ರತಾಪ್ ರೆಡ್ಡಿ ಅವರಿಗೊಂದು ಕಾಲ್ ಮಾಡಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ತಕ್ಷಣ ಅವನನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು.
ಆತನ ಫೋನ್ ಕಾಲ್ details ಅನ್ನು study ಮಾಡಿದಾಗ ಪೊಲೀಸರಿಗೆ ಇತರ ಇಬ್ಬರು ಆರೋಪಿಗಳ ಬಗ್ಗೆ ಖಚಿತ ಸುಳಿವು ಸಿಕ್ಕಿದೆ. ಜತೆಗೆ ಆ ವೇಳೆಗೆ ಯೋಗೀಶನು ತನ್ನ ಇಬ್ಬರು ಸಹಚರರ ಬಗ್ಗೆ ಮಾಹಿತಿ ಮುಟ್ಟಿಸಿದ್ದ. ಆರು ದಿನಗಳ ಕಾಲ ಹಗಲು ರಾತ್ರಿ ಎನ್ನದೇ ಇಲಾಖೆಯ ಪ್ರತಿಷ್ಠೆಯನ್ನು ಪಣವಾಗಿಟ್ಟುಕೊಂಡು ತನಿಖೆ ನಡೆಸಿ, ಯಶಸ್ವಿಯಾದ ಸ್ಥಳೀಯ ಪೊಲೀಸರಿಗೆ ಒಂದು ಹ್ಯಾಟ್ಸ್ ಆಫ್ ಹೇಳೋಣ.
ಪ್ರಕರಣದ ಸಾದ್ಯಂತ ಮಾಹಿತಿ... ಘಟನೆಯನ್ನು ಪೊಲೀಸರು 'ಕುಡಿತದ ಪ್ರಭಾವ, ಕ್ರೈಮ್ ಬೈ ಚಾನ್ಸ್' ಎಂದು ವ್ಯಾಖ್ಯಾನಿಸಿದ್ದಾರೆ.