ಜೆಡಿಎಸ್ ಜತೆಗೂಡಿ ಬಿಜೆಪಿ ಹೊಸ ಸರಕಾರ: ಜೋಶಿ
ಹುಬ್ಬಳ್ಳಿ, ಮೇ 7: ವಿಧಾನಸಭೆ ಚುನಾವಣೆಯ ಫಲಿತಾಂಶ ಏನೆಂಬುದು ಬಿಜೆಪಿಗೆ ಗೋಡೆಬರಹದಂತೆ ಸ್ಪಷ್ಟವಾಗಿ ಕಣ್ಣಿಗೆ ಚುಚ್ಚುವಂತಿದೆ. ಹಾಗಾಗಿ, ಚುನಾವಣೆಗೂ ಮುನ್ನ ಬೀಗುತ್ತಿದ್ದ ಬಿಜೆಪಿ ಈಗ ಚುನಾವಣೆ ಮುಗಿದು, ಫಲಿತಾಂಶಕ್ಕೆ ಕಾಯುತ್ತಿರುವ ಸಂದರ್ಭದಲ್ಲಿ ಬೇರೆಯದೇ ರಾಗ ಹಾಡುತ್ತಿದೆ.
ಅದೂ ಚುನಾವಣೆ ಕಾಲದಲ್ಲಿ ಬಿಜೆಪಿ ಸಾರಥ್ಯ ವಹಿಸಿದ್ದ ಪ್ರಹ್ಲಾದ್ ಜೋಶಿ ಅವರು ಹೊಸ ರಾಗ ಕಟ್ಟಿ, ಹಾಡಿದ್ದಾರೆ. ಯಾವ ಪಕ್ಷಕ್ಕೂ ಬಹುಮತ ದೊರೆಯದಿದ್ದರೆ ಮೈತ್ರಿ ಸರಕಾರ ರಚನೆ ಅನಿವಾರ್ಯವಾಗಲಿದೆ. ಆಗ ತಮ್ಮ ಪಕ್ಷವೂ ಆ ಅವಕಾಶವನ್ನು ಬಳಸಿಕೊಳ್ಳಲಿದೆ. ಹಾಗಾದಲ್ಲಿ ಜೆಡಿಎಸ್ ಜತೆಗೂಡಿ ಸರಕಾರ ರಚನೆಗೆ ಸಿದ್ಧ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಜೋಷಿ ಹೇಳಿದ್ದಾರೆ.

ಫಲಿತಾಂಶದ ಬಳಿಕ ಪಕ್ಷದ ಹಿರಿಯ ಮುಖಂಡರ ಜತೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಇದೇ ವೇಳೆ, ಇನ್ನೂ ಫಲಿತಾಂಶ ಬಾರದಿರುವುದರಿಂದ ಮೈತ್ರಿ ಸರಕಾರದ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಆದರೆ ಜೆಡಿಎಸ್ ಪಕ್ಷದ ಅಪ್ಪ-ಮಕ್ಕಳು ಇದರ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮೇ 8ರಂದು ಫಲಿತಾಂಶ ಪ್ರಕಟವಾಗಲಿದೆ. ಆಗ ನಮ್ಮ ಪಕ್ಷಕ್ಕೆ ಜನ ನೀಡಿರುವ ಬೆಂಬಲ ಗೊತ್ತಾಗುತ್ತದೆ. ಒಂದು ವೇಳೆ ಯಾವ ಪಕ್ಷಕ್ಕೂ ಜನ ಬಹುಮತ ನೀಡದಿದ್ದರೆ ಆಗ ಮೈತ್ರಿ ಸರಕಾರ ರಚನೆ ಸಾಧ್ಯವಾಗಬಹುದು ಎಂದು ಪ್ರಹ್ಲಾದ್ ಜೋಷಿ ಮಾರ್ಮಿಕವಾಗಿ ಹೇಳಿದ್ದಾರೆ.
ಈ ಮಧ್ಯೆ, ಮೊನ್ನೆ ಮತದಾನ ಮುಗಿಯುತ್ತಿದ್ದಂತೆ ಪ್ರಹ್ಲಾದ್ ಜೋಶಿ ಅವರು ದೆಹಲಿಗೆ ದೌಡಾಯಿಸಿದ್ದಾರೆ. ಸೋಮವಾರ ಸಂಸತ್ ಕಲಾಪದಲ್ಲಿ ಭಾಗವಹಿಸಿದ ಜೋಶಿ, ನಂತರ ಪಕ್ಷದ ವರಿಷ್ಠರ ಜತೆ ಕರ್ನಾಟಕ ಚುನಾವಣೆ/ ಫಲಿತಾಂಶದ ಕುರಿತು ಚರ್ಚೆಯಲ್ಲಿ ತೊಡಗಿದರು.
ಇನ್ನು, ಪಕ್ಷದ ಮತ್ತೊಬ್ಬ ಸಾರಥಿ ಜಗದೀಶ್ ಶೆಟ್ಟರ್ ಅವರು ಚುನಾವಣಾ ಫಲಿತಾಂಶದ ಬಗ್ಗೆ ಹತಾಶೆಗೊಂಡವರಂತೆ ಕಂಡುಬಂದಿದ್ದು, ವಿಶ್ರಾಂತಿಗಾಗಿ ಸಂಸಾರ ಸಮೇತ ಹೈದರಾಬಾದಿಗೆ ತೆರಳಿದ್ದಾರೆ. ಇಂದು ಸಂಜೆ ಬೆಂಗಳೂರಿಗೆ ವಾಪಸಾಗಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications