ಮಹಾಸಮರ : ಪರನಿಂದೆ ಮತ್ತು ಆತ್ಮ ಪ್ರಶಂಸೆ

ರಾಜ್ಯದ ಪ್ರಜ್ಞಾವಂತ ನಾಗರೀಕರು ರಾಜಕಾರಣಿಗಳ ಈ ವರ್ತನೆಯನ್ನು ಪಿಎನ್ ಪಿ (ಪರನಿಂದನೆ ಮತ್ತು ಆತ್ಮ ಪ್ರಶಂಸೆ) ಎಂದು ಕರೆಯುತ್ತಾರೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೋನಿಯಾ ಮತ್ತು ರಾಹುಲ್ ಗಾಂಧಿ ಪ್ರಚಾರದಿಂದ ಕಾಂಗ್ರೆಸ್ ಗೆ ಲಾಭವಾಗುವುದಿಲ್ಲ. ಜನರು ಇವರ ಮಾತು ಕೇಳಿ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಸೋಮವಾರ ವಾಕ್ ಸಮರ ಸಾರಿದ್ದಾರೆ.
ಕಾಂಗ್ರೆಸ್ ಡಬಲ್ ಗೇಮ್ : ಕರ್ನಾಟಕ ಅಭಿವೃದ್ಧಿಯಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ದೆಹಲಿಯಲ್ಲಿ ನಮ್ಮನ್ನು ಸನ್ಮಾನಿಸುವ ಕೇಂದ್ರ ಸರ್ಕಾರದ ನಾಯಕರು, ರಾಜ್ಯಕ್ಕೆ ಬಂದರೆ, ನಾವು ಭ್ರಷ್ಟಾಚಾರ ಮಾಡುತ್ತಿದ್ದೇವೆ ಎಂದು ಟೀಕಿಸುತ್ತಿದ್ದಾರೆ. ಕೇಂದ್ರ ನಾಯಕರ ಇಂತಹ ವರ್ತನೆಯಿಂದ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತಿದೆ ಎಂದು ಸಿಎಂ ಜಗದೀಶ್ ಶೆಟ್ಟರ್ ಗುಡುಗಿದ್ದಾರೆ.
ಚಿರಂಜೀವಿಗೆ ಯಾರು ಮತಹಾಕುತ್ತಾರೆ : ತಮ್ಮ ರಾಜ್ಯದಲ್ಲೇ ಸ್ವಂತ ಪಕ್ಷ ಅಧಿಕಾರಕ್ಕೆ ತರಲು ಸಾಧ್ಯವಾಗದ ನಟ ಚಿರಂಜೀವಿ ರಾಜ್ಯದಲ್ಲಿ ಮತ ಕೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ಜನರು ಅವರನ್ನು ನೋಡಲು ಹೋಗುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವುದಿಲ್ಲ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಸಿಎಂ ಬದಲಾವಣೆ ಮಾಡಲು ಕಾರಣವಿದೆ : ರಾಜ್ಯದಲ್ಲಿ ಮೂವರು ಸಿಎಂಗಳನ್ನು ಬದಲಾವಣೆ ಮಾಡಲು ಪ್ರಬಲವಾದ ಕಾರಣಗಳಿತ್ತು. ಸಿಎಂಗಳ ಬದಲಾವಣೆ ಮಾಡಿದ್ದು ನನಗೂ ನೋವು ತಂದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ. ಖಾನಾಪುರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಮತ್ತು ಸದಾನಂದಗೌಡರು ಉತ್ತಮ ಆಡಳಿತ ನಡೆಸಿದ್ದಾರೆ ಎಂದು ಹೇಳಿದರು.
ಈಶ್ವರಪ್ಪ ಕಡತ ಕಾನೂನು ಇಲಾಖೆಗೆ : ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣದ ಕುರಿತ ಕಡತವನ್ನು ಕಾನೂನು ಇಲಾಖೆಗೆ ಕಳುಹಿಸಲಾಗಿದೆ. ಇಲಾಖೆಯ ಶಿಫಾರಸ್ಸಿನಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. (ಈಶ್ವರಪ್ಪ ವಿರುದ್ಧ ತನಿಖೆಗೆ ಅಸ್ತು ಎಂದ ರಾಜ್ಯಪಾಲರು )
ಬಿಜೆಪಿ ಶುದ್ಧವಾಗಿದೆ : ಬಿಜೆಪಿಯಲ್ಲಿದ್ದ ಭ್ರಷ್ಟರೆಲ್ಲಾ ತೊಲಗಿ ಪಕ್ಷ ಪರಿಶುದ್ದವಾಗಿದೆ. ಜನರು ಮತ್ತೊಮ್ಮೆ ಮತ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿ ತೋರಿಸುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ರಾಜ್ಯದ ಜನರಿಗೆ ಭರವಸೆ ನೀಡಿದ್ದಾರೆ. ಬೀದರ್, ಗದಗ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು ಯಡಿಯೂರಪ್ಪ ವಿರುದ್ಧ ಮತ್ತೊಮ್ಮೆ ಪರೋಕ್ಷ ವಾಗ್ದಾಳಿ ನಡೆಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications