ಮಲ್ಲೇಶ್ವರಂ ಸ್ಪೋಟ ಇಬ್ಬರು ಶಂಕಿತರ ಬಂಧನ
ಮಲ್ಲೇಶ್ವರಂನಲ್ಲಿ ಬಾಂಬ್ ಸ್ಪೋಟಗೊಂಡ ಬೈಕ್ ಅನ್ನು ಬಂಧಿತ ಮುರುಗನ್ ಮತ್ತು ಅನ್ವರ್ ಪಾಷ ಎಂಬುವವರಿಂದ ಖರೀದಿಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. ಇವರನ್ನು ಹೆಚ್ಚಿನ ವಿಚಾರಣೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ.
ಸ್ಫೋಟಕ್ಕೆ ಬಳಸಿದ ಸುಜುಕಿ ಬೈಕ್ ಅನ್ನು ಬಂಧಿತರು ಯಾರಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ವಿವರ ಸಂಗ್ರಹಿಸುತ್ತಿದ್ದಾರೆ. ಬೈಕ್ ತಮಿಳುನಾಡಿಗೆ ಸೇರಿದ್ದು ಎಂಬ ಮಾಹಿತಿಯ ಮೇರೆಗೆ ಅಲ್ಲಿಗೆ ತೆರಳಿದ್ದ ಪೊಲೀಸರ ಒಂದು ತಂಡ ಇಬ್ಬರನ್ನು ವಶಕ್ಕೆ ಪಡೆದಿದೆ.
ಪರಿಹಾರ : ಬಾಂಬ್ ಸ್ಪೋಟದಲ್ಲಿ ಗಾಯಗೊಂಡವರಿಗೆ ಸರ್ಕಾರ ಒಂದು ಲಕ್ಷ ರೂ. ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಗೃಹ ಸಚಿವ ಆರ್.ಅಶೋಕ ಗುರುವಾರ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಉನ್ನತಮಟ್ಟದ ಸಭೆ ನಡೆಸಿದ ಬಳಿಕ ಗಾಯಾಳುಗಳಿಗೆ ಪರಿಹಾರ ಪ್ರಕಟಿಸಿದರು.
ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಕುಮ್ ಪಚಾವೋ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಬಿಪಿನ್ ಗೋಪಾಲಕೃಷ್ಣ, ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್, ಗುಪ್ತದಳದ ಐಜಿಪಿ ಗೋಪಾಲ್ ಬಿ.ಹೊಸೂರ್, ಜಂಟಿ ಪೊಲೀಸ್ ಆಯುಕ್ತ ಪ್ರಣವ್ ಮೊಹಾಂತಿ ಮುಂತಾದವರು ಭಾಗವಹಿಸಿದ್ದರು.
ಉಗ್ರರ ಕೈವಾಡ ಶಂಕೆ : ಬಾಂಬ್ ಸ್ಪೋಟ ಪ್ರಕರಣದಲ್ಲಿ ಉಗ್ರರ ಕೈವಾಡ ಇರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಈ ಬಗ್ಗೆ ತನಿಖೆ ನಡೆಸಲು ಬೆಂಗಳೂರು ಭಯೋತ್ಪಾದಕ ನಿಗ್ರಹ ದಳವೂ ಸೇರಿದಂತೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಎರಡು ಪ್ರತ್ಯೇಕ ತನಿಖಾ ತಂಡ ರಚಿಸಲಾಗಿದೆ ಎಂದು ಗೃಹ ಸಚಿವ ಅಶೋಕ್ ಹೇಳಿದ್ದಾರೆ.
ಪ್ರಕರಣದ ತನಿಖೆಗೆ ಕೇಂದ್ರೀಯ ತನಿಖಾ ದಳ (ಎನ್ಐಎ) ಸಹಕರಿಸುತ್ತಿದೆ. ಹೈದರಾಬಾದ್ನಲ್ಲಿ ನಡೆದ ಸ್ಫೋಟಕ್ಕೂ,ಈ ಪ್ರಕರಣಕ್ಕೂ ಸಾಕಷ್ಟು ಸಾಮ್ಯತೆ ಇದೆ. ಯಾವ ಸಂಘಟನೆ ಈ ಕೃತ್ಯ ಎಸಗಿದೆ ಎಂಬುದನ್ನು ತನಿಖೆ ನಂತರ ಬಹಿರಂಗ ಪಡಿಸಲಾಗುವುದು ಎಂದರು.
ಸಿದ್ದು, ವಿಶ್ವನಾಥ್ ಬಂಧಿಸಿ : ಬಾಂಬ್ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಕೈವಾಡವಿದೆ ಎಂದು ಹೇಳಿಕೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಸಂಸದ ಹೆಚ್.ವಿಶ್ವನಾಥ್ ಅವರನ್ನು ಬಂಧಿಸುವಂತೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಚುನಾವಣೆ ಲಾಭಕ್ಕಾಗಿ ಇಂತಹ ಹೇಳಿಕೆ ನೀಡುವ ಕಾಂಗ್ರೆಸ್ ನಾಯಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ಮಲ್ಲೇಶ್ವರಂ ಸಹಜ ಸ್ಥಿತಿಗೆ : ಬಾಂಬ್ ಸ್ಪೋಟದ ನಂತರ ಜನರಿಲ್ಲದೇ ಖಾಲಿ ಹೊಡೆಯುತ್ತಿದ್ದ ಮಲ್ಲೇಶ್ವರಂನ ಸಂಪಿಗೆ ರಸ್ತೆ, ಮಂತ್ರಿ ಮಾಲ್ ಶ್ರುಕ್ರವಾರದಿಂದ ಸಹಜ ಸ್ಥಿತಿಗೆ ಮರಳಿದೆ. ಬಾಂಬ್ ಸ್ಪೋಟಿಸದ ಸ್ಥಳಕ್ಕೆ ಶುಕ್ರವಾರ ಸಹ ಹಲವಾರು ಜನ ಆಗಮಿಸಿ ಕುತೂಹಲದಿಂದ ವೀಕ್ಷಿಸಿದರು.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ