ಮತದಾನದ ಅವಧಿ ವಿಸ್ತರಿಸಿ ಸರ್ವಪಕ್ಷಗಳ ಒತ್ತಾಯ
ವಿಧಾನಸಭೆ ಚುನಾವಣೆ ಸಿದ್ಧತೆ ಪರಿಶೀಲನೆಗಾಗಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್.ಸಂಪತ್ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಸೋಮವಾರ ಸಂಜೆ ಅವರು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಮತದಾನದ ಅವಧಿ ಹಿಂದಿನಂತೆ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಇರುವುದೇ ಉತ್ತಮ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭಿಸುವ ಆಯೋಗದ ನಿರ್ಧಾರ ಹಿಂಪಡೆಯಬೇಕೆಂದು ಪಕ್ಷಗಳು ಒತ್ತಾಯಿಸಿದವು. ಮತದಾನದ ಸಮಯ ವಿಸ್ತರಿಸುವಂತೆ ಮನವಿ ಮಾಡಿದವು.
ಬಿಜೆಪಿ : ಸಚಿವರಾದ ಸಿ.ಟಿ.ರವಿ, ಸುರೇಶ್ ಕುಮಾರ್ ನೇತ್ವದ ತಂಡ ಚುನಾವಣಾ ಆಯುಕ್ತರೊಂದಿಗಿನ ಸಭೆಯಲ್ಲಿ ಕಾರ್ಯಕರ್ತರ ಮನೆ ಮೇಲೆ ಪಕ್ಷದ ಧ್ವಜ ಹಾರಿಸಲು ಅನುಮತಿ ನೀಡಬೇಕು, ಹೆಲಿಕಾಪ್ಟರ್ ಹಾರಾಟದ ಖರ್ಚನ್ನು ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಸೇರಿಸಬಾರದು ಎಂದು ಮನವಿ ಮಾಡಿದರು.
ಕಾಂಗ್ರೆಸ್ : ಆಯಾ ಜಿಲ್ಲೆಯ ಅಧಿಕಾರಿಗಳನ್ನು ಚುನಾವಣಾ ಅಧಿಕಾರಿಗಳಾಗಿ ನೇಮಿಸಬಾರದು ಮತ್ತು ಮತದಾನದ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಸಲ್ಲಿಸಿದರು.
ಜೆಡಿಎಸ್ : ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ನೇತೃತ್ವದ ಪಕ್ಷದ ಸದಸ್ಯರು ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಷೇಧಿಸಬೇಕು. ಪೊಲೀಸ್ ವಾಹನಗಳಲ್ಲಿ ಹಣ, ಹೆಂಡ ಸಾಗಿಸಲಾಗುತ್ತಿದೆ. ಆದ್ದರಿಂದ ಚೆಕ್ ಪೋಸ್ಟ್ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಇಂದು ನಿರ್ಧಾರ ಪ್ರಕಟ : ಮತದಾನದ ಸಮಯ ವಿಸ್ತರಿಸುವ ಕುರಿತು ಇಂದು ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ. ರಾಜ್ಯದ ಹವಮಾನ, ಮತದಾರರ ಲಭ್ಯತೆ ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಮತದಾನದ ಅವಧಿಯನ್ನು ವಿಸ್ತರಿಸುವ ನಿರ್ಧಾರ ಕೈಗೊಳ್ಳುವ ಸಂಭವವಿದೆ.
ಇಂದು ಸಂಜೆ ಮುಖ್ಯ ಕೇಂದ್ರ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿ ನಡೆಸುವ ಸಾಧ್ಯತೆ ಇದ್ದು, ಈ ವೇಳೆ ಮತದಾನದ ಸಮಯ ನಿಗದಿ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸಬಹುದು ಎಂಬ ನಿರೀಕ್ಷೆ ಇದೆ. ಚುನವಣಾ ಅಧಿಸೂಚನೆ ಪ್ರಕಟಗೊಳ್ಳಲು ಒಂದು ದಿನ ಬಾಕಿ ಉಳಿದಿದ್ದು, ಆಯೋಗ ಸರ್ವ ರೀತಿಯಲ್ಲಿ ಸಜ್ಜಾಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ