35,000 ಮರಗಳ ಜೀವ ಉಳಿಸಿದ ನ್ಯಾಯಪೀಠ
ಮರಗಳ ಸಾಮೂಹಿಕ ಹನನ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಆಧಾರಿಸಿ ಹೈಕೋರ್ಟ್ ನ್ಯಾಯಪೀಠ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಈ ಉದ್ದೇಶಿತ ಕಾರ್ಯಕ್ಕೆ ತಡೆಯಾಜ್ಞೆ ಹೊರಡಿಸಿದೆ.
ಸುಮಾರು 223 ಕಿ.ಮೀ ದೂರದ ರಾಷ್ಟ್ರೀಯ ಹೆದ್ದಾರಿ 218 ರಸ್ತೆ ಅಗಲೀಕರಣ ಕಾರ್ಯದಿಂದ ಸುಮಾರು 35000 ಮರಗಳು ನೆಲಕ್ಕುರಳಲಿದೆ ಎಂಬ ಆತಂಕಕಾರಿ ಸುದ್ದಿ ವರದಿಯಾಗಿತ್ತು. ಬಿಜಾಪುರ, ಗುಲ್ಬರ್ಗಾ ಹಾಗೂ ಹುಮನಾಬಾದ್ ಪ್ರದೇಶಕ್ಕೆ ಇದು ಮಾರಕವಾಗಲಿದೆ. ಈ ಪ್ರದೇಶ ಅತ್ಯಂತ ಕಡಿಮೆ ಅರಣ್ಯ ಪ್ರದೇಶವನ್ನು ಹೊಂದಿದೆ.
ಸುಮಾರು 35,676 ಮರಗಳನ್ನು ಕಡಿಯುವುದರಿಂದ ಬಿಜಾಪುರ, ಗುಲ್ಬರ್ಗಾ ಹಾಗೂ ಬೀದರ್ ಜಿಲ್ಲೆಗಳ ವಾರ್ಷಿಕ ಮಳೆ ಪ್ರಮಾಣ ಸಂಪೂರ್ಣವಾಗಿ ತಗ್ಗಲಿದೆ. ಬಿಸಿಲು ಇನ್ನಷ್ಟು ಏರಲಿದೆ. ಪ್ರಾಣಿ ಮತ್ತು ಪಕ್ಷಿಗಳು ಜೀವನೋಪಾಯಕ್ಕೆ ಕುತ್ತು ಉಂಟಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.
ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ಬಿಜಾಪುರ-ಗುಲ್ಬರ್ಗಾ- ಹುಮ್ನಾಬಾದ್ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಸುಮಾರು 223 ಕಿ.ಮೀ ದೂರದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ 35,676 ಮರಗಳ ಮಾರಣ ಹೋಮಕ್ಕೆ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಈ ಹಿಂದೆ ಸರ್ಕಾರ ಮತ್ತು ಸಂಬಂಧ ಪಟ್ಟ ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿ ಅರ್ಜಿ ವಿಚಾರಣೆಯನ್ನು ಮುಂದೂಡಿತು.
ರಸ್ತೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದಂತೆ ಒಂದು ಅಥವಾ ಎರಡು ಕಿ.ಮೀ ದೂರದಲ್ಲಿ ಸ್ಥಳಗಳನ್ನು ಗುರುತಿಸಿ ಅಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿತು. ಈ ಸಂದರ್ಭದಲ್ಲಿ ವಾದ ಮಂಡಿಸಿದ ಸರ್ಕಾರಿ ವಕೀಲರು, ರಸ್ತೆ ಅಗಲೀಕರಣದ ಹೆಸರಿನಲ್ಲಿ ಅನಗತ್ಯ ಮರಗಳ ಮಾರಣ ಹೋಮ ಮಾಡುವುದಿಲ್ಲ.
ಆದಷ್ಟು ಮರಗಳಿಗೆ ಹಾನಿಯಾಗದ ರೀತಿಯಲ್ಲಿ ರಸ್ತೆ ಅಗಲೀಕರಣ ಮಾಡಲಿದ್ದೇವೆ. ಈಗ ಇರುವ ರಸ್ತೆಯ ಎರಡು ಮಗ್ಗುಲಲ್ಲಿ 5 ಮೀಟರ್ ಅಗಲೀಕರಣ ಮಾಡಲಿದ್ದೇವೆ ಎಂದರು. ಆದರೆ, ಮುಂದಿನ ಆದೇಶ ಹೊರ ಬೀಳುವವರೆಗೆ ಈ ಹೆದ್ದಾರಿಯಲ್ಲಿನಒಂದೂ ಮರ ಕಡಿಯಬಾರದು ಎಂದು ನ್ಯಾ ಸೆನ್ ಸೂಚಿಸಿದರು.
ಮರ ಉರುಳಿದರೆ ನಷ್ಟ ನಷ್ಟ: ಉದ್ದೇಶಿತ ಮರಗಳ ನಾಶದಿಂದ ಸುಮಾರು 2.16 ಹೆಕ್ಟೇರುಗಳಷ್ಟು ಸಂರಕ್ಷಿತ ಅರಣ್ಯ ಭೂಮಿ ಕಳೆದು ಕೊಳ್ಳಬೇಕಾಗುತ್ತದೆ. ಮೂರು ಜಿಲ್ಲೆಗಳಲ್ಲಿ ಸಾಮೂಹಿಕವಾಗಿ ಮರಗಳನ್ನು ಕಡಿಯುವುದರಿಂದ ಹವಾಮಾನದ ಮೇಲೆ ಭಾರಿ ಪರಿಣಾಮ ಉಂಟಾಗಲಿದೆ. ವಾರ್ಷಿಕವಾಗಿ 50 ರಿಂದ 60 ಸೆಂ.ಮೀ ಮಳೆ ದಾಖಲಿಸುವ ಈ ಪ್ರದೇಶ ಕರ್ನಾಟಕದಲ್ಲಿ ಒಣ ಹವೆಯುಳ್ಳ ಪ್ರದೇಶಗಳಲ್ಲಿ ಒಂದೆನಿಸಿದೆ.
ಬರ ಪರಿಸ್ಥಿತಿಯಲ್ಲಿ ಅಳಿದುಳಿದಿರುವ ಹಸಿರು ರಾಶಿಯನ್ನು ಕಳೆದುಕೊಂಡರೆ ಮುಂದೆ ಗತಿ ಏನು. ಈಗಲೇ 45 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲಿನ ತಾಪಮಾನ ತಾಳಲಾರದೆ ಮಂದಿ ಒದ್ದಾಡುತ್ತಿದ್ದಾರೆ.
ಹೈದರಾಬಾದ್ ಕರ್ನಾಟಕ ಅರಣ್ಯ ಸಂರಕ್ಷಣಾ ಮತ್ತು ಜಾಗೃತಿ ಸಂಘಟನೆಯ ಮುಖ್ಯಸ್ಥ ಜಿ ದೀಪಕ್ ಅವರು ಈ ಯೋಜನೆಗೆ ಪ್ರತಿರೋಧ ವ್ಯಕ್ತಪಡಿಸಿದ್ದು, ಪರಿಸರಕ್ಕೆ ಅತಿ ಕಡಿಮೆ ಹಾನಿ ಉಂಟು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಆದರೆ. ಸಂರಕ್ಷಿತಾ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದು ಮರಗಳನ್ನು ಕಡಿಯುವಲ್ಲಿ ಎನ್ ಎಚ್ ಎಐ ಹಾಗೂ ವಿಟ್ಯಾ ಸಂಸ್ಥೆ ಸಫಲವಾಗುವುದು ನಿಚ್ಚಳವಾಗಿತ್ತು.
ಗುಲ್ಬರ್ಗಾ ಜಿಲ್ಲೆಯೊಂದರಲ್ಲೇ 1.86 ಹೆಕ್ಟೇರು ಅರಣ್ಯ ಭೂಮಿ ನಾಶವಾಗಲಿದೆ. ಬೀದರ್ ನ 0.36 ಹೆಕ್ಟೇರು ಅರಣ್ಯ ನಾಶವಾಗಲಿದೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಶೇ 33 ರಷ್ಟು ಅರಣ್ಯ ಭೂಮಿ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೊಡಲಿ ಪೆಟ್ಟು ಬೀಳಲಿದೆ.