ವಿಜಯ ಸಂಕೇಶ್ವರ ಸಂದರ್ಶನ (ಭಾಗ 2)
ಉ: ನನ್ನ ಪತ್ರಿಕೆ ನಂ.1 ಆಗಬೇಕೆಂಬ ಗುರಿ ಇತ್ತು. ಅದಕ್ಕೆ ಸ್ಪರ್ಧೆಗೆ ಇಳಿದಿದ್ದೆ. ವಿಜಯ ಕರ್ನಾಟಕ ಯಶಸ್ಸಿನ ಬಳಿಕ ಇತರ ಪತ್ರಿಕೆ ಮಾಡಲು ಓದುಗರ ಬೇಡಿಕೆ ಇತ್ತು. ಆ ಕಾರಣಕ್ಕೆ ಒಂದೇ ಸಂಸ್ಥೆಯಡಿಯಲ್ಲಿ ಎಲ್ಲಾ ಪತ್ರಿಕೆ ಸಿಗಬೇಕೆಂದು ಮಾಡಿದ್ದೆ. ಉದ್ದೇಶಪೂರ್ವಕವಾಗಿ ಯಾವುದೇ ಪತ್ರಿಕೆ ನಿಲ್ಲಿಸ್ಲಿಲ್ಲಾ. ಟಿವಿ ಬಂದ ನಂತರ ಓದುಗರ ಸಂಖ್ಯೆ ಕಡಿಮೆ ಆಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿದ್ದರಿಂದ ವೀಕ್ಲಿ, ಮಂಥ್ಲಿ ನಿಲ್ಲಿಸುವ ನಿರ್ಧಾರ ಮಾಡಿದೆ. ಅಲ್ಲದೇ ಇತರ ಪತ್ರಿಕೆಗಳ ಟೀಂ ಕೂಡಾ ಅಷ್ಟೊಂದು ತೃಪ್ತಿಕರವಾಗಿ ಕೆಲಸ ಮಾಡ್ತಿರಲಿಲ್ಲ.
ಪ್ರ: ಹಣಕ್ಕೋಸ್ಕರ ವಿಜಯ ಕರ್ನಾಟಕ ಮಾರಿದ್ರು ಅಂತ ಆರೋಪ ಇತ್ತು?
ಉ: ಇದು ವಾಸ್ತವ ಅಲ್ಲ. ಆರೋಪ ಮಾಡಿದವರಿಗೆ ನಿಜ ಸಂಗತಿ ಗೊತ್ತಿಲ್ಲ. ಸಂಬಳ ಕೊಡುವವರಿಗೆ ಸರಿಯಾಗಿ ಕೊಡದೇ ಬೇರೆ ದಾರಿ ಹಿಡಿದಿದ್ರೆ ಪತ್ರಿಕೆ ಉಳಿಸಿಕೊಳ್ಳಬಹುದಿತ್ತು. ಆದ್ರೆ ನಾನು ಪತ್ರಿಕೆಯ ಗುಡ್ ವಿಲ್ ಗೆ ಹಾನಿಯಾಗಬಾರದು ಅನ್ನೋ ಕಾರಣಕ್ಕಾಗಿ ಪತ್ರಿಕೆ ಮಾರುವ ನಿರ್ಧಾರ ಮಾಡಿದೆ.
ಪ್ರ: ಮತ್ತೆ ಪತ್ರಿಕೆ ಮಾಡುವ ಸಾಹಸಕ್ಕೆ ಯಾಕೆ ಕೈ ಹಾಕಿದ್ರಿ?
ಉ: ಗುಣಮಟ್ಟದ ಪತ್ರಿಕೆ ಕೊಟ್ಟರೆ ಜನರು ಬೆಂಬಲಿಸ್ತಾರೆ ಎಂಬ ನಂಬಿಕೆಯಿಂದ ಮತ್ತೆ ಪತ್ರಿಕೆಯ ಸಾಹಸಕ್ಕೆ ಕೈ ಹಾಕಿದ್ದೇವೆ. ವಿಜಯವಾಣಿ ಈಗಾಗಲೇ 9 ಕೇಂದ್ರಗಳಿಂದ ಪ್ರಕಟಣೆ ಆರಂಭ ಮಾಡಿದೆ. ಎಲ್ಲಾ ಪುಟಗಳೂ ಬಣ್ಣಬಣ್ಣದಲ್ಲಿವೆ. ಜೊತೆಗೆ ಸಿಬ್ಬಂದಿಗಳಿಗೆ ಒಳ್ಳೇ ವೇತನ ನೀಡ್ತಾ ಇದ್ದೇವೆ. ಪೇಪರ್ ಕ್ವಾಲಿಟಿ ಚೆನ್ನಾಗಿದೆ. ಪುಟಗಳ ಸಂಖ್ಯೆ ಹೆಚ್ಚು ಕೊಟ್ಟಿದ್ದೇವೆ. 89 ದಿನಗಳು 9 ಎಡಿಷನ್ ತಂದಿದ್ದೇವೆ. ಪತ್ರಿಕೆಗೆ ಒಳ್ಳೆ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಈಗಾಗಲೇ 2 ಲಕ್ಷದವರೆಗೆ ಸರ್ಕ್ಯುಲೇಷನ್ ಇದೆ. ಒಂದು ವರ್ಷದಲ್ಲಿ ನಂ.1 ಪತ್ರಿಕೆ ಮಾಡ್ತೇವೆ.
ಪ್ರ: ನಿಮ್ಮ ಪತ್ರಿಕೆಗೆ ಹೊಸ ಓದುಗರು ಇದ್ದಾರಾ ಬೇರೆ ಪತ್ರಿಕೆಯಿಂದ ಶಿಫ್ಟಾದವರಾ?
ಉ: 80% ಓದುಗರು ಬೇರೆ ಪತ್ರಿಕೆಯಿಂದ ಶಿಫ್ಟಾದವರು. 10% ಹೊಸ ಓದುಗರು. ಉಳಿದ 10% ಇತರ ಓದುಗರು. ಈ ಬಿಸಿ ಈಗಾಗಲೇ ಇತರ ಪತ್ರಿಕೆಗಳಿಗೆ ತಟ್ಟಿದೆ.
ಪ್ರ: ಇನ್ನೊಂದು ಪತ್ರಿಕೆಯ ಸುದ್ದಿ ಇದೆ!?
ಉ: ಈಗ ನಂ.1, ನಂ.2 ಪತ್ರಿಕೆ ನಮ್ಮದೇ ಆಗಬೇಕೆಂಬ ಗೋಲ್ ಇಟ್ಟುಕೊಂಡಿದ್ದು ನಾಲ್ಕೈದು ತಿಂಗಳಲ್ಲಿ ಇನ್ನೊಂದು ಪತ್ರಿಕೆ ಬರ್ತಾ ಇದೆ. ಆ ಪತ್ರಿಕೆ ತುಂಬಾ ವಿಶಿಷ್ಟವಾಗಿರತ್ತೆ. ಈ ಪತ್ರಿಕೆಗೆ ಇರುವ ಬರಹಗಾರರು ಅಲ್ಲಿ ಇರುವುದಿಲ್ಲ. ಆ ಪತ್ರಿಕೆಗೆ ಬೇರೆಯದೇ ಫ್ಲೇವರ್ ಕೊಡ್ತೇವೆ. ಹೊಸ ಪರಿಕಲ್ಪನೆ, ಒಳ್ಳೆಯ ಹೆಸರು ಮತ್ತು ಕೈ ಸ್ವಚ್ಛ ಇರುವ, ಇಂಗ್ಲಿಷ್ ಮಾಧ್ಯಮದಲ್ಲಿ ಕೆಲಸ ಮಾಡಿದ ಪತ್ರಕರ್ತರನ್ನು ಮಾತ್ರ ತೆಗೆದುಕೊಳ್ತಾ ಇದ್ದೇವೆ. ಅಂದ್ರೆ, ಒಬ್ಬ ಅಪ್ಪನ ಇಬ್ಬರು ಮಕ್ಕಳೂ ಜಟ್ಟಿಗಳಾಗಿದ್ದಾಗ ಅವರವರ ನಡುವೆ ಸೋಲು ಬಂದ್ರೆ ಪರವಾಗಿಲ್ಲ ಆದ್ರೆ ಬೇರೆಯವರ ಕೈಯಿಂದ ಸೋಲಬಾರದು. ಇದು ನಮ್ಮ ತಂತ್ರಗಾರಿಕೆ.
ಪ್ರ. ನೀವು ಸಿಬ್ಬಂದಿ ಅಥವಾ ನೌಕರರ ವರ್ಗವನ್ನು ಹೇಗೆ ನಿಭಾಯಿಸ್ತಾ ಇದ್ರಿ?
ಉ: ಯಾವನೇ ನೌಕರ ತಪ್ಪು ಮಾಡೋದು ಸಹಜ. ನಮ್ಮ ಸಂಸ್ಥೆಯಲ್ಲಿ ತಪ್ಪು ಮಾಡಿದ್ರೆ ಶಿಕ್ಷೆ ಕೊಡಲ್ಲ. ಆದರೆ ಫ್ರಾಡ್ ಮಾಡಿದ್ರೆ, ಅವರು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ರೂ ಹೊರಹಾಕ್ತೇವೆ. ಈ ಹೆದರಿಕೆ ನೌಕರರ ಪ್ರಾಮಾಣಿಕತೆಗೆ ಒಂದು ಕಾರಣವಾದ್ರೆ, ಇದರ ಜೊತೆಗೆ ನಮ್ಮ ಸಂಸ್ಥೆಯಲ್ಲಿ ಬೇರೆಲ್ಲವರಿಗಿಂತ 2 ಪಟ್ಟು ಹೆಚ್ಚು ವೇತನ ಕೊಡ್ತೇವೆ, ಇದೂ ಕೂಡಾ ನೌಕರರ ಹೆಚ್ಚಿನ ಪರಿಶ್ರಮಕ್ಕೆ ಕಾರಣ. ಇಷ್ಟಾಗಿಯೂ ಈಗ ನಾನು ಕೊಡ್ತಾ ಇರೋ ಸಂಬಳದ ಬಗ್ಗೆ ನನಗೆ ತೃಪ್ತಿ ಇಲ್ಲ. ಈ ರೀತಿ ನೋಡಿಕೊಳ್ತಾ ಇರೋದ್ರಿಂದ ಒಳ್ಳೆ ಫಲಿತಾಂಶ ಬರ್ತಾ ಇದೆ.