ಮತ್ತೆ ಬೆಲೆ ಸಮರ? : ವಿಜಯ ಸಂಕೇಶ್ವರ ಸಂದರ್ಶನ

ಮಾಧ್ಯಮ ಲೋಕದಲ್ಲಿ ಸಂಚಲನ ಮೂಡಿಸಿ, ಕನ್ನಡ ಪತ್ರಿಕಾ ಓದುಗರನ್ನೂ ಹೆಚ್ಚಿಸಿದ ವಿಜಯ ಸಂಕೇಶ್ವರರರು ಇತ್ತೀಚೆಗೆ ಉಡುಪಿಯ "ಸ್ಪಂದನ ವಾಹಿನಿ" ಯಲ್ಲಿ ತಮ್ಮ ಕೆಲವು ಒಲವುಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನದ ಆಯ್ದ ಭಾಗಗಳು, ನಿಮಗಾಗಿ!
ಪ್ರ: ಸಾರಿಗೆ ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನೇ ಮಾಡಿದ ನಿಮಗೆ ಮಾಧ್ಯಮದ ಬಗ್ಗೆ ಆಸಕ್ತಿ ಹುಟ್ಟಿದ್ದು ಹೇಗೆ?
ಉ: ನಾನು ರಾಜಕೀಯಕ್ಕೆ ಬಂದಾಗ ನನ್ನ ಬಗ್ಗೆ ಕೆಲ ಪತ್ರಿಕೆಗಳು ಕೆಟ್ಟದಾಗಿ ಬರೆದ್ರು. ಹಾಗಾಗಿ ಪತ್ರಿಕೆ ಶುರು ಮಾಡ್ಬೇಕು ಅಂತನಿಸ್ತು. ಜೊತೆಗೆ ಆಗ ಪತ್ರಿಕೋದ್ಯಮ ನಿಂತನೀರಾಗಿತ್ತು. ರಾಜ್ಯದಲ್ಲಿ ನಾಲ್ಕೈದು ಪತ್ರಿಕೆಗಳಷ್ಟೇ ಇದ್ರೂ ಅವು ಸಕಾಲದಲ್ಲಿ ಜನರನ್ನು ತಲುಪುತ್ತಿರಲಿಲ್ಲ. ಮತ್ತು ಕೆಲ ಭಾಗಕ್ಕಷ್ಟೇ ಸೀಮಿತವಾಗಿದ್ವು. ಪತ್ರಿಕೆಗಳಲ್ಲಿ ಪ್ರಾದೇಶಿಕ ಸಮತೋಲನೆ ಇರ್ಲಿಲ್ಲ. ಸುಮಾರು 13 ವರ್ಷದ ಹಿಂದೆ ಪತ್ರಕರ್ತರಿಗೆ ಸರಿಯಾದ ಮರ್ಯಾದೆ ಕೂಡಾ ಇರ್ಲಿಲ್ಲ. ಕೆಲವೇ ಆಯ್ದ ಲೇಖಕರಷ್ಟೇ ಬರೀತಿದ್ರು. ಮುದ್ರಣದ ಗುಣಮಟ್ಟ ಕೂಡಾ ಚೆನ್ನಾಗಿರಲಿಲ್ಲ. ಪತ್ರಿಕೆಯ ಬೆಲೆ ಕೂಡಾ ದುಬಾರಿಯಾಗಿತ್ತು. ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಪರಿಕಲ್ಪನೆಯ ಪತ್ರಿಕೆ ವಿಜಯ ಕರ್ನಾಟಕವನ್ನು ಹೊರತಂದೆ.
ಪ್ರ: ಹೊಸ ಪತ್ರಿಕೆ ಆರಂಭ ಮಾಡೋದು ಅಂದ್ರೆ ತುಂಬಾ ರಿಸ್ಕ್. ಆ ರಿಸ್ಕ್ ಹೇಗೆ ತಗೊಂಡ್ರಿ?
ಉ: ರಿಸ್ಕ್ ತಗೊಳೋದು ಮೊದಲಿನಿಂದ್ಲೂ ಅಭ್ಯಾಸವಾಗಿತ್ತು. ನನಗೆ ರಿಸ್ಕ್ ಅಂತ ಅನಿಸಿರ್ಲಿಲ್ಲ; ನೋಡುವವರಿಗೆ ರಿಸ್ಕ್ ಅನಿಸ್ತಾ ಇತ್ತು. ನಾನು ರಾಜಕೀಯಕ್ಕೆ ಬಂದಾಗ ನಾನು ರಾಜಕೀಯ ವ್ಯಕ್ತಿಗಳನ್ನು ಬ್ಲಾಕ್ಮೇಲ್ ಮಾಡ್ತಾ ಇದ್ದೇನೆ ಅಂತ ಆರೋಪ ಮಾಡಿದ್ರು. ನಾನು ಯಡಿಯೂರಪ್ಪ, ರಾಮಕೃಷ್ಣ ಹೆಗಡೆ, ಬಂಗಾರಪ್ಪ, ದೇವೇಗೌಡ ಎಲ್ಲರನ್ನೂ ಗಮನಿಸಿದ್ದೆ. ಅವರೆಲ್ಲಾ ಆ ಕಾಲಕ್ಕೆ ಒಂದು ಹಂತದಲ್ಲಿ ಪತ್ರಿಕೆಗಳಿಗೆ ಶರಣಾಗುವ ಸ್ಥಿತಿ ಇತ್ತು. ಪತ್ರಿಕೆ ಮಾಡಲು ಇದೂ ಒಂದು ಕಾರಣ. ನಾನು ಶುರು ಮಾಡೋವಾಗ ಇಡೀ ಕರ್ನಾಟಕದಲ್ಲಿ ಪತ್ರಿಕೆಗಳ ಮುದ್ರಣ ಸಂಖ್ಯೆ 6-7 ಲಕ್ಷ ಇತ್ತು. ಮೊದಲ ಆವೃತ್ತಿ ಬಿಡುಗಡೆ ಮಾಡುವಾಗ, '2 ವರ್ಷದಲ್ಲಿ 9 ಆವೃತ್ತಿ ಮಾಡ್ತೇನೆ' ಅಂದಾಗ, ಬೇರೆ ಪತ್ರಿಕಾ ಮಿತ್ರರು ನನ್ನನ್ನು ಗೇಲಿ ಮಾಡಿದ್ರು. ಅಷ್ಟು ಬೇಗ ಅಷ್ಟೊಂದು ಆವೃತ್ತಿ ತರೋಕೆ ಸಾಧ್ಯವಿಲ್ಲ ಅಂದ್ರು. ಆದರೆ ಉತ್ತಮ ಗುಣಮಟ್ಟದ ಪತ್ರಿಕೆ ಎಲ್ಲಾ ವರ್ಗಕ್ಕೆ ತಲುಪುವಂತೆ ಮಾಡಿದ್ರೆ ಅದು ಯಶಸ್ವಿಯಾಗತ್ತೆ ಅನ್ನೋದಕ್ಕೆ ನಾನು ಆರಂಭಿಸಿದ ಪತ್ರಿಕೆಯ ಯಶಸ್ಸೇ ಸಾಕ್ಷಿ.
ಪ್ರ: ಪತ್ರಿಕೆ ಆರಂಭ ಮಾಡ್ತಾ ನೀವು ದರ ಸಮರಕ್ಕೆ ಇಳಿದ್ರಿ ಅನ್ನೋ ಆರೋಪ ಬಂತಲ್ವಾ?
ಉ: ದರ ಸಮರಕ್ಕೆ ನಾನು ವಿರೋಧಿ. ಯಾವುದೇ ಸಮರಕ್ಕೂ ವಿರೋಧಿ. ಆದರೆ ಅಂದು ಪತ್ರಿಕೆಯನ್ನು 1.50 ರೂ ಕೊಟ್ಟಿದ್ದೆ. ಮನಸ್ಸು ಮಾಡಿದ್ರೆ, 50 ಪೈಸೆಗೂ ಕೊಡಲು ಸಾಧ್ಯವಿದೆ. ಯಾಕಂದ್ರೆ ಯಾವುದೇ ಪತ್ರಿಕೆ ಕವರ್ ಪ್ರೈಸ್ ಮೇಲೆ ಬದುಕುವುದಿಲ್ಲ. ಇಂದಿಗೂ 1.50 ರುಪಾಯಿಗೆ ಕೊಡಲು ಸಿದ್ಧನಿದ್ದೇನೆ. ಕಮಿಶನ್ ಕಾರಣದಿಂದ 3 ರೂಪಾಯಿಗೇ ಕೊಡಬೇಕಾದ ಅನಿವಾರ್ಯತೆ ಇದೆ. ಈಗಲೂ ಏಜಂಟರಿಗೆ ದೇಶದಲ್ಲಿ ಪ್ರಥಮ ಬಾರಿಗೆ 1.50 ರೂ ಕಮಿಷನ್ ಕೊಡ್ತಾ ಇದ್ದೇವೆ. ಬೇರೆ ಪತ್ರಿಕೆಗಳು ಕಮಿಷನ್ ಹೆಚ್ಚು ಮಾಡುವ ಮನಸು ಮಾಡಿಲ್ಲ. ಇಷ್ಟಾಗಿಯೂ ನಾನು ಕೊಡ್ತಾ ಇರೋ ಕಮಿಷನ್ ಬಗ್ಗೆ ನನಗೆ ತೃಪ್ತಿ ಇಲ್ಲ.











Click it and Unblock the Notifications