ಹಾಲಪ್ಪ ಪ್ರಕರಣ ಸುಖಾಂತ್ಯ?
ಬೆಂಗಳೂರು, ಏಪ್ರಿಲ್ 1: ಮಾಜಿ ಸಚಿವ ಹರತಾಳು ಹಾಲಪ್ಪ ಸ್ನೇಹಿತ ಪತ್ನಿಯ ಮೇಲೆ ಅತ್ಯಾಚಾರವೆಸಗಲು ಹೋಗಿ ಏನು ಸುಖವುಂಡರೊ ಅವರೇ ಹೇಳಬೇಕು. ಆದರೆ ಪ್ರಕರಣವಂತೂ ಸುಖಾಂತ್ಯ ಕಾಣುವ ಸಾಧ್ಯತೆಗಳು ನಿಚ್ಚಳವಾಗಿವೆ. ಇದಕ್ಕೆ ಸಿಐಡಿ ಪೊಲೀಸರು ಸಲ್ಲಿಸಿರುವ 'ದೋಷಾ'ರೋಪ ಪಟ್ಟಿ ನೆರವಾಗಲಿದ್ದು, ಅದರಲ್ಲಿ ಅತ್ಯಾಚಾರ ಪ್ರಕರಣವನ್ನು ಸಹಮತದ ಸೆಕ್ಸ್ ಎಂದು ಉಲ್ಲೇಖಿಸಲಾಗಿದೆ. ತನ್ಮೂಲಕ ಇಡೀ ಪ್ರಕರಣವನ್ನು ಹಳ್ಳ ಹಿಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ವಿಶ್ಲೇಷಿಸಲಾಗಿದೆ.
ವೀಡಿಯೊ: ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಶಿವಮೊಗ್ಗ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಎರಡು ದಿನಗಳ ಹಿಂದೆ ಆರೋಪಪಟ್ಟಿ ದಾಖಲಿಸಿದ್ದಾರೆ. ಇದರಲ್ಲಿ ಅತ್ಯಾಚಾರ ಪ್ರಕರಣ ಮಾತ್ರ ಪರಿಗಣಿಸಿದ್ದು, ಜೀವ ಬೆದರಿಕೆ ಪ್ರಕರಣ ಕೈಬಿಟ್ಟಿದ್ದಾರೆ. ಹಾಲಪ್ಪ ಸಹಚರರಾದ ಗಿರೀಶ್ ಮತ್ತು ಬಸವರಾಜು ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ದಾಖಲಿಸಿಲ್ಲ ಎಂಬುದು ಪ್ರಮುಖ ಅಂಶ.
ಆದರೆ ಡಿಎನ್ ಎ ವರದಿಯಲ್ಲಿ ಹಾಲಪ್ಪಗೆ ಮುಳ್ಳಾಗುವಂತಹ ಅಂಶಗಳೇ ಇರುವುದರಿಂದ ಅವರು ಬಚಾವ್ ಆಗುವುದು ಕಷ್ಟ ಎಂಬುದು ಕಾನೂನು ಪರಿಣತರ ಪ್ರತಿ ವಾದ. ಏನೇ ಆದರೂ ಆರೋಪಪಟ್ಟಿಯಲ್ಲಿನ ಸಾಕಷ್ಟು ಅಂಶಗಳು ಆರೋಪ ಸಾಬೀತುಪಡಿಸುವಲ್ಲಿ ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ ಎನ್ನಲಾಗಿದೆ. ಅಸಲಿಗೆ ಹೈಕೋರ್ಟ್ ಸಿಐಡಿಯನ್ನು ತರಾಟೆಗೆ ತೆಗೆದುಕೊಂಡ ಬಳಿಕವಷ್ಟೇ ಆರೋಪಪಟ್ಟಿ ದಾಖಲಿಸಲಾಗಿದೆ.
ಈ ಮಧ್ಯೆ... ಪ್ರಕರಣದ ಸಂಬಂಧ ತೆರೆಮರೆಯಲ್ಲಿ ಸಂಧಾನವೊಂದು ನಡೆಯುತ್ತಿದೆ. ಈಡಿಗ ಸಮಾಜದ ಹಿರಿಯ ತಲೆಗಳೇ ರಾಜೀ ಸಂಧಾನಕ್ಕೆ ಪೌರೋಹಿತ್ಯ ನಡೆಸಿವೆ ಎಂದು ತಿಳಿದುಬಂದಿದೆ. ಡಿಎನ್ ಎ ವರದಿ ಹಾಲಪ್ಪ ವಿರುದ್ಧ ವೀರ್ಯವಂತ ಸಾಕ್ಷಿಯಾಗಲಿದ್ದು, ಆರೋಪಿಗೆ ಅದೇ ಮುಳುಗುನೀರು ತರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಕೇಸನ್ನು ವಾಪಸ್ ತೆಗೆದುಕೊಳ್ಳುವಂತೆ ಪ್ರಕರಣದ ಬಾಧಿತೆ ಚಂದ್ರಾವತಿಯ ಪತಿ ವೆಂಕಟೇಶಮೂರ್ತಿಯನ್ನು ಪುಸಲಾಯಿಸಲಾಗುತ್ತಿದೆ ಎಂದು ಹಾಲಪ್ಪ ನಿಕಟವರ್ತಿಗಳು ಹೇಳಿದ್ದಾರೆ.