ಮುಂಬೈನಲ್ಲಿ ಕುಲಾಲ ಉತ್ಸವ 2010
ವಾಣಿಜ್ಯ ನಗರಿ ಮುಂಬೈನಲ್ಲಿ ಬೃಹತ್ ಕುಲಾಲ ಉತ್ಸವಕ್ಕೆ ಭರದ ಸಿದ್ದತೆಗಳು ನಡೆದಿವೆ. ಏಪ್ರಿಲ್ 4ರಂದು ಮುಂಬೈನ ದಾದರ್ನಲ್ಲಿರುವ ಕಾಮ್ಗಾರ್ ಕ್ರೀಡಾ ಭನವದಲ್ಲಿ ಕುಲಾಲ ಉತ್ಸವ 2010' ಜರಗುತ್ತಿದೆ. ವಿಶೇಷವಾಗಿ ಮುಂಬೈನಲ್ಲಿ ನೆಲೆಸಿರುವ ಕುಲಾಲರು ಈ ಉತ್ಸವದ ಪ್ರಮುಖ ಆಕರ್ಷಣೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಕರಾವಳಿ ಜಿಲ್ಲೆಯಲ್ಲಿರುವ ಕುಲಾಲ ಸಮುದಾಯದ ಪ್ರಮುಖರು ಆಹ್ವಾನಿತರಾಗಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸುಮಾರು ಆರು ಸಾವಿರ ಮಂದಿ ಸೇರಲಿರುವ ಈ ಸಮಾವೇಶಕ್ಕೆ ಭರದ ಸಿದ್ದತೆಗಳು ನಡೆದಿವೆ.
ಮಂಗಳೂರು ಕುಲಾಲ ಪ್ರತಿಷ್ಠಾನ ಇದರ ವತಿಯಿಂದ ಕುಲಾಲ ಸಂಘ ಮುಂಬೈ ಇದರ ಸಹಕಾರದಲ್ಲಿ ಹಮ್ಮಿಕೊಂಡಿರುವ ಈ ಉತ್ಸವ ದಿನಪೂರ್ತಿ ಜರಗಲಿದೆ ಎನ್ನುತ್ತಾರೆ ಕುಲಾಲ ಪ್ರತಿಷ್ಠಾನದ ಸಂಚಾಲಕರಲ್ಲಿ ಒಬ್ಬರಾದ ಬಿ.ದಿನೇಶ್ ಕುಲಾಲ್ ಮಲಾಡ್. ಕುಲಾಲ ಸಮಾಜ ಕೋಡೆ-ಇನಿ-ಎಲ್ಲೆ' ಎಂಬ ವಿಷಯದ ಕುರಿತು ವಿಚಾರ ಸಂಕಿರಣ, ಯುವಕರು ಮತ್ತು ಕುಲಾಲ ಸಮಾಜ' ವಿಚಾರ ವಿನಿಮಯ ಹೀಗೆ ವಿಭಿನ್ನ ನೆಲೆಯಲ್ಲಿ ಕುಲಾಲ ಸಮಾಜವನ್ನು ನೋಡುವ ಪ್ರಯತ್ನ ಆಗಲಿದೆ. ಕುಲಾಲ ಸಮಾಜದಲ್ಲಿ ಹುಟ್ಟಿದವರು ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಯುವಪೀಳಿಗೆಗೆ ಸಾಧನೆ ಮಾಡಲು ಪ್ರೇರಣೆ ಕೊಡುವ ಪ್ರಯತ್ನ.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಸಹಿತ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ. ಈ ಉತ್ಸವದಲ್ಲಿ ಗಮನಿಸಬಹುದಾದ ಮತ್ತೊಂದು ವಿಶೇಷತೆಯೆಂದರೆ ಬೇರೆ ಬೇರೆ ಸಮಾಜದ ಗಣ್ಯರು ಅತಿಥಿಗಳಾಗಿ ಭಾಗವಹಿಸುತ್ತಿರುವುದು. ಯಾವುದೇ ಸಮುದಾಯದೊಳಗೆ ಸೌಹಾರ್ದತೆ ಇರಬೇಕು, ಈ ಮೂಲಕ ಎಲ್ಲಾ ಸಮುದಾಯಗಳು ಪರಸ್ಪರ ಕೊಡುಕೊಳ್ಳುವಿಕೆಯೊಂದಿಗೆ ಅಭ್ಯುದಯ ಹೊಂದಲು ಸಾಧ್ಯ ಎನ್ನುವ ಸಂದೇಶವನ್ನು ರವಾನಿಸುವಂತಿದೆ. ನಿಜಕ್ಕೂ ಈ ರೀತಿಯ ಪ್ರಯತ್ನಗಳು ಯಾವುದೇ ಸಮುದಾಯದಿಂದ ನಡೆದರೂ ಸ್ವಾಗತಾರ್ಹ.
ದಿನಪೂರ್ತಿ ನಡೆಯಲಿರುವ ಈ ಉತ್ಸವಕ್ಕೆ ಮೆರುಗು ಕೊಡಲು ಕುಲಾಲ ಸಮಾಜದ ಪ್ರತಿಭಾವಂತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕುಲಾಲ ಸಾಂಸ್ಕೃತಿಕ ವೈಭವದ ಅನಾವರಣವೂ ಇಲ್ಲಿ ನಡೆಯಲಿದೆ. ಅಂತೂ ವಾಣಿಜ್ಯ ನಗರಿ ಮುಂಬೈ ಕುಲಾಲ ಉತ್ಸವಕ್ಕೆ ಅಣಿಯಾಗಿದೆ. ದೂರದ ಮುಂಬೈಗೆ ಉದ್ಯೋಗ ಹರಸಿಕೊಂಡು ಹೋದವರು ತಾಯಿನೆಲದ ಬೇರುಗಳನ್ನು ಮರೆತಿಲ್ಲ ಎನ್ನುವುದಕ್ಕೆ ಈ ಐತಿಹಾಸಿಕ ಉತ್ಸವ ಸಾಕ್ಷಿಯಾಗಲಿದೆ.