ಪ್ರತಿ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ
ಮಡಿಕೇರಿ, ಮೇ. 7: ರಾಜ್ಯದ ಪ್ರತೀ ತಾಲ್ಲೂಕಿನಲ್ಲಿ ಅಗ್ನಿಶಾಮಕ ಠಾಣೆ ತೆರೆಯಲು ಸರ್ಕಾರ ಉದ್ದೇಶಿಸಿದೆ. ಈಗಾಗಲೇ 150 ಕಚೇರಿ ಇದ್ದು, ಇನ್ನೂ 56 ಅಗ್ನಿಶಾಮಕ ಕಚೇರಿ ಅಗತ್ಯವಿದZ. ಒಟ್ಟು 206 ಅಗ್ನಿಶಾಮಕ ಠಾಣಾ ಕಚೇರಿ ತೆರೆಯಲು ಸರ್ಕಾರ ಮಂಜೂರಾತಿ ನೀಡಿದೆ ಎಂದು ಅಗ್ನಿಶಾಮಕ ಮತ್ತು ಗೃಹ ರಕ್ಷಕದಳ ಡಿಜಿಪಿ ಜಿಜಾ ಹರಿಸಿಂಗ್ ತಿಳಿಸಿದ್ದಾರೆ.
ಮಡಿಕೇರಿಯ ಜಿಲ್ಲಾ ಗೃಹ ರಕ್ಷಕದಳದ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಭಾಗೀಯ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಗ್ನಿಶಾಮಕ ಕಚೇರಿಯನ್ನು ತೆರೆದು ಉತ್ತಮ ಸೇವೆ ನೀಡಲು ಸರ್ಕಾರ ಉದ್ದೇಶಿಸಿದೆ ಎಂದರು. ರಾಜ್ಯ ಅಗ್ನಿಶಾಮಕ ದಳದಲ್ಲಿ 1800 ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗಿದ್ದು, ಇನ್ನೂ 1200 ಸಿಬ್ಬಂದಿ ಮತ್ತು ನೂರಕ್ಕೂ ಹೆಚ್ಚು ಎಂಜಿನ್ಗಳ ಅಗತ್ಯವಿದೆ ಎಂದರು.
ರಾಜ್ಯದಲ್ಲಿ 27,000 ಗೃಹ ರಕ್ಷಕರಿದ್ದು, ಕಳೆದ ತಿಂಗಳು ನಡೆದ ಲೋಕಸಭಾ ಚುನಾವಣೆಯಲ್ಲಿ 17,000 ಹೋಂ ಗಾರ್ಡ್ಸ್(ಗೃಹ ರಕ್ಷಕ)ಗಳನ್ನು ನಿಯೋಜಿಸಲಾಗಿತ್ತು ಎಂದು ಅವರು ವಿವರಿಸಿದರು. ಗೃಹ ರಕ್ಷಕರಿಗೆ ಸರ್ಕಾರ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ಗೃಹ ರಕ್ಷಕರು ಲೋಕಸಭಾ ಚುನಾವಣೆಯಲ್ಲಿ ಉತ್ತಮ ಕೆಲಸ ನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಮೂಲಭೂತ ಸೌಲಭ್ಯ ಒದಗಿಸಿದರೆ ಗೋಣಿಕೊಪ್ಪದಲ್ಲಿ ಸುಸಜ್ಜಿತ ಅಗ್ನಿಶಾಮಕ ಠಾಣೆ ಕಟ್ಟಡವನ್ನು ನಿರ್ಮಿಸಬಹುದು ಎಂದರು. ಮಡಿಕೇರಿ ನಗರದಲ್ಲಿರುವ ಅಗ್ನಿಶಾಮಕ ಠಾಣೆಗೆ ಉತ್ತಮ ರಸ್ತೆ ನಿರ್ಮಿಸಲು ಜಿಲ್ಲಾಡಳಿತ ಸಮ್ಮತಿಸಿದೆ. ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಬಂದು ನೆರೆಹಾವಳಿ ಸಂಭವಿಸುವುದರಿಂದ ಬೋಟ್ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಜಾ ಹರಿಸಿಂಗ್ ಇದೇ ಸಂದರ್ಭದಲ್ಲಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)