ಕಸಬ್ ಪರ ವಕೀಲನ ಉಚ್ಚಾಚನೆಗೆ ಠಾಕ್ರೆ ಸಂತಸ
ಶಿವಸೇನೆ ಪಕ್ಷದ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ವಿಶ್ಲೇಷಣೆ ಮಾಡಿರುವ ಠಾಕ್ರೆ, ದೇಶದ್ರೋಹ ಕೃತ್ಯ ಎಸಗಿದ್ದಲ್ಲದೆ, 180ಕ್ಕೂ ಅಧಿಕ ಅಮಾಯಕರ ಸಾವಿಗೆ ಕಾರಣವಾಗಿ, ದೇಶದ ಆರ್ಥಕತೆ ಮೇಲೆ ಭಾರಿ ಪರಿಣಾಮ ಬೀರಿರುವ ಉಗ್ರನ ಪರವಾಗಿ ವಕಾಲತ್ತು ನಡೆಸುವುದು ಅತ್ಯಂತ ಹೇಯ ಕೃತ್ಯ. ಇಂಥ ವ್ಯಕ್ತಿಗಳನ್ನು ಸಮಾಜದಿಂದ ದೂರ ಇಡುವುದು ಒಳಿತು. ಜಾತಿ ಬೇಧ ಎಣಿಸದೆ ಇಸ್ಲಾಂ ಜಮಖಾನಾ ಕಜ್ಮಿಯನ್ನು ಮಂಡಳಿಯಿಂದ ಹೊರಹಾಕಿರುವುದು ಒಳ್ಳೆಯ ಬೆಳವಣಿಗೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯ ವಿರುದ್ಧ ಮುಸ್ಲಿಮರು ಸಿಡಿದೇಳಬೇಕು. ಆಗ ಮಾತ್ರ ದೇಶದಲ್ಲಿ ಶಾಂತಿ ನೆಲೆಸಲು ಸಾದ್ಯ ಎಂದು ಬಾಳಾ ಠಾಕ್ರೆ ಅಭಿಪ್ರಾಯಪಟ್ಟಿದ್ದಾರೆ.
ಇಸ್ಲಾಂ ಜಮಖಾನಾ ತಳೆದಿರುವ ನಿಲುವು ದೇಶಕ್ಕೆ ಮಾದರಿಯಾಗುವಂಥದ್ದು, ಇದರಿಂದ ಭಯೋತ್ಪಾದನೆಯನ್ನು ತಡೆಯಬಹುದು. ಅಲ್ಲದೇ ಹಿಂದೂ-ಮುಸ್ಲಿಂ ನಡುವೆ ಇರುವ ಕಂದಕವನ್ನು ಹೋಗಲಾಡಿಸಬಹುದು ಎಂದು ಠಾಕ್ರೆ ವಿವರಿಸಿದ್ದಾರೆ. ಕಸಬ್ ನಿಗೆ ಜೈಲಿನಲ್ಲಿ ತಿರುಗಾಡಲು ಅವಕಾಶ ಮಾಡಿಕೊಟ್ಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಕಾಂಗ್ರೆಸ್ ಪಕ್ಷದ ಧೋರಣೆಯಿಂದ ಭಯೋತ್ಪಾದನೆ ಹೆಚ್ಚಾಗುತ್ತಿದೆ ಎಂದು ಅವರು ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)