ಮಳೆ ಬಂದರೂ ಕಷ್ಟ
ಈವತ್ತು ಬೆಂಗಳೂರಲ್ಲಿ ಬೆಳಗ್ಗೆ ಗಂಟೆ ಎಂಟಾದರೂ ಸೂರ್ಯ ಮಾತ್ರ ಮೋಡಗಳೊಡನೆ ಕಾದಾಡಿ, ಕಿರಣ ಸೂಸಲಿಲ್ಲ. ಲವಲವಿಕೆಯಿಲ್ಲದ ಮಳೆ ಎಲ್ಲರನ್ನೂ ಕೊರಗಿಸುತ್ತಿತ್ತು. ಬಾಗಿಲಿಗೆ ನೀರು, ಹೂ ಮಾರಾಟ ಎಲ್ಲಕ್ಕೂ ಅಘೋಷಿತ ರಜೆ. ಹೇಗೋ ಗೊಣಗುತ್ತಲೇ ಬಿಸಿ ಕಾಫಿಯ ಬಯಕೆಯಿಂದ ಹಾಲು ತಂದ ಜನ ಮತ್ತೆ ಚಾದರದೊಳಗೆ ಮೈತೂರಿಸುತ್ತಿದ್ದುದು ಸಾಮಾನ್ಯ. ಹಲ್ಲುಜ್ಜದೆ ಕಾಫಿ ಕುಡಿಯದ ಸಂಪ್ರದಾಯ ಎಷ್ಟೋ ಕಡೆ ಮುರಿದು ಬಿದ್ದಿತು.
ತುಂಬಿ ಹರಿವ ನದಿಗಳು ಎಷ್ಟು ಮನೋಹರವೋ ಅಷ್ಟೇ ಭಯ ಹುಟ್ಟಿಸುತ್ತಿವೆ. ಗೋಕಾಕ ಜಲಪಾತ ನೋಡ ಹೋದ ಚಿಕ್ಕ ಕುಟುಂಬ ನೀರು ಪಾಲಾಗಿರುವ ಸುದ್ದಿ ನೀರು ನೋಡುವವರು ಸ್ತಬ್ಧರಾಗುವಂತೆ ಮಾಡಿದೆ. ಭದ್ರವಿಲ್ಲದ ಜಂತೆಯ ಕೆಳಗೆ ಮಲಗುವ ಜನರಿಗೆ ನಿದ್ದೆಯಿಲ್ಲ. ಮಳೆ ಬೇಗ ನಿಲ್ಲಲಿ ಎಂಬುದೇ ಅವರ ಅರಿಕೆ. ಒಂದೆಡೆ ಕಡಿಮೆ ಬಾಡಿಗೆ ಕೊಟ್ಟು ಹಳೆ ಮನೆಯಲ್ಲಿ ವಾಸ ಮಾಡುತ್ತಿರುವವರಿಗೆ ಅಡ್ವಾನ್ಸ್ ವಾಪಸ್ ಮಾಡದ ಮಾಲೀಕರು ಯಮಧರ್ಮನಂತೆ ಕಾಣುತ್ತಿದ್ದರೆ, ಮತ್ತೊಂದೆಡೆ ಬಂದದ್ದೆಲ್ಲಾ ಬರಲಿ ಅಂತ ಮೊಂಡು ಹಿಡಿದ ಬಾಡಿಗೆದಾರರು ಮನೆಯಾಡೆಯನಿಗೂ ತಲೆ ನೋವಾಗಿದ್ದಾರೆ.
ಕಟ್ಟಿ ನಲವತ್ತು ವರ್ಷಗಳಾದ ಮನೆಯಾಡೆಯರು ವಾಸ ಯೋಗ್ಯ ಪ್ರಮಾಣ ಪತ್ರ ಪಡೆಯಲು ಕಾರ್ಪೊರೇಷನ್ನಿಗೆ ಎಡತಾಕಲು ಶುರುವಿಟ್ಟಿದ್ದಾರೆ. ಮೊನ್ನೆ ಮೊನ್ನೆ ತಾನೆ ಮುಚ್ಚಲಾದ ರಸ್ತೆಗಳ ಮೇಲಿನ ಹಳ್ಳಗಳು ಮತ್ತೆ ಬಾವಿಗಳಾಗಿವೆ. ಆ ಬಾವಿಗಳಲ್ಲಿ ತುಂಬಿರುವ ಕಪ್ಪು ನೀರು ಬೆಂಗಳೂರು ಮಾಲಿನ್ಯ ನಗರಿ, ಕಾರ್ಪೊರೇಷನ್ನು ಲಾಬಿ ಮಾಡಿ ಪ್ರಶಸ್ತಿ ಪಡೆದಿದೆ ಎಂಬುದನ್ನು ಸಾರುತ್ತಿದೆ.
ನಿಂತಲ್ಲೇ ನಿಲ್ಲದೆ ಹಳ್ಳ ಸಿಕ್ಕ ಕಡೆ ಹರಿಯುವ ನೀರಿಗೆ ರಸ್ತೆಯೇ ಹಳ್ಳವಾದರೆ? ಬಸ್ಸಿನ ಪಕ್ಕ ಹೋಗುವ ನಿಮಗೆ ರಾಡಿ. ಮತ್ತವೇ ಥೂ..ಛೀ..ಬಯ್ಗುಳಗಳು....ಮಳೆರಾಯನ ಮೇಲಿನ ಮುನಿಸಿನೊಡನೆ ಮುಂದುವರೆಯುತ್ತಿವೆಯೇ ಹೊರತು ಮುಗಿಯುತ್ತಿಲ್ಲ.