Get Updates
Get notified of breaking news, exclusive insights, and must-see stories!

ಕಾರು ಚಾಲಕನ ಸಂಗೀತ ಪ್ರತಿಭೆಗೆ ತಲೆದೂಗಿದ ಕಲಾಂ

ಬೆಂಗಳೂರು, ಜ. 31: ಭಾರತದ ಮಾಜಿ ರಾಷ್ಟ್ರಪತಿ ಹಾಗೂ ಕ್ಷಿಪಣಿ ತಜ್ಞ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಈ ವರ್ಷದ ಜನವರಿ ತಿಂಗಳಲ್ಲಿ ಬೆಂಗಳೂರಿಗೆ ನೀಡಿದ ಭೇಟಿಯನ್ನು ಬಹುಶಃ ಜೀವನದಲ್ಲಿ ಎಂದೂ ಮರೆಯುವುದಿಲ್ಲ.

ಇದಕ್ಕೆ ಕಾರಣ ನಂದೀಶ್ವರ ಆಚಾರ್ಯ ಎಂಬುವರ ಗಾಯನ. ಓರ್ವ ಚಾಲಕನಾಗಿದ್ದರೂ ಸಂಗೀತ ಗಾಯನ, ವಯೋಲಿನ್ ಹಾಗೂ ಕೊಳಲು ನುಡಿಸುವಿಕೆಯಲ್ಲಿ ಆಚಾರ್ಯ ಪರಿಣಿತರು. ಇದು ಕಲಾಂ ಅವರನ್ನು ಅಚ್ಚರಿಗೊಳ್ಳುವಂತೆ ಮಾಡಿತು.

ಈ ಕುರಿತು ಒನ್ಇಂಡಿಯಾ ಕನ್ನಡದ ಜೊತೆ ಅಭಿಪ್ರಾಯ ಹಂಚಿಕೊಂಡ ಅಬ್ದುಲ್ ಕಲಾಂ "ನಾನು ಇಂತಹ ಮಹಾನ್ ಕಲಾವಿದನನ್ನು ಭೇಟಿ ಮಾಡಿದ್ದಕ್ಕಾಗಿ ದೇವರಿಗೆ ವಂದಿಸುತ್ತೇನೆ" ಎಂದು ಹೇಳಿದ್ದಾರೆ.

acharya

ಸಂಗೀತ ಆಸಕ್ತಿ ಹೇಳಿಕೊಂಡ ಆಚಾರ್ಯ : "ಐಐಎಸ್‌ಸಿಯಲ್ಲಿನ ಕಾರ್ಯಕ್ರಮ ಮುಗಿಸಿ ಶಾಲೆಯೊಂದರಲ್ಲಿ ಆಯೋಜಿಸಿರುವ ಮತ್ತೊಂದು ಕಾರ್ಯಕ್ರಮಕ್ಕೆ ತೆರಳಲು ನಾನು ಹೋಗುತ್ತಿದ್ದೆ. ಈ ಸಂದರ್ಭದಲ್ಲಿ ಕಾರು ಚಲಾಯಿಸುತ್ತಿದ್ದ ಆಚಾರ್ಯ ಸಂಗೀತದಲ್ಲಿ ತಮಗಿರುವ ಆಸಕ್ತಿಯನ್ನು ತಿಳಿಸಿದರು" ಎಂದು ಕಲಾಂ ಹೇಳಿದರು.

"ಗಾಯಕ ಆರ್.ಕೆ. ಶ್ರೀಕಂಠನ್, ವಯೋಲಿನ್ ವಾದಕ ಆರ್.ಆರ್. ಕೇಶವಮೂರ್ತಿ ಹಾಗೂ ಕೊಳಲು ವಾದಕ ಟಿ.ಆರ್. ಮಹಾಲಿಂಗಮ್ ಅವರು ಆಚಾರ್ಯ ಅವರ ಗುರುಗಳು ಎಂದು ತಿಳಿದು ಮತ್ತಷ್ಟು ಅಚ್ಚರಿಯಾಯಿತು. ನಂತರ ಸುಮಾರು 10-15 ನಿಮಿಷಗಳ ಕಾಲ ನಂದೀಶ್ವರ್ ಅವರು ನನ್ನ ಕೋರಿಕೆಯಂತೆ ಕೀರ್ತನೆಗಳನ್ನು ಹಾಡಿದರು. ಎಂದರೋ ಮಹಾನುಬಾವಲು... ಎಂಬ ತ್ಯಾಗರಾಜ ಪಂಚರತ್ನ ಕೀರ್ತನೆಯನ್ನು ಶ್ರೀ ರಾಗದಲ್ಲಿ ಆಚಾರ್ಯ ಹಾಡಿದಾಗ ನಾನು ಅಕ್ಷರಶಃ ಮೈಮರೆತುಬಿಟ್ಟೆ" ಎಂದರು.

ಕಾರು ಚಲಾಯಿಸುತ್ತಲೇ ಹಾಡಿದರು : "ಅಲ್ಲದೇ, ಅವರು ಹಾಡುವುದರ ಜೊತೆಗೆ ಕಾರು ಚಾಲನೆಯನ್ನೂ ಸರಿಯಾಗಿ ಮಾಡುತ್ತಿದ್ದರು" ಎಂದು ಡಾ. ಕಲಾಂ ಮೆಚ್ಚುಗೆ ವ್ಯಕ್ತಪಡಿಸಿದರು.

"ಅಬ್ದುಲ್ ಕಲಾಂ ಅವರು ಭಾರತದ ತಳಮಟ್ಟದಲ್ಲಿಯೂ ಪ್ರತಿಭೆಯನ್ನು ಹುಡುಕುತ್ತಿರುತ್ತಾರೆ. ನಂದೀಶ್ವರ್ ಹಾಡಿದ ಸಂಗೀತ ಕಲಾಂ ಅವರ ಹೃದಯವನ್ನೇ ತಾಗಿದೆ" ಎಂದು ಅವರ ನಂಬಿಕಸ್ಥರಲ್ಲಿ ಓರ್ವರಾದ ಆರ್.ಕೆ. ಪ್ರಸಾದ್ ಹೇಳಿದ್ದಾರೆ.

ಅಬ್ದುಲ್ ಕಲಾಂ ಅವರು ರಾಷ್ಟ್ರಪತಿ ಆದಾಗಿನಿಂದಲೂ ಅವರ ಹಿಂದಿದ್ದ ಐಟಿ ತಂತ್ರಜ್ಞ ವಿ. ಪೊನ್ನರಾಜ್ ಮಾತನಾಡಿ, "ನಂದೀಶ್ವರ್ ಅವರು ಬೆಳಗ್ಗೆ ಕರ್ತವ್ಯಕ್ಕೆ ಹಾಜರಾದಾಗ ಅವರೊಬ್ಬ ಅಪ್ಪಟ ಧಾರ್ಮಿಕ ವ್ಯಕ್ತಿ ಎಂಬುದನ್ನು ನಾನು ಅರಿತೆ. ಅವರು ತಮ್ಮ ಪ್ರತಿ ಕೆಲಸವನ್ನೂ ಆನಂದಿಸುತ್ತಿದ್ದರು. ಅವರ ಜೀವನದ ಪ್ರತಿ ಗಳಿಗೆಯನ್ನೂ ಸಂಗೀತದಷ್ಟೇ ಪ್ರೀತಿಸುತ್ತಾರೆ" ಎಂದು ಹೇಳಿದರು.

acharya

ಭಾಷಣದಲ್ಲಿ ನೆನಪಿಸಿಕೊಂಡ ಕಲಾಂ : "ಪ್ರತಿ ಘಟನೆಯೂ ಕಲಾಂ ಅವರ ಮನಸ್ಸಿನಲ್ಲಿ ದಾಖಲಾಗುತ್ತದೆ. ಅವರು ಬೆಂಗಳೂರಿನಲ್ಲಿ ಭಾಗವಹಿಸಿದ ಕೊನೆಯ ಕಾರ್ಯಕ್ರಮದಲ್ಲಿ ತಮ್ಮ ಭಾಷಣದ ಮಧ್ಯೆ ನಂದೀಶ್ವರ್ ಅವರ ಪ್ರತಿಭೆಯ ಕುರಿತು ಪ್ರಸ್ತಾಪಿಸಿದರು" ಎಂದು ಪೊನ್ನರಾಜ್ ತಿಳಿಸಿದ್ದಾರೆ.

ಕೊನೆಯಲ್ಲಿ ಒನ್ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ಕಾರು ಚಾಲಕ ನಂದೀಶ್ವರ್ ಆಚಾರ್ಯ "ನನ್ನ ಜೀವನದಲ್ಲಿ ಈ ದಿನವನ್ನು ನಾನು ಎಂದಿಗೂ ನೆನಪಿಟ್ಟುಕೊಳ್ಳುತ್ತೇನೆ. ಸಂಗೀತ ಯಾವಾಗಲೂ ನನ್ನ ಮನಸ್ಸಿನಲ್ಲಿರುತ್ತದೆ. ಅಬ್ದುಲ್ ಕಲಾಂ ಅವರು ನನ್ನ ಸಂಗೀತ ಕೇಳಲು ಮನಸ್ಸು ಮಾಡಿದ್ದು ನನ್ನ ಅದೃಷ್ಟ. ಅವರು ನನಗೆ ದೇವರಿದ್ದಂತೆ" ಎಂದು ಹೇಳಿದರು.

ಆಚಾರ್ಯ ಶಿವಮೊಗ್ಗ ಮೂಲದವರು : ಕರ್ನಾಟಕದ ಶಿವಮೊಗ್ಗ ಮೂಲದ ನಂದೀಶ್ವರ್ 25 ವರ್ಷಗಳಿಂದ ಪ್ರೊಟೊಕಾಲ್ ಇಲಾಖೆಯಲ್ಲಿ ಚಾಲಕ ವೃತ್ತಿಯಲ್ಲಿದ್ದಾರೆ. ಅವರಿಗೆ ಸಂಗೀತದ ಕುರಿತು ಆಸಕ್ತಿ ಕೆರಳಿದ್ದು ವಯೋಲಿನ್ ವಿದ್ವಾಂಸರಾಗಿದ್ದ ತಂದೆ ಗಂಗಾಧರ ಆಚಾರ್ಯ ಅವರಿಂದ. ನನ್ನ ಎಂಟನೇ ವಯಸ್ಸಿನಲ್ಲಿಯೇ ಸಂಗೀತದ ಮೋಡಿಗೆ ಸಿಲುಕಿದೆ. ಕಲಾಂ ಅವರಿಂದ ಆಶೀರ್ವಾದ ಸಿಕ್ಕಿದ್ದಕ್ಕೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+