ಮತದ ಜೇನಿಗಾಗಿ ಮಹದಾಯಿ ಜೇನುಗೂಡಿಗೆ ಕೈಹಾಕಿತೆ ಬಿಜೆಪಿ?
ಮಹದಾಯಿ ನೀರಿಗಾಗಿ ರೈತರು ನರಗುಂದದಲ್ಲಿ 2015ರಿಂದ ನಡೆಸುತ್ತಿರುವ ಸತ್ಯಾಗ್ರಹ, ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಒಂದು ರೀತಿಯ ತುರುಸು ಪಡೆದುಕೊಂಡಂತೆ ಕಾಣುತ್ತಿದೆ.
ಕಳಸಾ ಬಂಡೂರಿ ನಾಲೆಗಳೂ ಸೇರಿದಂತೆ ಹಲವು ನಾಲೆಗಳು, ಚಿಕ್ಕಪುಟ್ಟ ಅಣೆಕಟ್ಟೆಗಳ ಮೂಲಕ ಬೆಳಗಾವಿ ಜಿಲ್ಲೆಯ ಖಾನಾಪುರದ ಸಮೀಪ ಹುಟ್ಟುವ ಮಾಂಡೊವಿ ನದಿಯ ಹಲ ತೊರೆಗಳಿಂದ ಮಲಪ್ರಭೆಗೆ ನೀರು ಹರಿಸುವ ಯೋಜನೆ ಜಾರಿಗೆ ಇನ್ನೂ ಮೂಹೂರ್ತ ಕೂಡಿಬಂದಹಾಗಿಲ್ಲ.
ಸುಮಾರು 210 ಟಿಎಂಸಿ ಪ್ರಮಾಣದ ನೀರು ಇರುವ ಮಹದಾಯಿ ನದಿಯಲ್ಲಿ ಕರ್ನಾಟಕದ ನ್ಯಾಯಯುತ ಪಾಲು ಸುಮಾರು 45 ಟಿಎಂಸಿಯಷ್ಟಿದ್ದು, ಅದಿನ್ನೂ ನದಿನೀರು ಹಂಚಿಕೆಯ ಮೂಲಕ ತೀರ್ಮಾನವಾಗಬೇಕಿದೆ. ಅಷ್ಟರಲ್ಲಿ ತಾತ್ಕಾಲಿಕವಾಗಿ 7.56 ಟಿಎಂಸಿಯಷ್ಟು ನೀರನ್ನು ಬಳಸಿಕೊಳ್ಳಲು ಕರ್ನಾಟಕ ಮುಂದಾಗಿತ್ತು.

ಇದಕ್ಕೆ ಬೇಕಾದ ಅನುಮತಿಗಳ ನಂತರ ಶುರುಮಾಡಿದ ಕಳಸಾ ಬಂಡೂರಿ ನಾಲೆಯ ಯೋಜನೆಗಳಿಗೆ ಮೊದಲ ತಡೆ ಬಿದ್ದದ್ದು 2002ರಲ್ಲಿ ಮನೋಹರ್ ಪರಿಕ್ಕರ್ ಅವರು ಮುಖ್ಯಮಂತ್ರಿಗಳಾಗಿದ್ದಾಗ! ಈಗ 15 ವರ್ಷದ ನಂತರವೂ ಅವರೇ ಗೋವಾದ ಮುಖ್ಯಮಂತ್ರಿಗಳಾಗಿದ್ದಾರೆ. ಈಗಲೂ ವಿವಾದ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಆದರೂ ಈ ನಡುವೆ ಆಶಾಜ್ಯೋತಿಯೊಂದು ಮತ್ತೆ ಬೆಳಗಿದಂತಾಗಿ ಆ ಭಾಗದ ರೈತರ ಮನದಲ್ಲಿ ಆಸೆಯ ನಿರಾಸೆಯ ಅಲೆಗಳು ಏಳಲು ಕಾರಣವಾದಂತಹ ಬೆಳವಣಿಗೆಗಳು ನಡೆದವು.
ಭಾರತೀಯ ಜನತಾ ಪಕ್ಷದ ಪರಿವರ್ತನಾ ರ್ಯಾಲಿಯಲ್ಲಿ ಯಡಿಯೂರಪ್ಪನವರು ಮಹದಾಯಿ ಬಗ್ಗೆ ಭರವಸೆ ಹುಟ್ಟಿಸುವ ಮಾತುಗಳನ್ನಾಡಿ, ನೀರು ನಾನು ತರುತ್ತೇನೆ ನೀವು ಯೋಚಿಸಬೇಡಿ ಎಂದು ಗೋವಾ ಮುಖ್ಯಮಂತ್ರಿಗಳ ಪತ್ರದ ಬಗ್ಗೆ ಪ್ರಸ್ತಾಪ ಮಾಡಿದರು. ಇದರಿಂದಾಗಿ ಮಹದಾಯಿ ಹೋರಾಟ ರಾಜಕೀಯ ಅಖಾಡಕ್ಕೆ ನೇರವಾಗಿ ಎಳೆಯಲ್ಪಟ್ಟಿತು.

ಮಹದಾಯಿ ನೀರು ಹಂಚಿಕೆಯ ಬಗ್ಗೆ, ಗೋವಾದ ಮುಖ್ಯಮಂತ್ರಿಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯದೆ ತಮ್ಮ ಪಕ್ಷದ ರಾಜ್ಯಾಧ್ಯಕ್ಷರಿಗೆ ಭರವಸೆಯ ಪತ್ರ ಬರೆದರೆ ಏನೂ ಸಾಧಿಸಲಾಗುವುದಿಲ್ಲ ಎನ್ನುವ ಟೀಕೆಗಳ ಮೂಲಕ ರಾಜಕೀಯದಾಟ ಶುರುವಾಯಿತು. ಕೊನೆಗೆ ರಾಜ್ಯದ ಮುಖ್ಯಮಂತ್ರಿಗಳು ಮಾತುಕತೆಯನ್ನು ಆರಂಭ ಮಾಡಲು ಮನವಿ ಮಾಡಿ ಪತ್ರ ಬರೆದರು.
ಇದೇ ಹೊತ್ತಿನಲ್ಲಿ ಗೋವಾದಲ್ಲೂ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದು ಅಲ್ಲಿನ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಬದಲಿಸಿ ಕರ್ನಾಟಕ ರಾಜ್ಯದ ಚುನಾವಣೆಗಳ ನಂತರವಷ್ಟೇ ಈ ವಿಷಯದ ಬಗ್ಗೆ ಮಾತಾಡಬಹುದು ಎಂದರು. ನ್ಯಾಯಮಂಡಲಿಯಲ್ಲೇ ತೀರ್ಮಾನವಾಗಲಿ ಎನ್ನುವ ತಮ್ಮ ಹಳೆಯ ನಿಲುವನ್ನೇ ಪುನರುಚ್ಚರಿಸಿದರು. ಹಾಗಾಗಿ ಎಲ್ಲಿ ಬಿದ್ದಿದ್ದ ಕಂಬಳಿ ಅಲ್ಲೇ ಬಿದ್ದಂತಾಯಿತು.

ಆದರೆ ಸುಮಾರು 900 ದಿನದಿಂದ ನೀರಿಗಾಗಿ ಚಳವಳಿ ಮಾಡುತ್ತಿದ್ದ ರೈತರಲ್ಲಿ ತಮಗೆ ಭರವಸೆ ನೀಡಿದ್ದ ಯಡಿಯೂರಪ್ಪನವರ ಬಗ್ಗೆ, ಬಿಜೆಪಿಯ ಬಗ್ಗೆ ತಣ್ಣನೆಯ ಆಕ್ರೋಶ ಭುಗಿಲೆದ್ದಿತ್ತು. ಹಾಗಾಗಿ ಬೆಂಗಳೂರಿಗೆ ಬಂದು ನೇರವಾಗಿ ಬಿಜೆಪಿ ಕೇಂದ್ರ ಕಚೇರಿಯ ಎದಿರು ಧರಣಿ ಕುಳಿತರು. ನಾಲ್ಕು ದಿನದ ಧರಣಿಯ ನಂತರ ಇಂದು ರಾಜ್ಯಪಾಲರ ಕಚೇರಿಗೆ, ಚುನಾವಣಾ ಆಯೋಗದ ಕಚೇರಿ, ಮುಖ್ಯಮಂತ್ರಿಗಳ ಮನೆಗಳಿಗೆ ತೆರಳಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಜನವರಿ ತಿಂಗಳ ಕೊನೆಯವರೆಗೆ ಗಡುವನ್ನು ನೀಡುವ ಮೂಲಕ ಸದ್ಯಕ್ಕೆ ಹೋರಾಟಕ್ಕೆ ವಿರಾಮ ನೀಡಿದರು.
ವಾಸ್ತವವಾಗಿ ತಿಂಗಳೊಪ್ಪತ್ತಿನಲ್ಲಿ ಈ ವಿವಾದ ಬಗೆಹರಿಯುವುದೂ ಇಲ್ಲ. ನಮ್ಮ ರಾಜ್ಯದ ರಾಜಕೀಯ ಪಕ್ಷಗಳಿಗೆ ಇದೊಂದು ಚುನಾವಣಾ ವಿಷಯವಾಗಬಲ್ಲುದೇ ಹೊರತು ರೈತರ ಬದುಕಿನ ಪ್ರಶ್ನೆಯಾಗಿ ಕಾಡುವುದಿಲ್ಲ. ಗೋವಾ ಸರ್ಕಾರವೂ ಕೂಡಾ ಈಗ ರಾಜ್ಯದ ಜೊತೆ ಮಾತುಕತೆ ಶುರುಮಾಡುವ ಮನಸ್ಸು ಮಾಡುವ ಸಾಧ್ಯತೆಯಿಲ್ಲ. ಏನಿದ್ದರೂ ರಾಜ್ಯ ಕಾಂಗ್ರೆಸ್, ತನ್ನ ಹೈಕಮಾಂಡ್ ಮೂಲಕ ಗೋವಾ ಕಾಂಗ್ರೆಸ್ಸಿನ ಮೇಲೆ ಒತ್ತಡ ಹಾಕಿ ಅವರ ಮನವೊಲಿಸಿದರೆ... ರಾಜ್ಯ ಬಿಜೆಪಿಯೂ ಹಾಗೇ ಮಾಡಿದರೆ ಮಾತುಕತೆ ಸಾಧ್ಯವಾಗಬಹುದೇನೋ!

ಆದರೆ ಸದ್ಯದ ಪರಿಸ್ಥಿತಿಯಲ್ಲಿ ಹಾಗೆಲ್ಲಾ ಆಗುವ ಸಾಧ್ಯತೆಗಳು ತುಂಬಾ ಕಡಿಮೆ. ಮತವೆಂಬ ಜೇನಿನ ಆಸೆಗೆ ಬಿಜೆಪಿ ಮಹದಾಯಿಯೆಂಬ ಜೇನುಗೂಡಿಗೆ ಕೈಹಾಕುವ ಸಾಹಸ ಮಾಡಿತೇನೋ ಎನ್ನುವ ಅನುಮಾನಕ್ಕೆ ಇಂದಿನ ಬೆಳವಣಿಗೆಗಳು ಕಾರಣವಾದವೇ ಹೊರತು, ಮಹದಾಯಿ ಚಳವಳಿಗೆ ಇದರಿಂದ ಒಂದು ನಯಾಪೈಸೆಯ ಲಾಭವೂ ಆಗಲಿಲ್ಲ ಎಂದರೆ ತಪ್ಪಿಲ್ಲ.
ಒಟ್ಟಾರೆಯಾಗಿ ಇತ್ತೀಚಿನ ಮಹದಾಯಿ ಕುರಿತ ಭರವಸೆಗಳು, ಗೋವಾ ಮುಖ್ಯಮಂತ್ರಿಗಳ ಪತ್ರಗಳೆಲ್ಲಾ ಹಸಿವಿನಿಂದ ಬಳಲಿ ಬಾಯಾರಿ ಕಂಗೆಟ್ಟವನಿಗೆ ಮೃಷ್ಟಾನ್ನದ ಚಿತ್ರವೊಂದನ್ನು ಮುಖದ ಮುಂದೆ ಹಿಡಿದಂತೆ ಆಯಿತಷ್ಟೇ! ಬಹುಶಃ ನ್ಯಾಯಮಂಡಳಿಯು ನೀಡುವ ತೀರ್ಪಿನವರೆಗೆ ಇದನ್ನು ಬಗೆಹರಿಸುವ ಗಂಭೀರ ಪ್ರಯತ್ನಗಳೇನಾದರೂ ಆಗುವುದಿದ್ದರೆ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿನ ಲಾಭ ನಷ್ಟದ ಎಣಿಕೆಯನ್ನು ಇಟ್ಟುಕೊಂಡು ಬಿಜೆಪಿ ಹಾಗೂ ಕಾಂಗ್ರೆಸ್ ಹೈಕಮಾಂಡುಗಳು ಏನಾದರೂ ಮಾಡಬಹುದೆನ್ನುವ ಆಶಾ ಭಾವನೆ ನಮ್ಮ ನಾಡಿನ ರೈತ ಬಾಂಧವರದ್ದು!
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications