ರಾಜ್ಯ ಪಠ್ಯಪುಸ್ತಕ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿರುವುದೇಕೆ?
ಬೆಂಗಳೂರು, ಮೇ 23: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುತ್ತಿರುವ ಕರ್ನಾಟಕದಲ್ಲಿ ಈಗ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದೆ. 6 ರಿಂದ 10ನೇ ತರಗತಿ ಕನ್ನಡ ಭಾಷೆ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕಗಳ ಪರಿಷ್ಕರಣೆ ಆಗುತ್ತಿದ್ದು, ಹಲವು ಊಹಾಪೋಹಗಳು, ವದಂತಿಗಳು ವಿಫುಲವಾಗಿ ಹಬ್ಬುತ್ತಿವೆ.
ಕಟ್ಟರ್ ಬಲಪಂಥೀಯ ವ್ಯಕ್ತಿ ಎನಿಸಿರುವ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿರುವುದು ವಿವಾದ ದಟ್ಟವಾಗಿ ಭುಗಿಲೇಳಲು ಪ್ರಮುಖ ಕಾರಣ ಎನ್ನಲಾಗಿದೆ. ಪಠ್ಯಪುಸ್ತಕಗಳಿಂದ ಭಗತ್ ಸಿಂಗ್ ಅವರ ಗದ್ಯ ಕೈಬಿಡಲಾಗಿದೆ, ಹೆಡ್ಗೇವಾರ್ ಗದ್ಯ ಸೇರಿಸಲಾಗಿದೆ ಎಂಬಿತ್ಯಾದಿ ಹಲವು ವಿಚಾರಗಳು ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಿದೆ. ಸರಕಾರ ಶಾಲೆಗಳನ್ನು ಕೇಸರೀಕರಣಗೊಳಿಸುತ್ತಿದೆ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ರೋಹಿತ್ ಚಕ್ರತೀರ್ಥ ಈ ಬಗ್ಗೆ ಪ್ರತಿಕ್ರಿಯಿಸಿ, ಈಗ ಹರಿದಾಡುತ್ತಿರುವ ಪಿಡಿಎಫ್ ಇತ್ಯಾದಿ ಯಾವುದೂ ಅಧಿಕೃತ ಅಲ್ಲ. ಭಗತ್ ಸಿಂಗ್ ಗದ್ಯವನ್ನು ತೆಗೆದುಹಾಕಿಲ್ಲ. ಈತ ವದಂತಿ ಹಬ್ಬಿಸುತ್ತಿರುವವರು ಯಾರೂ ಪಠ್ಯಪುಸ್ತಕ ಓದಿದವರಲ್ಲ. ಅಧಿಕೃತವಾಗಿ ಪ್ರಕಟವಾಗುವವರೆಗೂ ದಯವಿಟ್ಟು ಕಾಯಿರಿ, ಯಾವ ವದಂತಿಗೂ ಕಿವಿಗೊಡದಿರಿ ಎಂದು ಮನವಿ ಮಾಡಿದ್ಧಾರೆ.

ಬರಗೂರು ತಂದಿದ್ದ ಬದಲಾವಣೆಗಳು
2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (National Curriculum Framework) ಪ್ರಕಾರ ಪಠ್ಯಪುಸ್ತಕಗಳನ್ನು ಪುನಾರಚಿಸಲು 2014ರಲ್ಲಿ ಜಿಎಸ್ ಮೂಡಂಬಡಿತ್ತಾಯ ನೇತೃತ್ವದಲ್ಲಿ ಆಂದೋಲನ ನಡೆದಿತ್ತು. ಆದರೆ, ಆಗ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಠ್ಯಪುಸ್ತಕ ರಚನೆ ಸಮಿತಿಗೆ ಬರಗೂರು ರಾಮಚಂದ್ರಪ್ಪರನ್ನು ನೇಮಕ ಮಾಡಿತು. ಕನ್ನಡ ಮತ್ತು ವಿಜ್ಞಾನ ಪಠ್ಯಗಳಲ್ಲಿ ಸಮಿತಿ ಗಮನಾರ್ಹ ಬದಲಾವಣೆಗಳನ್ನು ಮಾಡಿತು. ಬಿಜೆಪಿ ಸೇರಿದಂತೆ ಬಲಪಂಥೀಯ ಸಂಘಟನೆಗಳು ಈ ಬೆಳವಣಿಗೆಯನ್ನು ಬಲವಾಗಿ ವಿರೋಧಿಸಿದವು.
ಈಗ ಬಿಜೆಪಿ ಸ್ವಂತಬಲದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಪಠ್ಯಕ್ರಮದಲ್ಲಿ ಮತ್ತೆ ಬದಲಾವಣೆ ಮಾಡುವ ನಿರ್ಧಾರಕ್ಕೆ ಬಂದಿತು. ಅಂತೆಯೇ 2020ರಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಹೊಣೆಯನ್ನು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಗೆ ವಹಿಸಲಾಯಿತು. ಬರಗೂರು ರಾಮಚಂದ್ರಪ್ಪರ ಸಮಿತಿ ಜಾರಿಗೆ ತಂದಿದ್ದ ಹಲವು ಬದಲಾವಣೆಗಳನ್ನು ಪರಾಮರ್ಶಿಸಿ ಹಲವನ್ನು ಕೈಬಿಡಲಾಗಿದೆ ಎಂಬ ಸುದ್ದಿ ಇದೆ.
ಆಗಲೇ ಹೇಳಿದಂತೆ ಹುತಾತ್ಮ ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್, ಸಮಾಜ ಸುಧಾರಕ ನಾರಾಯಣ ಗುರು, ಬರಹಗಾರ್ತಿ ಸಾರಾ ಅಬೂಬಕರ್ ಅವರ ಗದ್ಯವನ್ನು ಕೈಬಿಡಲಾಗಿದೆ ಎಂಬ ಗುಸು ಗುಸು ಸದ್ದಿ ಇದೆ. ಆದರೆ, ಭಗತ್ ಸಿಂಗ್ ಮತ್ತು ನಾರಾಯಣಗುರು ಗದ್ಯಗಳನ್ನು ಕೈಬಿಟ್ಟಿರುವ ವಿಚಾರವನ್ನು ಕರ್ನಾಟಕ ಪಠ್ಯಪುಸ್ತಕ ಸಂಸ್ಥೆ ತಳ್ಳಿಹಾಕಿದೆ.

ಸಮರ್ಥಿಸಿಕೊಂಡ ರೋಹಿತ್ ಚಕ್ರತೀರ್ಥ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಹೆಡಗೇವಾರ್ ಬಗೆಗಿನ ಗದ್ಯ ಸೇರಿಸಲಾಗಿರುವುದನ್ನು ರೋಹಿತ್ ಚಕ್ರತೀರ್ಥ ಸಮರ್ಥಿಸಿಕೊಂಡಿದ್ದಾರೆ. "ವ್ಯಕ್ತಿತ್ವ ನಿರ್ಮಾಣ ಹೇಗಿರಬೇಕೆಂಬುದಕ್ಕೆ ಹೆಡಗೇವಾರ್ ಆದರ್ಶವಾಗಿದ್ದಾರೆ. ಆರೆಸ್ಸೆಸ್ ಸಿದ್ಧಾಂತ ಎಂದು ಮೂಗುಮುರಿಯುವ ಬದಲು ಹೆಡಗೇವಾರ್ ಜೀವನದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳಿ. ವ್ಯಕ್ತಿ ಪೂಜೆಗಿಂತ ಮೌಲ್ಯ ಮುಖ್ಯ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಕಾರ್ಲ್ ಮಾರ್ಕ್ಸ್ ವಿಚಾರವೂ ಅದೇ. ಹೆಡಗೇವಾರ್ ಹೇಳುತ್ತಿದ್ದಾರೆಂದು ಈ ವಿಚಾರವನ್ನು ವಿರೋಧಿಸುವುದು ವೋಟ್ ಬ್ಯಾಂಕ್ ರಾಜಕಾರಣವಲ್ಲದೆ ಮತ್ತೇನಲ್ಲ. ವಿವಿಧ ಸಿದ್ಧಾಂತಗಳು, ಸುಳ್ಳು ವಿಚಾರಗಳನ್ನು ಬದಿಗೊತ್ತಿ ವಯೋಮಾನಕ್ಕೆ ತಕ್ಕಂತೆ ಪಠ್ಯಪುಸ್ತಕ ನೀಡಿದ್ದೇವೆ" ಎಂದು ರೋಹಿತ್ ಚಕ್ರತೀರ್ಥ ಅಭಿಪ್ರಾಯಪಟ್ಟಿದ್ದಾರೆ.
ಹಿಂದೆ ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ ವಿರುದ್ಧವೂ ಚಕ್ರತೀರ್ಥ ಸಿಡಿದಿದ್ದಾರೆ. ಬರಗೂರು ಅವರು ಬೌದ್ಧಿಕವಾಗಿ ದಿವಾಳಿ ಆಗಿದ್ದಾರೆ ಎಂದು ಹೇಳಿದ ಚಕ್ರತೀರ್ಥ, 2015ರಲ್ಲಿ ಕುವೆಂಪು, ಹೆಚ್ ಎಸ್ ವೆಂಕಟೇಶಮೂರ್ತಿ, ಚನ್ನವೀರ ಕಣವಿ ಮೊದಲಾದವರ ಪಠ್ಯ ಕೈಬಿಟ್ಟಾಗ ಇವರ್ಯಾರೂ ಯಾಕೆ ಮಾತನಾಡಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಈಗ ಲಭ್ಯ ಇರುವ ಮಾಹಿತಿ ಪ್ರಕಾರ, ಆರೆಸ್ಸೆಸ್ ಸಂಸ್ಥಾಪಕ ಹೆಡಗೇವಾರ್ ಗದ್ಯದ ಜೊತೆಗೆ ಬನ್ನಂಜೆ ಗೋವಿಂದಾಚಾರ್ಯ, ಶತಾವಧಾನಿ ಗಣೇಶ್, ಮಂಜೇಶ್ವರ ಗೋವಿಂದ ಪೈ ಮೊದಲಾದವರು ರಚಿಸಿದ ಪದ್ಯ, ಗದ್ಯಗಳನ್ನು ಪಠ್ಯಪುಸ್ತಕಗಳಿಗೆ ಸೇರಿಸಲಾಗಿದೆ.
"ನಾವು ಅಳವಡಿಸಿಕೊಳ್ಳಬಹುದಾದ ಹೊಸ ಚಿಂತನೆಗಳಿಗೆ ಪೂರಕವಾಗುವಂತೆ ಬದಲಾವಣೆ ತರಲಾಗಿದೆ. ಈ ಜ್ಞಾನಿಗಳ ಕೃತಿಗಳು ಹೊಸ ಭಾಷೆ ಕಲಿಯಲು ಪ್ರೇರೇಪಿಸುತ್ತವೆ. ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಹೆಚ್ಚು ಬೆಳಕು ಚೆಲ್ಲಲಾಗಿದೆ. ಹೆಚ್ಚು ಬೆಳಕಿಗೆ ಬಾರದೇ ಉಳಿದಿರುವ ಕರ್ನಾಟಕದ ಸುರಪುರ ವೆಂಕಟಪ್ಪ ನಾಯಕ, ಮಣಿಪುರದ ರಾಣಿ ಗಾಯಿದಿನ್ಲಿಯು ಮೊದಲಾದ ಕ್ರಾಂತಿಕಾರಿಗಳ ಬಗ್ಗೆ ಗದ್ಯಗಳಿವೆ" ಎಂದು ರೋಹಿತ್ ಹೇಳಿದ್ದಾರೆ.

ನಿರಂಜನಾರಾಧ್ಯರ ಆರೋಪ
ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯರ ಪ್ರಕಾರ ಹಿಂದೆಯೂ ಶಿಕ್ಷಣ ಕ್ಷೇತ್ರದ ಕೇಸರೀಕರಣಕ್ಕೆ ಪ್ರಯತ್ನಗಳಾಗಿದ್ದವಂತೆ. ಆದರೆ, ಶಿಕ್ಷಣ ಕ್ಷೇತ್ರ ಇನ್ನೂ ಯಾರ ಅಂಕೆಯಲ್ಲೂ ಇಲ್ಲದಿದ್ದರಿಂದ ಅದು ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ಅವರು. "ಸರಸ್ವತಿ ಶಿಶು ಮಂದಿರ, ವಿದ್ಯಾ ಭಾರತಿಯಂತಹ ಶಾಲೆಗಳು ಆರ್ಎಸ್ಎಸ್ ಸಿದ್ಧಾಂತಕ್ಕೆ ಪೂರಕವಾಗಿರುವ ವಿಚಾರಗಳನ್ನು ಬಿಂಬಿಸುತ್ತವೆ. ಆದರೆ, ಇದು ಅಷ್ಟೇನೂ ಪರಿಣಾಮಕಾರಿ ಆಗಲಿಲ್ಲ. 1998ರಲ್ಲಿ ಎನ್ಡಿಎ ಸರಕಾರ ಬಂದ ಬಳಿಕ ಕೇಸರೀಕರಣಕ್ಕೆ ಮಾಡಿದ ಪ್ರಯತ್ನವೂ ವಿಫಲವಾಯಿತು. ಶಿಕ್ಷಣ ಸಂಸ್ಥೆಗಳು ರಾಜಕೀಯ ಶಕ್ತಿಗೆ ಹೆದರದೇ ತಮ್ಮತನ ಉಳಿಸಿಕೊಂಡವು. 2014ರ ಬಳಿಕ ಬಹಳ ಬದಲಾವಣೆಗಳಾಗಿವೆ. ಪಠ್ಯಪುಸ್ತಕ ಸಿದ್ಧಪಡಿಸುವ ಇಡೀ ಪ್ರಕ್ರಿಯೇ ಬದಲಾಗಿ ಹೋಗಿದೆ. ಪಠ್ಯಕ್ರಮ ಚೌಕಟ್ಟು ಸಿದ್ಧ ಇರಬೇಕು. ಅತ್ಯುತ್ತಮ ಶಿಕ್ಷಣತಜ್ಞರು ಪಠ್ಯಪುಸ್ತಕ ರಚನೆಯಲ್ಲಿ ಭಾಗಿಯಾಗಬೇಕು. ಅದು ಸಾರ್ವಜನಿಕವಾಗಿ ಲಬ್ಯ ಇದ್ದು ಬಹಳ ಚರ್ಚೆ, ವಿಚಾರ ವಿನಿಮಯ ಆಗಬೇಕು. ಆದರೆ ಇವೆಲ್ಲ ಪ್ರಕ್ರಿಯೆ ಬದಿಗೊತ್ತಿ ಆತುರಾತುರವಾಗಿ ಪಠ್ಯಕ್ರಮ ರಚಿಸಲಾಗುತ್ತಿದೆ" ಎಂದು ನಿರಂಜನಾರಾಧ್ಯ ಹೇಳುತ್ತಾರೆ.

ಸ್ವಪಕ್ಷೀಯರ ವಿರೋಧ
ಬಿಜೆಪಿ ವಿಧಾನಪರಿಷತ್ ಸದಸ್ಯ ಹಾಗು ಮಾಜಿ ಸಚಿವ ಹೆಚ್ ವಿಶ್ವನಾಥ್ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯವನ್ನು ಪ್ರಶ್ನೆ ಮಾಡಿದ್ದಾರೆ. ರಾಜಕೀಯ ವಿಚಾರವನ್ನು ಪಠ್ಯಪುಸ್ತಕದಲ್ಲಿ ತುರುಕಲಾಗುತ್ತಿದೆ ಎಂದು ಪರೋಕ್ಷವಾಗಿ ಕುಟುಕಿದ್ದಾರೆ. ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರೋಹಿತ್ ಚಕ್ರತೀರ್ಥರನ್ನು ನೇಮಿಸಿರುವುದಕ್ಕೆ ಇವರು ಬಲವಾಗಿ ಆಕ್ಷೇಪಿಸಿದ್ಧಾರೆ. "ಶಿಕ್ಷಣ ಕ್ಷೇತ್ರದಲ್ಲಿ ಪರಿಣಿತರಲ್ಲದ ವ್ಯಕ್ತಿಯೊಬ್ಬರನ್ನು ಸಮಿತಿ ಅಧ್ಯಕ್ಷರಾಗಿ ಮಾಡಿದಾಗ ಪಠ್ಯಪುಸ್ತಕಗಳು ರಾಜಕೀಯ ಬಣ್ಣ ಪಡೆಯುತ್ತವೆ. ಪಠ್ಯ ಪುಸ್ತಕಗಳು ರಾಷ್ಟ್ರೀಯ ಪಠ್ಯಕ್ರಮದ ಅಡಿಯಲ್ಲಿ ಬರಬೇಕು. ರಾಜಕೀಯ ಅಜೆಂಡಾದಿಂದ ಮುಕ್ತವಾಗಿರಬೇಕು" ಎಂದು ಅಡಗೂರು ಎಚ್ ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್ ಆಕ್ರೋಶ
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್ಸಿಗರು ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
"ಬಿಜೆಪಿಯವರು ಬೇಕಾದರೆ ತಮ್ಮ ರಾಜಕೀಯ ಸಭೆಗಳಲ್ಲಿ ಹೆಡಗೇವಾರ್, ಗೋಳ್ವಾಲ್ಕರ್, ನಾಥುರಾಮ್ ಗೋಡ್ಸೆಯ ಹೆಸರುಗಳನ್ನ ಬಳಸಿ ವೋಟ್ ಕೇಳಲಿ. ಜನರಿಗೆ ಇಷ್ಟ ಇದ್ದರೆ ವೋಟ್ ಹಾಕುತ್ತಾರೆ. ಆದರೆ, ಸ್ವಾರ್ಥಸಾಧನೆಗಾಗಿ ಶಿಕ್ಷಣವನ್ನು ರಾಜಕೀಯಗೊಳಿಸುವುದು ಸರಿಯಲ್ಲ" ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ಇನ್ನೂ ಮುಂದುವರಿದು, ಮುಂದಿನ ದಿನಗಳಲ್ಲಿ ಮಹಾತ್ಮ ಗಾಂಧಿ ಬಗೆಗಿನ ಗದ್ಯವನ್ನೇ ಇವರು ತೆಗೆದುಹಾಕಿಬಿಡಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. "ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಹೋರಾಟ ನಡೆಸಿ ಹುತಾತ್ಮರಾದವರನ್ನು ನಾವು ಯಾವತ್ತೂ ಮರೆಯಬಾರದು" ಎಂದು ಡಿಕೆಶಿ ತಿಳಿಸಿದ್ದಾರೆ.
-
ಬಜೆಟ್ನಲ್ಲಿ ಅನಿವಾಸಿ ಸಚಿವಾಲಯ ಘೋಷಣೆ ಇಲ್ಲ: ನಿರಾಶೆ ವ್ಯಕ್ತಪಡಿಸಿದ ಡಾ.ರೊನಾಲ್ಡ್ ಕೊಲಾಸೊ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು












Click it and Unblock the Notifications