ಶ್ರೀಲಂಕಾಕ್ಕೆ ಕಾಲಿಟ್ಟಿತು ಇಸ್ಲಾಮಿಕ್ ಸ್ಟೇಟ್; ಭಾರತದ ಎದುರಿಗೆ ನಿಂತ ಅಪಾಯ!
ಕಿಶೋರ್
ನಾರಾಯಣ್
ಮೂಲತಃ
ಮೊಬೈಲ್
ಅಪ್ಲಿಕೇಷನ್
ಡೆವಲಪರ್.
ಬೆಂಗಳೂರಿನಲ್ಲೇ
ಉದ್ಯೋಗ.
ಆದರೆ
ಅಂತರರಾಷ್ಟ್ರೀಯ
ಮಟ್ಟದ
ಬೆಳವಣಿಗೆ,
ಆದರಲ್ಲೂ
ಏಷ್ಯಾ
ಖಂಡದ
ದೇಶಗಳಲ್ಲಿನ
ರಾಜಕೀಯ
ಸ್ಥಿತ್ಯಂತರಗಳನ್ನು
ತುಂಬ
ಹತ್ತಿರದಿಂದ
ಗಮನಿಸುತ್ತಾರೆ.
ಹತ್ತಾರು
ದೇಶ
ಸುತ್ತಾಡಿದ್ದಾರೆ.
ವಿವಿಧ
ಪತ್ರಿಕೆಗಳ,
ವೆಬ್
ಪೋರ್ಟಲ್
ಗಳ
ಅಂಕಣಕಾರರಾಗಿದ್ದಾರೆ.
ಶ್ರೀಲಂಕಾದಲ್ಲಿ
ನಡೆದ
ಭಯೋತ್ಪಾದನೆ
ದಾಳಿ
ಬಗ್ಗೆ
ತಮ್ಮ
ಅಭಿಪ್ರಾಯ,
ಒಳನೋಟವನ್ನು
ದಾಖಲಿಸಿದ್ದಾರೆ.
-ಸಂಪಾದಕ
***
ಕಳೆದ ಹತ್ತು ವರ್ಷಗಳಿಂದ ನೆಮ್ಮದಿಯಾಗಿದ್ದ ದೇಶ ಶ್ರೀಲಂಕಾ. ಅಲ್ಲಿ ಏಕಾಏಕಿ ಮುನ್ನೂರು ಮಂದಿಯನ್ನು ಕೊಲ್ಲುವಂಥ, ಐನೂರಕ್ಕೂ ಹೆಚ್ಚು ಮಂದಿಗೆ ಗಾಯವಾಗುವಂಥ ಉಗ್ರಗಾಮಿಗಳ ದಾಳಿ ನಡೆದಿದೆ. ಮೂರು ಚರ್ಚ್ ಗಳು, ವಿದೇಶೀಯರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸ್ತವ್ಯ ಹೂಡುವ ಫೈವ್ ಸ್ಟಾರ್ ಹೋಟೆಲ್ ಗಳನ್ನೇ ಗುರಿ ಮಾಡಿಕೊಂಡು, ಕೊಲಂಬೋದಲ್ಲಿ ರಕ್ತ ಹರಿಸಲಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪ್ರಾಥಮಿಕ ಮಾಹಿತಿ ಪ್ರಕಾರ, ಬಹುತೇಕ ಕಡೆ ನಡೆದಿರುವುದು ಆತ್ಮಾಹುತಿ ದಾಳಿ. ಯಾವುದೂ ವಿಫಲ ಆಗದಂತೆ ಬಹಳ ಯೋಜನೆ ರೂಪಿಸಿ, ಕೃತ್ಯ ಎಸಗಲಾಗಿದೆ. ಸದ್ಯಕ್ಕೆ ಈ ಪೈಶಾಚಿಕ ಕೃತ್ಯದ ಹಿಂದೆ ಯಾರಿದ್ದಾರೆ ಎಂಬ ಸಂಗತಿಯನ್ನು ಪೂರ್ಣ ಪ್ರಮಾಣದಲ್ಲಿ ಶ್ರೀಲಂಕಾ ಸರಕಾರ ಹೊರಗೆಡವಿಲ್ಲ. ಆದರೆ ಇದು ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನಲ್ಲಿ ಮಸೀದಿ ಮೇಲೆ ನಡೆದ ದಾಳಿಯ ಪ್ರತೀಕಾರ ಎಂದು ಶ್ರೀಲಂಕಾ ಸಚಿವ ತಿಳಿಸಿದ್ದಾರೆ.
ಇದು ಮುಸ್ಲಿಂ ಮೂಲಭೂತವಾದಿ ಸಂಘಟನೆಯದೇ ಕೃತ್ಯ ಎಂದು ಸೂಚ್ಯವಾಗಿ ತಿಳಿಸಲಾಗಿದೆ. ಏಕೆಂದರೆ, ಶ್ರೀಲಂಕಾದಲ್ಲಿ ಸನ್ನಿವೇಶ ಮೊದಲ ಸೂಕ್ಷ್ಮವಾಗಿದೆ. ಈಗ ಮತ್ತೊಂದು ಕೋಮು ಗಲಭೆ ಸೃಷ್ಟಿಯಾದರೆ ಅಪಾಯ ಮೈ ಮೇಲೆ ಎಳೆದುಕೊಂಡಂತೆ ಎಂಬ ಮುನ್ನೆಚ್ಚರಿಕೆ ಕಾರಣಕ್ಕೆ ಯಾವುದನ್ನೂ ಪೂರ್ತಿ ಬಯಲಾಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ನ್ಯಾಯಬದ್ಧ ಹಕ್ಕುಗಳಿಗಾಗಿ ಹೋರಾಟ
ಶ್ರೀಲಂಕಾ ಎಂಬ ಪುಟ್ಟ ರಾಷ್ಟ್ರದಲ್ಲಿ ಸಿಂಹಳೀಯರೇ ಬಹುಸಂಖ್ಯಾತರು. ಆ ನಂತರ ಭಾರತೀಯ ಮೂಲದ ತಮಿಳರು, ತಮಿಳು ಮುಸ್ಲಿಮರು, ಮಲಯ್ ಮುಸ್ಲಿಮರು (ಮಲೇಷ್ಯಾ ಮುಸ್ಲಿಮರು) ಹೀಗೆ ವಿವಿಧ ಧರ್ಮ, ಸಮುದಾಯಗಳಿವೆ. ತಮಗೆ ಪ್ರತ್ಯೇಕ ರಾಷ್ಟ್ರ ಬೇಕು ಎಂದು ಹೋರಾಟ ನಡೆಸಿದ ಎಲ್ಟಿಲ್ಟಿಇ ಬಗ್ಗೆ, ಅ ನಂತರ ಅದು ಸಂಪೂರ್ಣ ನಾಮಾವಶೇಷ ಅದ ಬಗ್ಗೆ ಎಲ್ಲರಿಗೂ ಗೊತ್ತು. ನಾಗರಿಕ ಯುದ್ಧಗಳಿಂದ ಯಾವುದೇ ಪರಿಹಾರ ಸಿಗುವುದು ಕಷ್ಟ ಎಂಬುದು ಗೊತ್ತಾದ ಮೇಲೆ ಭಾರತ ಮೂಲದ ತಮಿಳರು ತಮ್ಮ ನ್ಯಾಯಬದ್ಧವಾದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಈ ತಮಿಳರನ್ನು ಬ್ರಿಟಿಷರ ಕಾಲದಲ್ಲಿ ಕೂಲಿಗಳನ್ನಾಗಿ ಭಾರತದಿಂದ ಶ್ರೀಲಂಕಾಗೆ ಕರೆದೊಯ್ಯಲಾಯಿತು. ಕಾರ್ಮಿಕ ವರ್ಗಕ್ಕೆ ಬಹುತೇಕ ಸಂದರ್ಭದಲ್ಲಿ ಆಗುವ ದೌರ್ಜನ್ಯ, ಶೋಷಣೆ ಇವರ ಮೇಲೂ ಆಗಿದ್ದರಿಂದ ಉಗ್ರ ಹೋರಾಟ ಕೈಗೊಂಡರು. ಅದು ಕೊನೆಗೆ ತಲುಪಿಕೊಂಡಿದ್ದೆಲ್ಲಿ ಎಂಬುದು ಈಗ ಎಲ್ಲರಿಗೂ ಗೊತ್ತಿರುವ ಸಂಗತಿ.
ಎನ್ ಟಿಜೆಗೆ ಅಷ್ಟು ಶಕ್ತಿಯಿಲ್ಲ ಎನ್ನುವ ಸ್ಥಳೀಯರು
ತಮಿಳರ ಹೋರಾಟಕ್ಕೆ ಮುಂಚಿತವಾಗಲಿ, ಹೋರಾಟ ನಡೆಯುವಾಗ ಆಗಲೀ ಅಥವಾ ಎಲ್ಟಿಲ್ಟಿಇ ಸಂಪೂರ್ಣವಾಗಿ ನಾಮಾವಶೇಷವಾದ ನಂತರವಾಗಲಿ ಎಲ್ಲೂ ಗುರುತಿಸಿಕೊಳ್ಳದಿದ್ದವರು ತಮಿಳು ಮುಸ್ಲಿಮರು. ಆದರೆ ಇತ್ತೀಚಿನ ವರ್ಷಗಳಲ್ಲಿ ಸಣ್ಣ ಕಿಡಿಯಂತೆ ಹೊತ್ತಿಕೊಂಡ ಆಸೆ ಏನೆಂದರೆ, ಶ್ರೀಲಂಕಾದಲ್ಲಿ ಪ್ರತ್ಯೇಕ ರಾಷ್ಟ್ರದ ಪ್ರಯತ್ನ. ಈಗ ಚರ್ಚೆಗೆ ಬಂದಿರುವ ನ್ಯಾಷನಲ್ ತೌಹಿದ್ ಜಮಾತ್ ಕಳೆದ ವರ್ಷ ಬೌದ್ಧರ ಪುತ್ಥಳಿಗಳನ್ನು ಕಿತ್ತು ಹಾಕಿ, ತನ್ನ ಅಸ್ತಿತ್ವವನ್ನು ಸಾರಿತು. ಆದರೆ ಅದು ಬಾಂಬ್ ಗಳನ್ನು ಇಟ್ಟು, ಆತ್ಮಾಹುತಿ ದಾಳಿ ನಡೆಸುವ ಬಗ್ಗೆ ಬೆಳೆದದ್ದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಸ್ಥಳೀಯವಾಗಿ ಹೇಳುವ ಪ್ರಕಾರ, ಎನ್ ಟಿಜೆಗೆ ಇಷ್ಟು ದೊಡ್ಡ ಮಟ್ಟದ ದಾಳಿ ನಡೆಸುವ ಸಂಘಟನಾತ್ಮಕ ಶಕ್ತಿ ಇಲ್ಲ. ಆದರೆ ಈ ದಾಳಿ ಮಾಡಿರುವುದು ಶ್ರೀಲಂಕಾ ನಾಗರಿಕರು ಹಾಗೂ ಮುಸ್ಲಿಂ ಮೂಲಭೂತವಾದಿಗಳು ಎಂದು ಅಲ್ಲಿನ ಸಚಿವರೇ ಹೇಳುತ್ತಿರುವುದರಿಂದ ಈಗ ಹೆಚ್ಚು ಸ್ಪಷ್ಟವಾಗುತ್ತಿದೆ.
ಪ್ರತೀಕಾರವನ್ನು ತೀರಿಸಿಕೊಂಡ ಸಂದೇಶ
ಶ್ರೀಲಂಕಾದಲ್ಲಿ ಕಳೆದ ನೂರು-ನೂರೈವತ್ತು ವರ್ಷದಲ್ಲಿ ಕ್ರಿಶ್ಚಿಯಾನಿಟಿ ವ್ಯಾಪಿಸುತ್ತಲೇ ಇದೆ. ಅಲ್ಲಿನ ಸಮಾಜದಲ್ಲಿ ಕ್ರಿಶ್ಚಿಯನ್ ಆಗಿ ಮತಾಂತರ ಆದವರಿಗೆ ಗೌರವ ಏನೂ ಕಡಿಮೆ ಆಗುವುದಿಲ್ಲ (ಉದಾಹರಣೆಗೆ ಭಾರತದಲ್ಲಿ ಮತಾಂತರ ಆದ ನಂತರವೂ ಮನೆತನದ ಹೆಸರು ಉಳಿಸಿಕೊಂಡು ಮುಂದುವರಿಯುವವರ ಸಂಖ್ಯೆ ದೊಡ್ಡದಿದೆ). ನ್ಯೂಜಿಲೆಂಡ್ ನ ಕ್ರೈಸ್ಟ್ ಚರ್ಚ್ ನ ಮಸೀದಿಗಳ ಮೇಲೆ ನಡೆದ ದಾಳಿಯಲ್ಲಿ ಮುಸ್ಲಿಮರು ಮೃತಪಟ್ಟರಲ್ಲ, ಅದಕ್ಕೆ ಪ್ರತೀಕಾರವಾಗಿ ಶ್ರೀಲಂಕಾವನ್ನು ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇದು ಕೂಡ ಒಂದು. ಈ ವರೆಗೆ ಎನ್ ಟಿಜೆ ಬಗ್ಗೆ ಶ್ರೀಲಂಕಾ ಸರಕಾರ ಗಂಭೀರವಾಗಿ ಚಿಂತಿಸಿರಲಿಲ್ಲ. ಸಂಘಟನೆಯೊಳಗೆ ನಡೆಯುತ್ತಿದ್ದ ಬೆಳವಣಿಗೆಯನ್ನು ನಿರ್ಲಕ್ಷ್ಯ ಮಾಡಿತ್ತು. ಪ್ರಾಯಶಃ ಇದೇನು ಮಾಡಬಹುದು ಎಂಬ ಧೋರಣೆಯೂ ಇರಬಹುದು. ಜತೆಗೆ ಕ್ರಿಶ್ಚಿಯನ್ನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂದಿದ್ದರಿಂದ ವಿಶ್ವದಾದ್ಯಂತ ತನ್ನ ಅಸ್ತಿತ್ವವನ್ನು, ಪ್ರತೀಕಾರ ತೀರಿಸಿಕೊಂಡ ಸಂದೇಶವನ್ನು ಎನ್ ಟಿಜೆ ಕಳುಹಿಸಿದಂತಾಗಿದೆ.
ಭಾರತದ ಗುಪ್ತಚರದಳ ಮಾಹಿತಿ ನೀಡಿತ್ತು
ನಿಮಗೆ ಗೊತ್ತಿರಲಿ, ಇಂಥದ್ದೊಂದು ದಾಳಿಗೆ ಯೋಜನೆ ಆಗುತ್ತಿದೆ ಎಂಬ ಸಂಗತಿಯನ್ನು ಶ್ರೀಲಂಕಾಗೆ ಮುಂಚಿತವಾಗಿಯೇ ಭಾರತದ ಗುಪ್ತಚರ ದಳವು ಮುಟ್ಟಿಸಿದೆ. ಆದರೆ ಆ ದೇಶದ ರಾಜಕೀಯ ಪರಿಸ್ಥಿತಿ- ಸನ್ನಿವೇಶದ ಮೇಲಾಟದಲ್ಲಿ ಮುಂಜಾಗ್ರತೆ ವಹಿಸಿಲ್ಲ. ಈ ಲೇಖನ ಬರೆಯುವ ಹೊತ್ತಿಗೆ ಗೊತ್ತಾದ ಮಾಹಿತಿ ಏನೆಂದರೆ, ರಾಯಿಟರ್ಸ್ ಸುದ್ದಿ ಸಂಸ್ಥೆಯ ಪ್ರಕಾರ, ಐಎಸ್ (ಇಸ್ಲಾಮಿಕ್ ಸ್ಟೇಟ್) ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಸ್ಥಳೀಯ ಉಗ್ರ ಸಂಘಟನೆಗಳ ಬೆಂಬಲ ಇಲ್ಲದೆ ಇಂಥ ದೊಡ್ಡ ಮಟ್ಟದ ದಾಳಿ ಸಂಘಟಿಸುವುದು ಅಸಾಧ್ಯದ ಮಾತು. ಇನ್ನು ಐಎಸ್ ಕಾಲಿಟ್ಟ ದೇಶದಲ್ಲಿ ಹಾಗೂ ಅದರ ಅಕ್ಕಪಕ್ಕದ ದೇಶಗಳಲ್ಲಿ ಏನಾಗಿದೆ ಎಂಬುದು ವರ್ತಮಾನ ನಮಗೆ ತಿಳಿಸಿಕೊಟ್ಟಿದೆ. ಮುಂಬೈನಲ್ಲಿ ಹನ್ನೊಂದು ವರ್ಷದ ಹಿಂದೆ ದಾಳಿ ನಡೆಯಿತಲ್ಲಾ, ಆಗಿನಿಂದ ಭಾರತದ ಗುಪ್ತಚರ ಇಲಾಖೆ ಕೆಲಸ ನಿರ್ವಹಿಸುವ ರೀತಿಯೇ ಬದಲಾಗಿದೆ. ಭಾರತ ಮಾತ್ರವಲ್ಲ, ಇಡೀ ದಕ್ಷಿಣ ಏಷ್ಯಾದ ಬೆಳವಣಿಗೆಗಳನ್ನು ಕೂಡ ಹತ್ತಿರದಿಂದ ಗಮನಿಸಿ, ಅಗತ್ಯ ಕಂಡು ಬಂದಾಗ ಮಾಹಿತಿ ಹಂಚಿಕೊಳ್ಳುತ್ತಿದೆ.