ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಗೆದ್ದು ಬೀಗಿದ ಬಿಜೆಪಿ
ನವದೆಹಲಿ, ಮೇ 17: ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿನ ಹಿಂದೂ ಮತಗಳ ಧ್ರುವೀಕರಣವು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿಯೂ ಹೆಚ್ಚು ಮತಗಳನ್ನು ಪಡೆದುಕೊಳ್ಳಲು ಬಿಜೆಪಿಗೆ ನೆರವಾಗಿದೆ.
ಕರ್ನಾಟಕದಲ್ಲಿ 33 ಕ್ಷೇತ್ರಗಳಲ್ಲಿ ಮುಸ್ಲಿಮರ ಪ್ರಾಬಲ್ಯ ಹೆಚ್ಚಿದೆ. ಹಿಂದೂ ಮತಗಳ ಧ್ರುವೀಕರಣವು ಬಿಜೆಪಿ ಪರವಾಗಿ ಕೆಲಸ ಮಾಡಿರುವುದಲ್ಲದೆ, ಈ ಭಾಗಗಳಲ್ಲಿ ಮುಸ್ಲಿಂ ಮತಗಳು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹಂಚಿಹೋಗಿದ್ದು ಕೂಡ ಬಿಜೆಪಿ ಗಮನಾರ್ಹ ಪ್ರಮಾಣದಲ್ಲಿ ಮತಗಳನ್ನು ಪಡೆದುಕೊಳ್ಳುವುದಕ್ಕೆ ಕಾರಣ.
ಬಿಜೆಪಿ ಬಹುತೇಕ ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯವನ್ನು ಮರಳಿ ಪಡೆದುಕೊಂಡಿದೆ. 2013ರಲ್ಲಿ ಕಳೆದುಕೊಂಡಿದ್ದ ಕ್ಷೇತ್ರಗಳ ಮೇಲಿನ ಹಿಡಿತವನ್ನು ಮತ್ತೆ ಗಳಿಸಿದೆ. ಬಿಜೆಪಿಗೆ ಹಿನ್ನಡೆಯಾಗಬಹುದು ಎಂದು ನಿರೀಕ್ಷಿಸಲಾಗಿದ್ದ ಪ್ರದೇಶಗಳಲ್ಲಿಯೂ ಅದು ಅಧಿಕ ಸ್ಥಾನಗಳನ್ನು ಪಡೆದುಕೊಂಡಿದೆ. ದೇಶದ ಒಟ್ಟಾರೆ ಬೆಳವಣಿಗೆಗಳು ಮಾತ್ರವಲ್ಲ, ರಾಜ್ಯದೊಳಗಿನ ಬೆಳವಣಿಗೆ ಹಾಗೂ ಚಟುವಟಿಕೆಗಳು ಸಹ ಬಿಜೆಪಿಯ ಮತಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಿಲ್ಲ ಎನ್ನುವುದು ಸಾಬೀತಾಗಿದೆ.

ಮುಸ್ಲಿಂ ಪ್ರದೇಶದಲ್ಲಿ ಬಿಜೆಪಿ ಪತಾಕೆ
ಮುಸ್ಲಿಂ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಕಾಂಗ್ರೆಸ್ 2013ರಲ್ಲಿ 19 ಸ್ಥಾನಗಳಲ್ಲಿ ಗೆದ್ದಿದ್ದರೆ, ಈ ಬಾರಿ ಅದರ ಸಂಖ್ಯೆ 15ಕ್ಕೆ ಇಳಿದಿದೆ. ಜೆಡಿಎಸ್ 2013ರಲ್ಲಿ 5 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಪ್ರಸಕ್ತ ಚುನಾವಣೆಯಲ್ಲಿ ಕೇವಲ 3 ಕ್ಷೇತ್ರಗಳಲ್ಲಿ ಗೆದ್ದಿದೆ. ಇನ್ನು ಕಳೆದ ಚುನಾವಣೆಯಲ್ಲಿ 4 ಸ್ಥಾನ ಪಡೆದಿದ್ದ ಪಕ್ಷೇತರರು ಈ ಬಾರಿ ಇಲ್ಲಿ ಅಸ್ತಿತ್ವವನ್ನೇ ಕಂಡುಕೊಂಡಿಲ್ಲ.

ಅಹಿಂದದಿಂದ ಕಾಂಗ್ರೆಸ್ಗೆ ಲಾಭವಿಲ್ಲ
ಪರಿಶಿಷ್ಟ ಜಾತಿಯ ಮತಗಳು ಅಧಿಕವಿರುವ ಪ್ರದೇಶಗಳಲ್ಲಿಯೂ ಬಿಜೆಪಿ ಉತ್ತಮ ಸಾಧನೆ ಮಾಡಿದೆ. 2013ರಲ್ಲಿ ಪರಿಶಿಷ್ಟ ಜಾತಿ ಪ್ರಾಬಲ್ಯದ ಕ್ಷೇತ್ರಗಳಲ್ಲಿ 11 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿ, 2018ರಲ್ಲಿ ಈ ಸಂಖ್ಯೆಯನ್ನು 22ಕ್ಕೆ ಹೆಚ್ಚಿಸಿಕೊಂಡಿದೆ. ಪರಿಶಿಷ್ಟ ಜಾತಿಯ ಜನಸಂಖ್ಯೆ ಶೇ 15ಕ್ಕಿಂತ ಅಧಿಕವಿರುವಲ್ಲಿ 64 ಸೀಟುಗಳಿವೆ.
ಪರಿಶಿಷ್ಟ ಜಾತಿಯ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ 2013ರಲ್ಲಿ ಕಾಂಗ್ರೆಸ್ 36 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದ್ದರೆ, 2018ರಲ್ಲಿ ಅದರ ಸಾಮರ್ಥ್ಯ 26ಕ್ಕೆ ಕುಸಿದಿದೆ. 2013ಕ್ಕೆ ಹೋಲಿಸಿದರೆ ಜೆಡಿಎಸ್ ಸಾಧನೆ ಹೆಚ್ಚೂ ಕಡಿಮೆ ಅದೇ ಮಟ್ಟದಲ್ಲಿದೆ. 2013ರಲ್ಲಿ 14 ಸೀಟುಗಳನ್ನು ಗೆದ್ದಿದ್ದ ಜೆಡಿಎಸ್, ಈ ಚುನಾವಣೆಯಲ್ಲಿ ಅದನ್ನು 15ಕ್ಕೆ ಏರಿಸಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಈ ಬಾರಿ ಒಬ್ಬ ಪಕ್ಷೇತರ ಅಭ್ಯರ್ಥಿಗೆ ಮಾತ್ರ ಗೆಲವು ಒಲಿದಿದೆ.

ದಲಿತ ವಿರೋಧಿ ಹಣೆಪಟ್ಟಿ
ಬಿಜೆಪಿಯು ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ದೇಶದಾದ್ಯಂತ ಪ್ರತಿಭಟನೆಗಳು ವ್ಯಾಪಕವಾಗಿ ನಡೆದಿದ್ದರಿಂದ ಪರಿಶಿಷ್ಟ ಜಾತಿಯ ಬಾಹುಳ್ಯವಿರುವ ಕ್ಷೇತ್ರಗಳಲ್ಲಿ ಬಿಜೆಪಿಯ ಸಾಧನೆ ಕಳಪೆಯಾಗಿರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬಿಜೆಪಿ ವಿವಿಧ ಕಾರಣಗಳ ನೆರವಿನಿಂದ ಈ ಕ್ಷೇತ್ರಗಳಲ್ಲಿ ತನ್ನ ಸ್ಥಾನವನ್ನು ದುಪ್ಪಟ್ಟು ಮಾಡಿಕೊಂಡಿದೆ.
ಅಹಿಂದ ಕಾರ್ಯಸೂಚಿ ಕಾಂಗ್ರೆಸ್ ಪರವಾಗಿ ಗಟ್ಟಿಯಾಗಿ ಕೆಲಸ ಮಾಡಲಿಲ್ಲ. ಕುರುಬರು ಮತ್ತು ಇತರೆ ಹಿಂದುಳಿದ ವರ್ಗದವರು ಬಿಜೆಪಿ ಕಡೆಗೆ ಹೊರಳಿದರು ಎಂದು ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ಹೇಳುತ್ತಾರೆ.
ಒಳ ಮೀಸಲಾತಿ ನೀಡುವ ಸಂಬಂಧದ ಶಿಫಾರಸನ್ನು ಒಳಗೊಂಡ ಪ್ರಸ್ತಾವವನ್ನು ಅನುಷ್ಠಾನಕ್ಕೆ ತರುವಲ್ಲಿ ವಿಫಲರಾದ ಕಾರಣಕ್ಕೆ ಸಿದ್ದರಾಮಯ್ಯ ಅವರ ವಿರುದ್ಧ ದಲಿತರು ಕೂಡ ಅಸಮಾಧಾನ ಹೊಂದಿದ್ದರು. ಕಾಂಗ್ರೆಸ್ ಸೃಷ್ಟಿಸಲು ಪ್ರಯತ್ನಿಸಿದ ಒಟ್ಟಾರೆ ಸಾಮಾಜಿಕ ಚಟುವಟಿಕೆಗಳು ಅದಕ್ಕೆ ಎರವಾದರೆ, ಅಂತಿಮವಾಗಿ ಬಿಜೆಪಿಗೆ ಲಾಭಕರವಾಯಿತು ಎಂದು ಅವರು ವಿವರಿಸುತ್ತಾರೆ.
ಮತ್ತೊಂದು ಪ್ರಮುಖ ಕಾರಣವೆಂದರೆ ಬಿ. ಶ್ರೀರಾಮುಲು ಬಿಜೆಪಿಗೆ ಮರಳಿದ್ದು. ಪರಿಶಿಷ್ಟ ವರ್ಗದ ಅತಿ ದೊಡ್ಡ ಮುಖಂಡರನ್ನಾಗಿ ಅವರನ್ನು ಬಿಂಬಿಸಿದ್ದು, ಈ ಭಾಗಗಳಲ್ಲಿ ಪಕ್ಷ ಗಮನಾರ್ಹ ಸಾಧನೆ ಮಾಡಲು ಕಾರಣವಾಯಿತು.

ಗಣಿ ಪ್ರದೇಶದಲ್ಲಿ ಅರಳಿದ ಕಮಲ
ಗಣಿ ಚಟುವಟಿಕೆಯ ಪ್ರದೇಶಗಳಲ್ಲಿ ಬಿಜೆಪಿ ಭಾರಿ ಪ್ರಮಾಣದ ಮತಗಳನ್ನು ಪಡೆದುಕೊಂಡಿದೆ. 2013ರಲ್ಲಿ 4 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ, ಈ ಬಾರಿ 15 ಸ್ಥಾನಗಳಿಗೆ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡಿದೆ. ಗಣಿ ಪ್ರದೇಶ ವ್ಯಾಪ್ತಿಯಲ್ಲಿ 26 ಸೀಟುಗಳಿವೆ. ಇನ್ನೊಂದೆಡೆ 2013ರಲ್ಲಿ 18 ರಷ್ಟಿದ್ದ ಕಾಂಗ್ರೆಸ್ನ ಬಲಾಬಲ 11ಕ್ಕೆ ಕುಸಿತ ಕಂಡಿದೆ. 2013ರಲ್ಲಿ 3 ಸೀಟುಗಳನ್ನು ಹೊಂದಿದ್ದ ಜೆಡಿಎಸ್, ಈ ಬಾರಿಯ ಸಾಧನೆ ಶೂನ್ಯ. ಪಕ್ಷೇತರರು ಕಳೆದ ಬಾರಿ ಒಂದು ಸ್ಥಾನ ಗಿಟ್ಟಿಸಿದ್ದರು. ಈ ಬಾರಿ ಯಾವ ಪಕ್ಷೇತರ ಅಭ್ಯರ್ಥಿಗೂ ಗೆಲುವು ಸಿಕ್ಕಿಲ್ಲ.

ಮತ್ತೆ ಹಿಡಿತ ಪಡೆದ ಬಿಜೆಪಿ
ಲಿಂಗಾಯತ ಪ್ರಾಬಲ್ಯದ ಪ್ರದೇಶಗಳಲ್ಲಿ 2008ರಲ್ಲಿನ ತನ್ನ ಸಾಧನೆಯನ್ನು ಬಿಜೆಪಿ ಪುನರಾವರ್ತಿಸಿದೆ. ಈ ಬಾರಿ ಅದು 38 ಕ್ಷೇತ್ರಗಳಲ್ಲಿ ಗೆಲುವಿನ ರುಚಿ ಕಂಡಿದೆ. 2013ರಲ್ಲಿ ಈ ಭಾಗಗಳಲ್ಲಿ ಬಿಜೆಪಿಗೆ ಸಿಕ್ಕಿದ್ದು 11 ಸೀಟುಗಳು ಮಾತ್ರ. ಕಾಂಗ್ರೆಸ್ ಈ ಭಾರಿ ಇಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. 2013ರಲ್ಲಿ 47 ಸೀಟುಗಳನ್ನು ಹೊಂದಿದ್ದ ಕಾಂಗ್ರೆಸ್ಗೆ ಈ ಬಾರಿ ಸಿಕ್ಕಿರುವುದು ಕೇವಲ 21. ಕಳೆದ ಚುನಾವಣೆಯಲ್ಲಿ 11 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಜೆಡಿಎಸ್, ಈ ಸಲ 10 ಕಡೆ ಗೆದ್ದಿದೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications