ಬಸವನ ಬಾಗೇವಾಡಿ ಕ್ಷೇತ್ರ: ಯಾರಿಗೊಲಿಯುವುದು ಬಸವಣ್ಣನ ನೆಲೆ?
ಬಸವನ ಬಾಗೇವಾಡಿ ಎಂದೊಡನೆ ನೆನಪಾಗುವುದು ವಚನ ಕ್ರಾಂತಿಯ ಹರಿಕಾರ ಬಸವಣ್ಣ. ಅವರು ಹುಟ್ಟಿದ, ಲಿಂಗೈಕ್ಯರಾದ ಸ್ಥಳವಾಗಿರುವುದರಿಂದ ಇದು ಪುಣ್ಯಕ್ಷೇತ್ರವಾಗಿಯೂ, ಪ್ರವಾಸಿ ತಾಣವಾಗಿಯೂ ಪ್ರಸಿದ್ಧಿ.
12 ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ, ಸಾಮಾಜಿಕ ಜಾಗೃತಿಗೆ ಮುನ್ನುಡಿ ಬರೆದ ಬಸವಣ್ಣನವರು ಲಿಂಗೈಕ್ಯರಾದ ಇದು ವಿಜಯಪುರ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ಕೇಂದ್ರಗಳಲ್ಲೊಂದು.
ಬಸವನ ಬಾಗೇವಾಡಿಯನ್ನು 2013 ರ ಫೆಬ್ರವರಿ ಬಜೆಟ್ ನಲ್ಲಿ ಕರ್ನಾಟಕ ಸರ್ಕಾರ ಹೊಸ ತಾಲೂಕನ್ನಾಗಿ ಘೋಷಿಸಿತ್ತು. ಇಲ್ಲಿನ ಕೃಷ್ಣಾ ನದಿಗೆ ಕಟ್ಟಲಾದ ಆಲಮಟ್ಟಿ ಜಲಾಶಯ ಏಷ್ಯಾ ಖಂಡದಲ್ಲೇ ಅತೀ ದೊಡ್ಡದು ಎಂಬ ಖ್ಯಾತಿ ಗಳಿಸಿದೆ. ಆಲಮಟ್ಟಿ ಜಲಾಶಯದಿಂದಾಗಿ ಜಮೀನು, ಮನೆ ಕಳೆದುಕೊಂಡವರು ನೂರಾರು ಜನ. ಇಲ್ಲಿನ ಇಳಕಲ್ಲು ಸೀರೆ ಮತ್ತು ಖಾದಿ ಬಟ್ಟೆ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಲಂಬಾಣಿ ಜನರನ್ನೂ ಕಾಣಬಹುದು.

ಇಲ್ಲಿನ ಮುಖ್ಯ ಭಾಷೆ ಕನ್ನಡ. ಉತ್ತರ ಕರ್ನಾಟಕ ಶೈಲಿಯ ಸೊಗಸಾದ ಕನ್ನಡ ಇಲ್ಲಿನ ಆಡುಬಾಷೆ. ಕೃಷಿಯೊಂದಿಗೆ ನೇಕಾರಿಕೆಯನ್ನೂ ಆದಾಯದ ಮೂಲವನ್ನಾಗಿ ಜನ ನಂಬಿದ್ದಾರೆ.
ಇಲ್ಲಿನ ರಾಜಕೀಯ ವೃತ್ತಾಂತ ಕೆಣಕುವುದಾದರೆ ಈಗ ಶಾಸಕರಾಗಿರುವ ಕಾಂಗ್ರೆಸ್ ನ ಶಿವಾನಂದ ಪಾಟೀಲ ಈ ಬಾರಿಯೂ ಸ್ಪರ್ಧಿಸುವುದಂತೂ ಖಚಿತ. ಶಿವಾನಂದ ಪಾಟೀಲರು ಸ್ವಂತ ಬಲದ ಮೆಲೆ ಗೆಲ್ಲುವ ತಾಕತ್ತಿನ ರಾಜಕಾರಣಿ. ಅವರ ವಿರುದ್ಧ ಬಿಜೆಪಿ ಮಾಜಿ ಮಂತ್ರಿ ಸಂಗಪ್ಪ ಬೆಳ್ಳುಬ್ಬಿ ಸ್ಪರ್ಧಿಸಲಿದ್ದಾರೆ.
ಸಂಗಪ್ಪ ಬೆಳ್ಳುಬ್ಬಿ ಅವರು ಜಾನಪದ ಕಲಾವಿದರೂ ಆಗಿರುವುದರಿಂದ ಜನ ಸಂಪರ್ಕ ಚೆನ್ನಾಗಿದೆ. ಇವರು ಖಾಸಗಿ ಸಕ್ಕರೆ ಕಾರ್ಖಾನೆ ಸಹ ಕಟ್ಟುತ್ತಿದ್ದು, ಉದ್ಯೋಗಾವಕಾಶ ನೀಡುತ್ತಿದ್ದಾರೆ. ಲಿಂಗಾಯತ ಗಾಣಿಕ ಸಮಾಜಕ್ಕೆ ಸೇರಿದ ಇವರು ಗೆಲ್ಲುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.












Click it and Unblock the Notifications