ಕರ್ನಾಟಕದ ಫಲಿತಾಂಶ ಕೆಲವು ಪಾಠ ಕಲಿಸಿದೆ: ನೌಹೀರಾ ಶೇಖ್
ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆ, ಮತ್ತು ಫಲಿತಾಂಶ ನನಗೆ ಮತ್ತು ಪಕ್ಷಕ್ಕೆ ಹಲವೂ ಹೊಸ ಅನುಭವ, ಪಾಠ ಕಲಿಸಿದೆ ಎಂದೂ ಎಂಇಪಿ ಪಕ್ಷದ ರಾಷ್ಟ್ರೀಯ ಆಧ್ಯಕ್ಷೆ ಡಾ. ನೌಹೀರಾ ಶೇಖ್ ಹೇಳಿದ್ದಾರೆ.
ವಿಧಾನಸಭಾ ಚುನವಣಾ ಫಲಿತಾಂಶ ಪ್ರಕಟವಾದ ನಂತರ ಹೇಳಿಕೆ ನೀಡಿರುವ ಅವರು, ಏನೇ ಆಗಲಿ, ಜನರ ತೀರ್ಪಿಗೆ ತಲೆಬಾಗುವೆ.ಮುಂದಿನದಿನಗಳಲ್ಲಿ ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನ ಮುಂದುವರೆಯಲಿದೆ
ಕೇವಲ 4 ತಿಂಗಳ ಅವಧಿಯಲ್ಲಿ ಎಂಇಪಿ ರಾಜ್ಯದ ಜನರ ಮನೆ ಮನೆ ತಲುಪಿದೆ ಎಂಬ ಸಮಾಧಾನವಿದೆ. ಸೋಲು- ಗೆಲುವು ಎಂದಿಗೂ ನಮ್ಮ ಗುರಿ ಮತ್ತು ಆತ್ಮವಿಶ್ವಾಸ ಕುಗ್ಗಿಸುವುದಿಲ್ಲ. ಕನ್ನಡಿಗರ ಹೃದಯ ಗೆದ್ದು, ಶಕ್ತಿ ಸೌಧದಲ್ಲಿ ಅಧಿಕಾರ ಹಿಡಿಯುವತನಕ ನಮ್ಮ ಹೋರಾಟ ನಿರಂತರವಾಗಿ ಸಾಗಲಿದೆ.

ಕನ್ನಡಿಗರ ತೀರ್ಮಾನವನ್ನು ತುಂಬು ಹೃದಯದಿಂದ ಮತ್ತೊಮ್ಮೆ ಸ್ವಾಗತಿಸುತ್ತೇನೆ. ಅಲ್ಪಕಾಲದ ಅವಧಿಯಲ್ಲೆ ಪಕ್ಷಕ್ಕೆ ಭದ್ರಬುನಾದಿ ಹಾಕಲು ಅವಕಾಶ ಮಾಡಿಕೊಟ್ಟ ಜನತೆಗೆ ನಾನು ಸದಾ ಚಿರರುಣಿ. ಜಗತ್ತಿನಲ್ಲಿ ಬದಲಾವಣೆಯೊಂದೆ ಶಾಶ್ವತ ಎಂಬ ನಿಯಮದಲ್ಲಿ ನಮ್ಮ ಅಚಲ ನಂಬಿಕೆಗೆ, ಜನರು ಇಂದಲ್ಲ ನಾಳೆಯಾದರೂ ಬದಲಾವಣೆ ಬಯಸಿ ಅವಕಾಶ ಮಾಡಿಕೊಡುತ್ತಾರೆ ಇಂದಿನ ಸೋಲು ನಾಳಿನ ಗೆಲುವಿನ ಸೋಪಾನ ಎಂಬುದನ್ನು ನಂಬಿದ್ದೇವೆ.
ಇನ್ನು ಒಂದು ವರ್ಷದ ಅವಧಿಯಲ್ಲೇ ಲೋಕಸಭಾ ಚುನಾವಣೆ ಬರಲಿದ್ದು ಮತ್ತೊಮ್ಮೆ ಕನ್ನಡಿಗರ ಅದೃಷ್ಟ ಪರೀಕ್ಷೆಗೆ ಬರಲು ಕಾತುರಳಾಗಿದ್ದೇನೆ. ಏನೇ ಆಗಲಿ ಪಕ್ಷಕ್ಕೆ ರಾಜ್ಯದಲ್ಲಿ ಗಟ್ಟಿನೆಲೆ ಸಿಗಲಿದೆ ಎಂಬ ನಂಬಿಕೆಯನ್ನು ರಾಜ್ಯದ ಜನತೆ ಹುಸಿಮಾಡುವುದಿಲ್ಲ ಎಂಬುದು ನಾನೂ ಕಂಡುಕೊಂಡ ಸತ್ಯ. ಎಲ್ಲಿ ಕಳೆದುಕೊಂಡಿದ್ದೇನೋ ಅಲ್ಲಿಯೇ ಪಡೆಯುತ್ತೇನೆ.
ಪಡೆಯಬೇಕು ಎಂಬ ಛಲ-ಬಲದೊಂದಿಗೆ ಮತ್ತೊಮ್ಮೆ ಸಮಸ್ತ ಕನ್ನಡಿಗರಿಗೆ ಧನ್ಯವಾದ ಹೇಳ ಬಯಸುತ್ತೇನೆ. ಅಲ್ಪ ಕಾಲದ ಅವಧಿಯಲ್ಲಿ ಪಕ್ಷ ಕಟ್ಟಿ ಜನರ ನಾಲಿಗೆ ಮೇಲೆ ಮತ್ತು ಮನೆ-ಮನೆಗಳಲ್ಲಿ ಹರಿದಾಡುವಂತೆ ಮಾಡಿದ ಕಾರ್ಯಕರ್ತರಿಗೆ, ಮುಖಂಡರಿಗೆ ಮತ್ತು ಇದಕ್ಕೆ ಪೂರ್ಣ ಸಹಕಾರ ನೀಡಿದ ಎಲ್ಲ ಮಾಧ್ಯಮ ಮಿತ್ರರಿಗೆ ಕೊನೆಯದಾಗಿ ಹಗಲಿರುಳು ಅವಿರತವಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಹೃದಯಪೂರ್ವಕ ಅಭಿನಂದನೆ ಹೇಳಬಯಸುತ್ತೇನೆ. ಈ ಪ್ರೀತಿ, ವಿಶ್ವಾಸ ಸದಾ ಹೀಗೆಯೇ ಮುಂದುವರಿಯಲಿ ಎಂದು ಆಶಿಸುವುದಾಗಿಯೂ ನೌಹೀರಾ ಶೇಖ್ ಹೇಳಿದ್ದಾರೆ.












Click it and Unblock the Notifications