ಬೆಳಗಾವಿಯಲ್ಲಿ ಲಾಲ್ ಬಾಗ್ ಉದ್ಯಾನ: ಯಡಿಯೂರಪ್ಪ
ಬೆಳಗಾವಿಯ ಕೆ ಎಲ್ ಇ ಮೈದಾನದಲ್ಲಿ ಶುಕ್ರವಾರ (ಮಾರ್ಚ್ 11) ನಡೆದ 2ನೇ ವಿಶ್ವ ಕನ್ನಡ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಇದನ್ನು ಪ್ರಕಟಿಸಿದ್ದಾರೆ. ಸುಮಾರು 100 ಎಕರೆ ಪ್ರದೇಶದಲ್ಲಿ ಲಾಲ್ ಬಾಗ್ ನಂತಹ ಬೃಹತ್ ಉದ್ಯಾನವನ ಹಾಗೂ ಗಾಜಿನ ಮನೆ ನಿರ್ಮಿಸಲಾಗುವುದು. ಇದಕ್ಕಾಗಿ 25 ಕೋಟಿ ರು ಹಂಚಿಕೆ ಮಾಡುವುದಾಗಿಯೂ ಹೇಳಿದರು.
ಅಲ್ಲದೆ, ಸುವರ್ಣ ಕರ್ನಾಟಕ ಸಂಭ್ರಮ ಮತ್ತು ಈ ವಿಶ್ವ ಕನ್ನಡದ ಸಮ್ಮೇಳನದ ನೆನಪನ್ನು ಚಿರಸ್ಥಾಯಿಯಾಗಿಸಲು ಸಮಗ್ರ ಕರ್ನಾಟಕ ವಿಕಾಸ ಸಾರುವ ಮತ್ತು ಭವಿಷ್ಯದ ಮಾರ್ಗದರ್ಶಕ ವಸ್ತು ಸಂಗ್ರಹಾಲಯ, ಪ್ರಾತ್ಯಕ್ಷಿಕೆ ಒಳಗೊಂಡ ಥೀಮ್ ಪಾರ್ಕ್ ತಲೆ ಎತ್ತಲಿದೆ. ಈ ಪಾರ್ಕ್ ಅನ್ನು ನಾಡಿನ ಮಧ್ಯೆ ಯಾವುದಾದರೂ ಒಂದು ನಗರದಲ್ಲಿ ನಿರ್ಮಿಸಲಾಗುವುದು. ಆ ನಗರದ ಹೆಸರನ್ನು ಶೀಘ್ರವೇ ಬಹಿರಂಗಪಡಿಸುವುದಾಗಿ ಅವರು ತಿಳಿಸಿದರು.
ಇದಕ್ಕೂ ಮೊದಲು ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗಡಿ ಸಮಸ್ಯೆ ಎಂಬುದು 45 ವರ್ಷಗಳ ಹಿಂದೆಯೇ ಇತ್ಯರ್ಥವಾಗಿರುವ ವಿಷಯ ಮಹಾಜನ ವರದಿಯನ್ನು ಎಲ್ಲರೂ ಒಪ್ಪಲೇಬೇಕು ಎಂದು ಪ್ರತಿಪಾದಿಸಿದರು. ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪ ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರು ಆಶಯ ಭಾಷಣ ಮಾಡಿದರು.
ಕನ್ನಡದ ನೂರೊಂದು ಪುಸ್ತಕಗಳನ್ನು ಜಿ.ಎಸ್. ಶಿವರುದ್ರಪ್ಪ ಅವರು ಲೋಕಾರ್ಪಣೆ ಮಾಡಿದರು. ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಬಿಂಬಿಸುವ ಪುನರಾವಲೋಕನ ಕೃತಿಯನ್ನು ಯು.ಆರ್. ಅನಂತಮೂರ್ತಿ ಬಿಡುಗಡೆಗೊಳಿಸಿದರು. ಸಚಿವರಾದ ಶ್ರೀರಾಮುಲು, ಜನಾರ್ದನ ರೆಡ್ಡಿ, ನಾಡೋಜ ಚನ್ನವೀರ ಕಣವಿ, ಡಾ. ಚಂದ್ರಶೇಖರ ಕಂಬಾರ, ಚಿತ್ರನಟ ಅಂಬರೀಷ್, ಕ್ರಿಕೆಟ್ ಪಟು ಅನಿಲ್ ಕುಂಬ್ಲೆ, ಕ್ಯಾಪ್ಟನ್ ಗೋಪಿನಾಥ್, ಹೊರನಾಡ ಕನ್ನಡಿಗ ಬಿ.ಆರ್, ಶೆಟ್ಟಿ, ಅಕ್ಕ ನಿರ್ದೇಶಕ ಮಂಡಳಿ ಅಧ್ಯಕ್ಷ ಅಮರನಾಥ ಗೌಡ ಮತ್ತು ಯುಕೆ ಕನ್ನಡ ಬಳಗದ ಭಾನುಮತಿ ಮುಂತಾದವರು ಮಾತನಾಡಿ, ತಮ್ಮ ಕನ್ನಡ ಪ್ರೀತಿ ಮೆರೆದರು.
ಸ್ವಾಗತ ಸಮಿತಿಯ ಪರವಾಗಿ ಸಚಿವ ಉಮೇಶ್ ಕತ್ತಿ ಮತ್ತು ಪ್ರಭಾಕರ್ ಕೋರೆ ಮಾತನಾಡಿದರು. ಡಾ.ಐಎಂ ವಿಠ್ಠಲಮೂರ್ತಿ ಸಮ್ಮೇಳನದ ಧ್ಯೇಯೋದ್ದೇಶ ವಿವರಿಸಿದರು. ಅಪರ್ಣಾ ಮತ್ತು ಶಂಕರ ಪ್ರಕಾಶ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು.