ಶಬರಿಮಲೆ: ಭಕ್ತರಿಗೆ ದರ್ಶನ ಸಮಯದಲ್ಲಿ ಬದಲಾವಣೆ, ಇಲ್ಲಿದೆ ವಿವರ
ಕೇರಳ, ನವೆಂಬರ್, 24: ಶಬರಿಮಲೆಯ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಆದ್ದರಿಂದ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ. ಕಳೆದ ಎರಡು ವರ್ಷಗಳ ಕಾಲ ಮಹಾಮಾರಿ ಕೊರೊನಾ ಕಾರಣದಿಂದಾಗಿ ನಿಗದಿತ ಭಕ್ತರಿಗಷ್ಟೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ಮಹಾಮಾರಿ ಕೊರೊನಾ ತಗ್ಗಿದ ಕಾರಣ, ಈ ವರ್ಷ ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಲೇ ಇದ್ದಾರೆ. ಹಾಗಾಗಿ ಮಧ್ಯಾಹ್ನ 3ರಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾತ್ರಿ 11ರವರೆಗೂ ದರ್ಶನ ಪಡೆಯಬಹುದಾಗಿದೆ ಎನ್ನುವ ಮಾಹಿತಿಯನ್ನು ಆಡಳಿತ ಮಂಡಳಿ ತಿಳಿಸಿದೆ.
ಈ ಮೊದಲು ಬೆಳಗ್ಗೆ 3ರಿಂದ ಮಧ್ಯಾಹ್ನ 1ರವರೆಗೆ ಮತ್ತು ಸಂಜೆ 4ರಿಂದ ಮಧ್ಯರಾತ್ರಿಯವರೆಗೆ ಅಯ್ಯಪ್ಪ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗಿತ್ತು. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನವು ನವೆಂಬರ್ 16ರಿಂದ ಬಾಗಿಲು ತೆರೆದಿದ್ದು, ಈ ವರ್ಷದ ಶಬರಿಮಲೆ ಯಾತ್ರೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿದಿನ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಅಯ್ಯಪ್ಪನ ದರ್ಶನ ಪಡೆಯಲು ಕಿಕ್ಕಿರಿದು ಬರುತ್ತಲೇ ಇದ್ದಾರೆ.
ಭಕ್ತಾದಿಗಳಿಗೆ ಪ್ರತ್ಯೇಕ ರೈಲಿನ ವ್ಯವಸ್ಥೆ
ಇನ್ನು ಶಬರಿಮಲೆ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಬೆಳಗಾವಿ ಹಾಗೂ ಹುಬ್ಬಳ್ಳಿಯಿಂದ ಪ್ರತ್ಯೇಕವಾಗಿ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧಾರ ಮಾಡಿತ್ತು. ಈ ಎರಡೂ ಕಡೆಗಳಿಂದಲೂ ಶಬರಿಮಲೆ ಸಮೀಪದ ಕೊಲ್ಲಂಗೆ ರೈಲು ವ್ಯವಸ್ಥೆ ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ಮಾಹಿತಿ ನೀಡಿತ್ತು. ಬೆಳಗಾವಿ - ಕೊಲ್ಲಂ ರೈಲು (07357/07358) ನವೆಂಬರ್ 20ರಂದು (07357) ಬೆಳಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಟಿತ್ತು. ನವೆಂಬರ್ 21ರಂದು ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಲಿತ್ತು.

ಇದೇ ರೈಲು (07358) ನವೆಂಬರ್ 21ರಂದು ಸಂಜೆ 5:10ಕ್ಕೆ ಕೊಲ್ಲಂನಿಂದ ಹೊರಟು ಮರು ದಿನ ರಾತ್ರಿ 11ಕ್ಕೆ (ನವೆಂಬರ್ 22) ಬೆಳಗಾವಿಗೆ ಆಗಮಿಸಿತ್ತು. ಇನ್ನು ಇದೇ ರೀತಿ ಡಿಸೆಂಬರ್ 4 ರಿಂದ ಜನವರಿ 15 ರವರೆಗೆ ಬೆಳಗಾವಿ - ಕೊಲ್ಲಂ ವಿಶೇಷ ಎಕ್ಸ್ಪ್ರೆಸ್ ರೈಲು (07361) ಪ್ರತಿ ಭಾನುವಾರದಂದು ಬೆಳಗ್ಗೆ 11:30ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಹಾಗೂ ಮರು ದಿನ ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಲಿದೆ. ಇದೇ ಮಾರ್ಗದ ಮೂಲಕ ಹಿಂದಿರುಗುವ ಕೊಲ್ಲಂ - ಬೆಳಗಾವಿ ವಿಶೇಷ ಎಕ್ಸಪ್ರೆಸ್ ರೈಲು (07362) ಡಿಸೆಂಬರ್ 5 ರಿಂದ ಜನವರಿ 16 ರವರೆಗೆ ಕೊಲ್ಲಂನಿಂದ ಪ್ರತಿ ಸೋಮವಾರದಂದು ಸಂಜೆ 5:10ಕ್ಕೆ ಹೊರಡಲಿದೆ. ನಂತರ ಮರು ದಿನ ರಾತ್ರಿ 11ಕ್ಕೆ ಬೆಳಗಾವಿಗೆ ತಲುಪಲಿದೆ.

ರೈಲು ಚಲಿಸುವ ಮಾರ್ಗಗಳ ವಿವರ
ಇನ್ನು ಹುಬ್ಬಳ್ಳಿ - ಕೊಲ್ಲಂ (07359/07360) ರೈಲು ನವೆಂಬರ್ 27ರಂದು ಮಧ್ಯಾಹ್ನ 2:40ಕ್ಕೆ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುತ್ತದೆ. ಮರು ದಿನ (ನವೆಂಬರ್ 28) ಮಧ್ಯಾಹ್ನ 3:15ಕ್ಕೆ ಕೊಲ್ಲಂ ತಲುಪಲಿದೆ. ಇದೇ ರೈಲು ನವೆಂಬರ್ 28ರಂದು ಸಂಜೆ 5:10ಕ್ಕೆ ಕೊಲ್ಲಂನಿಂದ ಹೊರಡಲಿದ್ದು, ಮರು ದಿನ (ನವೆಂಬರ್ 29) ರಾತ್ರಿ 8ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ರೈಲು ರಾಣೆಬೆನ್ನೂರು, ದಾವಣಗೆರೆ, ಬೀರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಈರೋಡ್, ಪೊದನೂರು, ಪಲಕ್ಕಾಡ್, ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ, ತಿರುವಲ್ಲಾ, ಚೆಂಗನೂರ, ಮಾವೇಲಿಕರ, ಕಾಯಂಕುಲಂ, ಸಸ್ತಾನಕೋಟ್ ಮಾರ್ಗವಾಗಿ ಸಂಚರಿಸಲಿದೆ ಎನ್ನುವ ಮಾಹಿತಿಯನ್ನು ಇಲಾಖೆ ಹೊರಹಾಕಿದೆ.












Click it and Unblock the Notifications