ವರಮಹಾಲಕ್ಷ್ಮಿ ಮೈಸೂರ್ ಸಿಲ್ಕ್ ಡಿಸ್ಕೌಂಟ್ ಮಾರಾಟ ಎಷ್ಟೆಲ್ಲ ಗೊಂದಲ?
ಸಚಿವರಾದ ಸಾ.ರಾ.ಮಹೇಶ್ ಅವರಿಗೆ ಪ್ರಚಾರದಲ್ಲಿ ಇರಲೇಬೇಕು ಅನ್ನೋ ಶೋಕಿ ಬಂದಂತೆ ಇದೆ. ಅವರು ನೀಡುತ್ತಿರುವ ಹೇಳಿಕೆಗಳು, ಅಂಗೈ ಗೆರೆಯಂತೆ ಸ್ಪಷ್ಟವಾಗಿ ಗೋಚರಿಸುವ ಮಾತು-ಕೃತಿ ಮಧ್ಯದ ವ್ಯತ್ಯಾಸ... ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ಒಂದಿಷ್ಟು ಗಮನ ಕೊಡದೇ ಇದ್ದರೆ ಪರಿಸ್ಥಿತಿ ಕೈ ಮೀರಬಹುದು.
ಈಗ ವರಮಹಾಲಕ್ಷ್ಮೀ ಹಬ್ಬಕ್ಕೆ ಮುಂಚಿತವಾಗಿ ಮೈಸೂರು ಸಿಲ್ಕ್ ರೇಷ್ಮೆ ಸೀರೆಗಳನ್ನು 4,500 ರುಪಾಯಿಗೆ ನೀಡುವ ಯೋಜನೆ ಹಾಕಿಕೊಂಡಿದ್ದೇವೆ. ಆ ಸೀರೆಗಳ ಅಸಲಿ ಬೆಲೆ 9 ಸಾವಿರ ಇರುತ್ತದೆ ಅಂದಿದ್ದರು. ಹೆಣ್ಣುಮಕ್ಕಳು ಬಹಳ ಆಸೆಪಟ್ಟು, ಕೆಎಸ್ ಐಸಿ ಮಳಿಗೆಗಳಿಗೆ ಹೋಗಿ ವಿಚಾರಿಸಿದರೆ, ಈ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಹಬ್ಬದ ಹತ್ತಿರ ಬಂದಾಗ ಮತ್ತೆ ಬನ್ನಿ ಎಂಬ ಉತ್ತರ ಬಂತು.
ಕುಟುಂಬಕ್ಕೊಂದೇ ರಿಯಾಯ್ತಿ ದರದ ಮೈಸೂರು ಸಿಲ್ಕ್ ರೇಷ್ಮೆ ಸೀರೆ!
ಇದೀಗ ಸಚಿವ ಸಾ.ರಾ.ಮಹೇಶ್ ಮಾಧ್ಯಮಗಳಿಗೆ ಮಾಹಿತಿ ಕೊಟ್ಟಿದ್ದಾರೆ. ಅದೇನೋ ಕುಟುಂಬಕ್ಕೆ ಒಂದೇ ರೇಷ್ಮೆ ಸೀರೆಯಂತೆ (ಇದನ್ನು ತಿಳಿದುಕೊಳ್ಳುವುದಕ್ಕೆ ಅದ್ಯಾವ ಮಾನದಂಡ ಇದೆಯೋ?), ಆ ಸೀರೆಗಳ ಬೆಲೆ 15ರಿಂದ 16 ಸಾವಿರ ಆಗುವುದರಿಂದ 10 ಸಾವಿರದಷ್ಟು ನಷ್ಟವಾಗುತ್ತಂತೆ- ಅದನ್ನು ಶೇಕಡಾ ಐವತ್ತರಷ್ಟು ಎಂಎಸ್ ಐಎಲ್ ಹಾಗೂ ಬಾಕಿ ಐವತ್ತರಷ್ಟನ್ನು ಸಾ.ರಾ.ಮಹೇಶ್ ಜವಾಬ್ದಾರಿಯ ಇಲಾಖೆ ಭರಿಸುತ್ತದಂತೆ.
ಆರೇಳು ಸಾವಿರಕ್ಕಿಂತ ಹೆಚ್ಚು ಸೀರೆ ಮಾರಲ್ಲ
ಸಚಿವರು ಲೆಕ್ಕ ಹಾಕಿರುವಂತೆ ಆರೇಳು ಕೋಟಿ ನಷ್ಟವಾಗುತ್ತದೆ ಸೀರೆಗೆ ತಲಾ ಹತ್ತು ಸಾವಿರ ನಷ್ಟ ಭರಿಸಬೇಕು ಅಂದರೆ, ಆರೇಳು ಸಾವಿರಕ್ಕಿಂತ ಹೆಚ್ಚು ಸೀರೆ ಮಾರಾಟ ಮಾಡುವುದಿಲ್ಲ ಅನ್ನೋದು ಖಾತ್ರಿ ಆಯಿತು. ಅಲ್ಲಾ ಸ್ವಾಮಿ, ಮೊದಲಿಗೆ ಒಂಬತ್ತು ಸಾವಿರದ ಸೀರೆ ಅಂದಿರಿ. ಈಗ ಹದಿನಾರು ಸಾವಿರ ಆಂತೀರಿ.
ಕಡಿಮೆ ಬೆಲೆ ಮಾರಲು ನಿಮ್ಮ ಹತ್ತಿರ ಕೇಳಿಕೊಂಡಿದ್ದಿರಾ?
ಎಲ್ಲರಿಗೂ ಮೈಸೂರು ಸಿಲ್ಕ್ ಸೀರೆ ಸಿಗುವ ವ್ಯವಸ್ಥೆ ಮಾಡ್ತೀವಿ ಅಂತ ಹೇಳಿದಿರಿ. ಈಗ ಕುಟುಂಬಕ್ಕೆ ಒಂದೇ ಸೀರೆ ಅಂತೀರಿ. ಇದ್ಯಾವ ರೀತಿಯ ಸುಳ್ಳು ಹೇಳ್ತಾ ಸುದ್ದಿಯಲ್ಲಿರುವ ಪ್ರಯತ್ನ ಮಾಡ್ತಿದ್ದೀರಿ? ಹೀಗೆ ಕಡಿಮೆ ಬೆಲೆಗೆ ಸೀರೆ ಮಾರಾಟ ಮಾಡಿ ಅಂತ ಯಾರಾದರೂ ನಿಮ್ಮ ಹತ್ತಿರ ಕೇಳಿಕೊಂಡಿದ್ದಿರಾ?
ಮೈಸೂರು ಸಿಲ್ಕ್ ಬ್ರ್ಯಾಂಡ್ ಮೌಲ್ಯವನ್ನೂ ಹಳ್ಳ ಹಿಡಿಸ್ತೀರಿ
ಅದೇನು ಹಬ್ಬಕ್ಕೆ ಹತ್ತಿರ ಇದ್ದಾಗಲೇ ಮಾರಾಟ ಮಾಡುವ ಸ್ಕೀಮು? ಕಡಿಮೆ ಬೆಲೆಗೆ ಸೀರೆ ಮಾರಾಟ ಮಾಡಿ, ಒಂದು ವೇಳೆ ಗುಣಮಟ್ಟದಲ್ಲಿ ರಾಜೀ ಆಗಿದ್ದರೆ ಮೈಸೂರು ಸಿಲ್ಕ್ ಗೆ ಇರುವ ಬ್ರ್ಯಾಂಡ್ ಮೌಲ್ಯವನ್ನೂ ಹಳ್ಳ ಹಿಡಿಸ್ತೀರಿ. ಇದರ ಜತೆ ಎಲ್ಲರಿಗೂ ಇದರ ಲಾಭ ಸಿಕ್ಕಂತೆಯೂ ಅಲ್ಲ. ನೀವೇ ಕೊಡ್ತಿರುವ ಅಂಕಿಯ ಮಾಹಿತಿ ನೋಡಿದರೆ ಇದ್ಯಾವ ಪರಿಯಲ್ಲಿ ಯಶಸ್ವಿ ಆಗಬಹುದು ಎಂದು ಹೇಳುವುದಕ್ಕೆ ಅತಿ ಬುದ್ಧಿವಂತರೇನೂ ಬೇಡ.
ನೆಟ್ಟಗಿರುವ ಮಾಹಿತಿ ಹಾಗೂ ಗುಣಮಟ್ಟದ ಸೀರೆ ಕೊಡಿ
ವೈಯಕ್ತಿಕವಾಗಿ ಪ್ರಚಾರ ಬಯಸುವುದಾದರೆ ಜಾಹೀರಾತು ಕೊಡಿ ಸ್ವಾಮಿ. ಇಂಥ ಇಲಾಖೆಗೆ ನೀವೇ ಮಂತ್ರಿ ಎಂಬುದನ್ನು ಸಾರಲು ಬೇಕಾದ ಡಂಗುರ ಹೊಡೆಯುವುದಕ್ಕೆ ಜನರ ಆಸೆ ಹಾಗೂ ಸರಕಾರದ ಪ್ರತಿಷ್ಠಿತ ಸಂಸ್ಥೆಯ ಗೌರವವನ್ನು ಪಣಕ್ಕೆ ಇಡಬೇಡಿ. ಒಂದಿಷ್ಟು ಸಂಕೋಚ, ಗೌರವ ಇದ್ದರೆ ಈ ಯೋಜನೆ ಕೈ ಬಿಟ್ಟರೂ ಚಿಂತೆ ಇಲ್ಲ. ಬಿಗುಮಾನ ಬಿಟ್ಟು ಕ್ಷಮೆ ಕೇಳಿ. ಇಲ್ಲದಿದ್ದರೆ ಆಡಿದ ಮಾತಿಗೆ ನಡೆದುಕೊಂಡು ನೆಟ್ಟಗಿರುವ ಮಾಹಿತಿ ಹಾಗೂ ಗುಣಮಟ್ಟದ ಸೀರೆ ಕೊಡಿ.