ಮಲೇಶಿಯಾದಲ್ಲಿ ಕನ್ನಡ ರಾಜ್ಯೋತ್ಸವ-ದೀಪೋತ್ಸವ
ಕನ್ನಡ ನಾಡಿನಿಂದ ಹೊರಗಿರುವ ಕನ್ನಡಿಗರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ದಿನವೇ ಕನ್ನಡ ರಾಜ್ಯೋತ್ಸವ. ಕನ್ನಡದ ಮಣ್ಣಿನಿಂದ ದೂರವಿದ್ದರೂ ಕನ್ನಡದ ನಾಡು, ನುಡಿಯನ್ನು ಮರೆಯದ ಈ ಕನ್ನಡಿಗರಿಗೆ ಒಂದು ನಮಸ್ಕಾರ. ಮಲೇಶಿಯಾದಲ್ಲಿಯೂ ಇತ್ತೀಚೆಗೆ ಕನ್ನಡಿಗರೆಲ್ಲ ಸೇರಿ ರಾಜ್ಯೋತ್ಸವ, ದೀಪೋತ್ಸವ ಆಚರಿಸಿ ಸಂಭ್ರಮಿಸಿ ನಲಿದಾಡಿದ ಕಾರ್ಯಕ್ರಮದ ವರದಿ ಇಲ್ಲಿದೆ.
ಮಲೇಶಿಯಾ ಕನ್ನಡ ಸಂಘ (ಮಕಸ) 2002ರಲ್ಲಿ ಪ್ರಾರಂಭವಾಯಿತು. ಬೆರಳೆಣಿಕೆಯಷ್ಟು ಕನ್ನಡ ಪ್ರೇಮಿಗಳಿಂದ ಜನ್ಮ ತಳೆದ ಕನ್ನಡ ಸಂಘ ಇಂದು ಸುಮಾರು 300 ಕನ್ನಡಿಗರ ಕುಟುಂಬಗಳ ಹೆಮ್ಮೆಗೆ ಪ್ರತೀಕವಾಗಿ ಬೆಳೆದಿದೆ. ನಾನಾ ಜನಾಂಗ, ನಾನಾ ದೇಶಗಳ ನಾಗರಿಕರು ತುಂಬಿರುವ ಈಶಾನ್ಯ ಭಾಗದಲ್ಲಿ ಕನ್ನಡ ಜನರು ತಮ್ಮ ಕರ್ನಾಟಕ ಬಾಂಧವರೊಂದಿಗೆ ಸಾಮೀಪ್ಯ ಸ್ನೇಹ ಸಂಪಾದನೆಗೆ ಅನುವುಮಾಡಿಕೊಟ್ಟಂಥ ಕನ್ನಡಿಗರ ಕುಟುಂಬ "ಮಕಸ".

ಕನ್ನಡ ನಾಡಿನ ಪ್ರತಿಭಾನ್ವಿತ ಬಾಲ ಪ್ರತಿಭೆಗಳು ತಮ್ಮ ಕಲಾ ನೈಪುಣ್ಯತೆಯಿಂದ ವಿದೇಶಗಳಲ್ಲಿ ತಮ್ಮದೇ ಆದಂತಹ ವಿಶೇಷ ಶೈಲಿಯಲ್ಲಿ 'ಹಚ್ಚೇವು ಕನ್ನಡದ ದೀಪ' ಎಂದು ಸಾರುತ್ತಾ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.
ಕನ್ನಡದ ಕಂಪು ಬೀರುವಂಥ ಕಾರ್ಯಕ್ರಮ ಮಲೇಷಿಯಾದ ಕೌಲಾಲಂಪುರ್ ನಗರದಲ್ಲಿ ನಡೆಯಿತು. ದೀಪೋತ್ಸವ -ರಾಜ್ಯೋತ್ಸವ ಕಾರ್ಯಕ್ರಮಕ್ಕೆ "ವಿಲ್ಲಾ ಸ್ಕಾಟ್ ಮಲ್ಟಿ ಪರ್ಪಸ್" ಸಭಾಂಗಣದಲ್ಲಿ ದೀಪ ಬೆಳಗುವುದರೊಂದಿಗೆ ಚಾಲನೆ ನೀಡಲಾಯಿತು. ಕುಮಾರಿ ನಂದಿತ, ರಚನಾ ಮತ್ತು ರಶ್ಮಿ ಅವರಿಂದ ನಮ್ಮ ನಾಡ ಗೀತೆ "ಜಯ ಬಾರತ ಜನನಿಯ ತನುಜಾತೆಯಿಂದ ಮೊದಲ್ಗೊಂಡು, ಸಮೂಹ ಗಾಯನ, ಏಕ ಪಾತ್ರಾಭಿನಯ, ಜಾನಪದ ನೃತ್ಯ (ಕುಮಾರಿ ಅಂಚಲ್ ಹಾಗು ಅಮೂಲ್ಯ) ಹಾಗು ನಮ್ಮ ಕೆಲವು ಸದಸ್ಯರ ಸಾಂಸ್ಕೃತಿಕ ಕಾರ್ಯಕ್ರಮ ರಂಜಿಸಿದವು.

ರವಿಕುಮಾರ್ ರವರು ನಮ್ಮ ಕನ್ನಡ ನಾಡಿನ ಇತಿಹಾಸದ ಕಿರು ಪರಿಚಯವನ್ನು ನೋಡುಗರಿಗೆ ಉಣಬಡಿಸಿದರು. ಸುರೇಶ್ ಚೆಂಗುಟಿಯವರು ನಮ್ಮ ನಾಡಿನ ಚಿತ್ರದುರ್ಗದ ಹೆಮ್ಮೆಯ ಪಾಳೆಯಗಾರ "ಮದಕರಿ ನಾಯಕ"ರ ಏಕ ಪಾತ್ರಾಭಿನಯವು ನೋಡುಗರನ್ನು 16ನೇ ಶತಮಾನಕ್ಕೆ ಕರೆದುಕೊಂಡು ಹೋಯಿತು. ಡಾಕ್ಟರ್ ಪ್ರಿಯ ಚೇತನ್ ಹಾಗು ಸಂಗಡಿಗರಿಂದ ಪ್ರಸ್ತುತ ಪಡಿಸಿದ "ಕತ್ತಲೆ ರಾಜ್ಯ" ಎಂಬ ಕಿರು ನಾಟಕ ಪ್ರೇಕ್ಷಕರ ಮನಸೂರೆಗೊಂಡಿತು. ಮಲೇಶಿಯಾ ಬೀಚಿ ಎಂದೆ ಖ್ಯಾತರಾದ ಆನಂದ್ ರಾಮದುರ್ಗರವರು ತಮ್ಮ ನವಿರಾದ ಹಾಸ್ಯದ ಜೊಕುಗಳಿಂದ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು.

ಕೊನೆಯದಾಗಿ ಸುರೇಶ್ ಚೆಂಗುಟಿಯವರು ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. 2015ರ ಯುಗಾದಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುವುದಕ್ಕೆ ತೀರ್ಮಾನಿಸಿ ಎಲ್ಲರು ಸುಗ್ರಾಸ ಭೋಜನ ಸವಿಯಲು ಹೊರಟೆವು.












Click it and Unblock the Notifications