ಲಂಡನ್ನಿನಲ್ಲಿ ನಮ್ಮ ಶಾಸಕರ ಸ್ವಾತಂತ್ರ್ಯ ದಿನಾಚರಣೆ
ಸಂಯೋಜಕರಾದ ಕುಂಟಿಕಾನಮಠ ಕುಮಾರ್ ಅವರು ಅತಿಥಿಗಳನ್ನು ಸ್ವಾಗತಿಸುತ್ತ ಸ್ವಾತಂತ್ರ್ಯ ದಿನಾಚರಣೆಯಂದು ಭಾರತದಲ್ಲಿ ಶಾಲಾ ಸಮವಸ್ತ್ರ ಧರಿಸಿ ಹಳ್ಳಿ ಹಳ್ಳಿಗಳಿಗೆ ಮೆರವಣಿಗೆ ಹೋಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡರು. ಸುಮಾರು ಮುನ್ನೂರ ಐವತ್ತು ವರುಷಗಳ ಕಾಲ ತನ್ನ ಕಪಿಮುಷ್ಟಿಯಲ್ಲಿ ನಮ್ಮ ದೇಶವನ್ನು ಆಳಿದ ಬ್ರಿಟನ್ ರಾಣಿಯ ಊರಾದ ಲಂಡನ್ ನಲ್ಲಿ, ನಮ್ಮ ರಾಜ್ಯದ ವಿಧಾನಸಭಾ ಸದಸ್ಯರೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ನಿಜವಾಗಿಯೂ ಒಂದು ಹೆಮ್ಮೆ ಎಂದು ಹೇಳಿದರು.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಜಗದೀಶ್ ಶೆಟ್ಟರ್ ಅವರು ಮಾತನಾಡುತ್ತ, ಸ್ವಾತಂತ್ರ್ಯ ದಿನಾಚರಣೆಯಂದು ಲಂಡನ್ ನಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಹೆಮ್ಮೆಯ ವಿಷಯ. ಅನಿವಾಸಿ ಕನ್ನಡಿಗರ ಜೊತೆಯಲ್ಲಿ ರಾಜ್ಯದ ಅಭಿವೃದ್ಧಿಗೆ ತಾವು ಸಂಪೂರ್ಣ ಬೆಂಬಲ ಕೊಡುತ್ತೇವೆ ಎಂದರು. ಕರ್ನಾಟಕ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿಯವರು ಎಲ್ಲ ಸದಸ್ಯರನ್ನು ಪರಿಚಯಿಸಿ ಸ್ವತಂತ್ರ ಭಾರತ ಇನ್ನು ದೊಡ್ಡದಾಗಿ, ವಿಶಾಲವಾಗಿ ಬೆಳೆಯಲಿ ಎಂದು ಹರಸಿದರು. ಕರ್ನಾಟಕದ ಬೆಳವಣಿಗೆಗೆ ಅನಿವಾಸಿ ಕನ್ನಡಿಗರು ಸಹಕರಿಸಬೇಕೆಂದು ಆಶಿಸಿದರು.
ಎಲ್ಲ ಸದಸ್ಯರು ಮತ್ತು ಅತಿಥಿಗಳು ರಾಷ್ಟ್ರಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು, ವಿಧಾನಸಭಾ ಪರಿಷತ್ ಸದಸ್ಯರುಗಳಾದ ಶ್ರೀನಾಥ್, ಚಂದ್ರಶೇಖರ ಕಂಬಾರ, ಶಿವಯೋಗಿ ಸ್ವಾಮಿ, ನಾರಾಯಣ ಸ್ವಾಮಿ, ವೈಏ ನಾರಾಯಣ ಸ್ವಾಮಿ, ಶ್ರೀಮತಿ ಮಲ್ಲಜಮ್ಮ,ಪ್ರಕಾಶ್ ರಾಥೋಡ್, ವಿಧಾನಸಭಾ ಸದಸ್ಯರುಗಳಾದ ಎನ್ ಏ ಹ್ಯಾರಿಸ್, ರಾಮಚಂದ್ರ, ಲಕ್ಷ್ಮೀ ನಾರಾಯಣ ಮೊದಲಾದ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಚಂದವಾಗಿ ಆಯೋಜಿಸಿ ಎಲ್ಲರನ್ನು ಸತ್ಕರಿಸಿದವರು ಅನಿವಾಸಿ ಕನ್ನಡಿಗ ಸಂಪತ್ ಯಡ್ವಾಡ. ಅತಿಥಿಗಳನ್ನು ಕರೆತಂದು ಸಭಾಂಗಣವನ್ನು ವಿನ್ಯಾಸ ಗೊಳಿಸಿದವರು ಅನಿವಾಸಿ ಕನ್ನಡಿಗ ಕೋಲಾರ ರಾಮಚಂದ್ರ ಅಯ್ಯರ್. ಕಾರ್ಯಕ್ರಮ ನಿರೂಪಣೆ, ಛಾಯಾಗ್ರಹಣದಲ್ಲಿ ಸಹಕರಿಸಿದವರು ಅನಿವಾಸಿ ಕನ್ನಡಿಗ ರಂಗನಾಥ್ ಮಿರ್ಜಿ.
(ದಟ್ಸ್ ಕನ್ನಡ ವಾರ್ತೆ)