ತನ್ನದಲ್ಲದ ತಪ್ಪಿಗೆ 3 ವರ್ಷ ಸೌದಿ ಜೈಲಿನಲ್ಲಿದ್ದ ಹರೀಶ್ ಬಂಗೇರ ಕೊನೆಗೂ ಬಿಡುಗಡೆ
ಉಡುಪಿ, ಜುಲೈ 16: ಫೇಸ್ಬುಕ್ನಲ್ಲಿ ಮೆಕ್ಕಾ ಹಾಗೂ ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದ ಆರೋಪದಡಿಯಲ್ಲಿ ಸೌದಿ ಅರೇಬಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಉಡುಪಿಯ ಕೋಟೇಶ್ವರ ನಿವಾಸಿ ಹರೀಶ್ ಬಂಗೇರ ಮೂರು ವರ್ಷದ ಬಳಿಕ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
2019ರಲ್ಲಿ ಮಂಗಳೂರು ಸಿಎಎ ಗಲಭೆಯ ವಿಡಿಯೋವನ್ನು ಡಿ.19 ರಂದು ಹರೀಶ್ ಬಂಗೇರ ತಮ್ಮ ಫೇಸ್ಬುಕ್ ಅಕೌಂಟ್ನಿಂದ ಶೇರ್ ಮಾಡಿದ್ದಾರೆ. ಸೌದಿ ಅರೇಬಿಯಾದ ಕಂಪೆನಿಯಲ್ಲಿ ಕೆಲಸಕ್ಕಿದ್ದ ಹರೀಶ್, ವಿಡಿಯೋ ಹಾಕಿದ ಹಿನ್ನಲೆಯಲ್ಲಿ ಕೆಲ ಯುವಕರು ಹರೀಶ್ ಬಂಗೇರರಿಗೆ ಬೆದರಿಕೆ ಹಾಕಿ ವಿಡಿಯೋ ಡಿಲೀಟ್ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ.
ಚಿನ್ನದಾಸೆಗಾಗಿ ಮಹಿಳೆಯ ಹತ್ಯೆ; ದುಬೈನಲ್ಲಿದ್ದಾಕೆ ಊರಿಗೆ ಬಂದು ಹೆಣವಾಗಿದ್ದೇ ದುರಂತ
ಇದಾದ ಬಳಿಕ ವಿಡಿಯೋ ಡಿಲೀಟ್ ಮಾಡಿದ ಹರೀಶ್ ಬಂಗೇರ ಈ ಬಗ್ಗೆ ಕ್ಷಮೆಯಾಚನೆ ಮಾಡಿದ್ದರು. ಬಳಿಕ ತಮ್ಮ ಫೇಸ್ಬುಕ್ ಖಾತೆಯನ್ನೇ ಡಿಲೀಟ್ ಮಾಡಿದ್ದರು.
ಆದರೆ ಮಾರನೇ ದಿನ ಅಂದರೆ 2019ರ ಡಿ.20ರಂದು ಕಿಡಿಗೇಡಿಗಳು ಹರೀಶ್ ಹೆಸರಲ್ಲಿ ಫೇಸ್ಬುಕ್ನ ಫೇಕ್ ಖಾತೆ ತೆರೆದು, ಮೆಕ್ಕಾ ಮತ್ತು ಸೌದಿ ದೊರೆಯ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಸೌದಿ ಅರೇಬಿಯಾದ್ಯಾಂತ ವೈರಲ್ ಆಗಿದ್ದು, ಬಳಿಕ ಸೌದಿ ಪೊಲೀಸರು ಹರೀಶ್ ಬಂಗೇರನನ್ನು ಬಂಧನ ಮಾಡಿದ್ದರು.
ವಿದೇಶದಲ್ಲಿ ಪತಿಯನ್ನು ಬಂಧನ ಮಾಡಿದ್ದರಿಂದ ಕಂಗೆಟ್ಟ ಹರೀಶ್ ಬಂಗೇರ ಪತ್ನಿ, ಪತಿಯ ಹೆಸರಿನಲ್ಲಿ ಫೇಕ್ ಅಕೌಂಟ್ ತೆಗೆದ ವಿಚಾರಕ್ಕೆ ಉಡುಪಿ ಠಾಣೆಯಲ್ಲಿ ದೂರು ನೀಡಿದರು. ಪೊಲೀಸರ ವಿಚಾರಣೆ ವೇಳೆ ಹರೀಶ್ ಬಂಗೇರ ಹೆಸರಿನಲ್ಲಿ ಮೂಡಬಿದಿರೆಯ ಅಬ್ದುಲ್ ಹುಯೇಸ್ ಮತ್ತು ಅಬ್ದುಲ್ ತುವೇಸ್ ಖಾತೆ ತೆರೆದಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆ.
2020ರ ಜೂನ್ ತಿಂಗಳಿನಲ್ಲಿ ಈ ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ ಪೊಲೀಸರು, ಆರೋಪಿಗಳ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಈಗ ಹರೀಶ್ ಬಂಗೇರ ಈ ವಿಚಾರದಲ್ಲಿ ಅಮಾಯಕ ಎಂಬುದಾಗಿ ತನಿಖೆಯ ವೇಳೆ ಸೌದಿ ಪೊಲೀಸರಿಗೂ ಮನವರಿಕೆಯಾಗಿದ್ದು, ಹರೀಶ್ ಬಂಗೇರ ಬಿಡುಗಡೆಯಾಗಿದ್ದಾರೆ.
ಹರೀಶ್ ಬಂಗೇರ ಮತ್ತೆ ಭಾರತಕ್ಕೆ ಮರಳಲು ಬೇಕಾದ ವಿಮಾನಯಾನದ ವೆಚ್ಚವನ್ನು ಸೌದಿ ಅರೇಬಿಯಾ ಮಂಗಳೂರು ಅಸೋಸಿಯೇಷನ್ ಭರಿಸಲಿದೆ.