ಉಡುಪಿ: ಕೋಳಿ ಅರಸಿ ನಾಡಿಗೆ ಬಂದ ಭಾರೀ ಗಾತ್ರದ ಕಾಳಿಂಗ ಸರ್ಪ
ಉಡುಪಿ, ನವೆಂಬರ್ 08: ಕಳೆದ ಒಂದು ತಿಂಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 4 ಬೃಹತ್ ಗಾತ್ರದ ಕಾಳಿಂಗ ಸರ್ಪಗಳು ಕಾಣಿಸಿಕೊಂಡಿವೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪದೇ ಪದೇ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಳ್ಳುತ್ತಿದ್ದು ಜನರಲ್ಲಿ ಭೀತಿ ಹುಟ್ಟಿಸಿದೆ.
ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕಾಳಿಂಗ ಸರ್ಪ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಜನ ಬೆಚ್ಚಿಬಿದ್ದಿದ್ದಾರೆ. ಇದೀಗ ಕಸಬಾ ಗ್ರಾಮದ ಪುಲ್ಕೇರಿ ಬೈಪಾಸ್ ಬಳಿಯ ಸುನಿಲ್.ಕೆ.ಆರ್. ಎಂಬವರ ಮನೆ ಅಂಗಳದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಕಾಳಿಂಗ ಸರ್ಪದ ಗಾತ್ರ ಕಂಡು ಬೆಚ್ಚಿಬಿದ್ದ ಸುನಿಲ್ ತಕ್ಷಣವೇ ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಮಾಹಿತಿ ನೀಡಿದ್ದಾರೆ.
ಕಾಳಿಂಗ ಸರ್ಪ ಕಾಣಿಸಿಕೊಂಡ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದ ಅನಿಲ್ ಪ್ರಭು ಸುಮಾರು 15 ಅಡಿ ಉದ್ದ ಹಾಗೂ 28 ಕೆ ಜಿ ಯಷ್ಟು ತೂಗುತ್ತಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆಹಿಡಿದಿದ್ದಾರೆ. ಈ ಭಯಂಕರ ಸರ್ಪವನ್ನು ಅನಿಲ್ ಪ್ರಭು ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಡಲಾಗಿದೆ.

ಬೈಲೂರು, ತೆಳ್ಳಾರು, ಗಣಿತ ನಗರ ಪರಿಸರದಲ್ಲಿ ಪದೇ ಪದೇ ಕಾಳಿಂಗ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಮಾತ್ರ ಈ ಮಾದರಿಯ ಕಾಳಿಂಗ ಕಾಣಸಿಗುತ್ತೆ. ಆಹಾರ ಹುಡುಕುತ್ತಾ ಬಂದು, ಕೋಳಿಯಾಸೆಗೆ ನಗರ ಪ್ರದೇಶದ ಮನೆಗಳತ್ತ ಮುಖಮಾಡುತ್ತಿವೆ ಈ ಕಾಳಿಂಗ ಸರ್ಪಗಳು ಎಂದು ಹೇಳಲಾಗುತ್ತಿದೆ.
ಭಯ ಬೇಡ, ಬೆದ್ರಕಾಡು ಪ್ರದೇಶದಲ್ಲಿ ಪತ್ತೆಯಾಗಿದ್ದು 'ಬೆಕ್ಕು ಹಾವು'
ನವೆಂಬರ್ 02 ರಂದು ಕಾರ್ಕಳ ತಾಲೂಕಿನ ಬೈಲೂರು ಪರಿಸರದಲ್ಲಿ ಭಾರೀ ಗಾತ್ರದ ಕಾಳಿಂಗ ಹಾವು ಕಾಣಿಸಿಕೊಂಡಿತ್ತು. ಕಳೆದ ಎರಡು ತಿಂಗಳ ಹಿಂದೆಯೂ ಕಾರ್ಕಳ ತಾಲೂಕಿನ ಜಾರ್ಕಳ ಅರ್ಜೆಡ್ಡು ಪ್ರದೇಶದಲ್ಲಿ ಇದೇ ಕಾಳಿಂಗ ಹಾವು ಮರವೇರಿ ಕುಳಿತು ಗ್ರಾಮಸ್ಥರ ನಿದ್ದೆಗೆಡಿಸಿತ್ತು. ಗ್ರಾಮಸ್ಥರು ಕಾಳಿಂಗ ಹಾವನ್ನು ಸೆರೆ ಹಿಡಿಯಲು ಕಾದು ಕುಳಿತರೂ ಮರದಿಂದ ಹಾವು ಕೆಳಗೆ ಇಳಿಯಲೇ ಇಲ್ಲ. ಅದು ಮರದಲ್ಲೇ ಠಿಕಾಣಿ ಹೊಡಿತ್ತು.

ಬಳಿಕ ಬೆಳಗ್ಗಿನ ಜಾವ ಅಲ್ಲಿಂದ ಕಣ್ಮರೆಯಾಗಿತ್ತು. ಕೊನೆಗೂ ಬೈಲೂರು ಪೇಟೆಯಲ್ಲಿ ಮತ್ತೆ ಕಾಳಿಂಗ ಸರ್ಪ ಕಾಣಿಸಿ ಕೊಂಡಿತ್ತು. ಕೊಡಲೇ ಉರಗ ತಜ್ಞ ಅನಿಲ್ ಪ್ರಭು ಅವರಿಗೆ ಸ್ಥಳಿಯರು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅನಿಲ್ ಪ್ರಭು ಹಾವನ್ನು ಸರೆ ಹಿಡಿದಿದ್ದಾರೆ. 13 ಅಡಿಗಳಷ್ಟು ಉದ್ದ ಇರುವ ಕಾಳಿಂಗ ಸರ್ಪವನ್ನು ಹಿಡಿದು ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಅಭಯಾರಣ್ಯ ಕ್ಕೆ ಬಿಟಿದ್ದರು.












Click it and Unblock the Notifications