ಅಂತರ್ ಜಿಲ್ಲೆ ಸುಗಮ ಸಂಚಾರಕ್ಕೆ ವ್ಯವಸ್ಥೆ: ಶಿವಮೊಗ್ಗ ಡಿಸಿ
ಶಿವಮೊಗ್ಗ, ಮೇ 6: ಶಿವಮೊಗ್ಗ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತೆರಳುವವರಿಗೆ ಒಂದು ಅವಧಿಗೆ ಮಾತ್ರ ಈಗಾಗಲೇ ತಾಲ್ಲೂಕು ಮಟ್ಟದ ತಹಶೀಲ್ದಾರ್ ಹಂತದಲ್ಲಿ ಒನ್ ವೇ ಪಾಸ್ ನೀಡಲಾಗುತ್ತಿದ್ದು, ವಿಳಂಬಕ್ಕೆ ಅವಕಾಶವಿಲ್ಲದಂತೆ ಅರ್ಜಿ ಸಲ್ಲಿಸಿದ ಎರಡು ಗಂಟೆ ಒಳಗಾಗಿ ಪಾಸ್ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ಸೂಚನೆ ನೀಡಿದರು.
ಮಂಗಳವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಸಂದರ್ಭದಲ್ಲಿ ಈ ಕುರಿತು ಸೂಚನೆಗಳನ್ನು ನೀಡಿದರು.
ಅಂತರ ಜಿಲ್ಲೆ ಓಡಾಡೋಕೆ ಬೆರಳ ತುದಿಯಲ್ಲೇ ಪಾಸು ಪಡೆಯಿರಿ!
ಅರ್ಜಿಯಲ್ಲಿ ಮೊಬೈಲ್ ಸಂಖ್ಯೆ ಸೇರಿದಂತೆ ಕನಿಷ್ಠ ಮಾಹಿತಿಗಳನ್ನು ಮಾತ್ರ ಪಡೆಯಬೇಕು. ಜನರನ್ನು ಕಾಯಿಸದೇ ನೇರವಾಗಿ ಅರ್ಜಿಯನ್ನು ಸ್ವೀಕರಿಸಬೇಕು. ಒಂದು ವೇಳೆ ಪಾಸ್ ನೀಡಲು ಸಾಧ್ಯವಿಲ್ಲದಿದ್ದರೆ ಅರ್ಜಿ ಸ್ವೀಕರಿಸುವ ಸಂದರ್ಭದಲ್ಲಿಯೇ ತಿಳಿಸಬೇಕು. ಅರ್ಜಿಗಳನ್ನು ತಹಶೀಲ್ದಾರ್ ಕಚೇರಿಯಲ್ಲಿ ಸ್ವೀಕರಿಸಬೇಕು. ಮೊಬೈಲ್ ಸಂಖ್ಯೆ ತಿಳಿಸಿ ಪಾಸ್ ಗಳನ್ನು ನಾಡಕಚೇರಿಯಲ್ಲಿ ಪಡೆಯಬೇಕು ಎಂದರು.
ಹೊರ ಜಿಲ್ಲೆಗಳಿಗೆ ತೆರಳುವವರು ಬಸ್ ಸೌಲಭ್ಯ ಬಯಸಿದರೆ ಕಲ್ಪಿಸಬೇಕು. ಯಾವುದಾದರೂ ಒಂದು ಊರಿಗೆ ಒಂದು ಬಸ್ ನಲ್ಲಿ ಪ್ರಯಾಣಿಸುವಷ್ಟು ಜನರಿಂದ ವಿನಂತಿ ಬಂದರೆ, ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಮಾತನಾಡಿ ಬಸ್ ವ್ಯವಸ್ಥೆ ಮಾಡಿ ಅರ್ಜಿದಾರರಿಗೆ ಮಾಹಿತಿ ನೀಡಬೇಕು ಎಂದರು.
ಜಿಲ್ಲೆಯ ಎಪಿಎಂಸಿಗಳಿಗೆ ಸೇರಿದಂತೆ ಕೈಗಾರಿಕಾ ವಲಯಗಳಿಗೆ ಹೊರ ರಾಜ್ಯಗಳಿಂದ ಲಾರಿಗಳಲ್ಲಿ ಆಗಮಿಸುವವರ ಸಂಪೂರ್ಣ ವಿವರಗಳನ್ನು ಪಡೆಯಬೇಕು. ಹೊರ ರಾಜ್ಯಗಳಿಂದ ಲಾರಿಗಳಲ್ಲಿ ಅನಧಿಕೃತವಾಗಿ ಯಾರೂ ಜಿಲ್ಲೆ ಪ್ರವೇಶಿಸುವಂತಿಲ್ಲ. ಎಪಿಎಂಸಿಗಳಿಗೆ ಆಗಮಿಸುವ ಲಾರಿಗಳ ಚಾಲಕರ ವಿವರ, ಹಮಾಲಿಗಳ ವಿವರ, ಆಗಮಿಸಿದ ಹಾಗೂ ಹಿಂತಿರುಗುವ ದಿನಾಂಕ ಇತ್ಯಾದಿಗಳನ್ನು ಎಪಿಎಂಸಿ ಕಾರ್ಯದರ್ಶಿಗಳು ಪಡೆದು ಪೊಲೀಸರಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ, ಸಾರ್ವಜನಿಕರು ಅಗತ್ಯ ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಗೆ ಬರಬೇಕು. ಅಗತ್ಯ ಸಾಮಾಗ್ರಿಗಳನ್ನು ಮನೆಯ ಸಮೀಪದಲ್ಲೇ ಖರೀದಿಸಬೇಕು. ಯಾವುದೇ ಅಂಗಡಿಗಳ ಮುಂದೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ವ್ಯಾಪಾರ ನಡೆಸುತ್ತಿದ್ದರೆ, ಅಂತಹ ಅಂಗಡಿ ಮಾಲೀಕರಿಗೆ ದಂಡ ವಿಧಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಸಲೂನ್ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಸೇರಿದಂತೆ ಎಲ್ಲಾ ಅಗತ್ಯ ಮುಂಜಾಗ್ರತೆ ವಹಿಸಿರಬೇಕು ಎಂದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು ಮತ್ತಿತರರು ಇದ್ದರು.