ಮಧು ಬಂಗಾರಪ್ಪಗೆ ಓಪನ್ ಆಫರ್ ನೀಡಿದ ಸಹೋದರ ಕುಮಾರ್ ಬಂಗಾರಪ್ಪ
ಶಿವಮೊಗ್ಗ, ಡಿ 14: ಕುಮಾರ್ ಮತ್ತು ಅವರ ಸಹೋದರ ಮಧು ಬಂಗಾರಪ್ಪ, ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರಲಿದ್ದಾರೆ ಎನ್ನುವ ಸುದ್ದಿಗೆ, ಬಿಜೆಪಿ ಮುಖಂಡ, ಶಾಸಕ ಕುಮಾರ್ ಬಂಗಾರಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ.
ಮಧು ಬಂಗಾರಪ್ಪ, ಜೆಡಿಎಸ್ಸಿನಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಸುದ್ದಿ ರಹಸ್ಯವಾಗಿಯೇನೂ ಉಳಿದಿಲ್ಲ. ಈ ಸಂದರ್ಭವನ್ನು ಡಿ.ಕೆ.ಶಿವಕುಮಾರ್ ಬಳಸಿಕೊಂಡು, ಮಧು ಮತ್ತು ಕುಮಾರ್ ಸಹೋದರರಿಬ್ಬರನ್ನು ತಮ್ಮ ಪಕ್ಷದತ್ತ ಸೆಳೆಯುವ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು.
ಶಿವಮೊಗ್ಗ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಲಿದೆಯೇ ಬಂಗಾರಪ್ಪ ಪುತ್ರರಿಬ್ಬರ ಈ ಸುದ್ದಿ?
ಇದಕ್ಕೆ ಸೊರಬದಲ್ಲಿ ಪ್ರತಿಕ್ರಿಯಿಸಿರುವ ಕುಮಾರ್ ಬಂಗಾರಪ್ಪ, "ನಾವಿಬ್ಬರೂ ಕಾಂಗ್ರೆಸ್ ಸೇರಲಿದ್ದೇವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದೆಲ್ಲಾ ಸುಳ್ಳು ಮತ್ತು ಕಪೋಕಲ್ಪಿತ. ನನ್ನಲ್ಲಿ ಪಕ್ಷ ಬಿಡುವ ಯಾವ ಆಲೋಚನೆಯೂ ಇಲ್ಲ. ಬದಲಿಗೆ ನಾನೇ ಮಧುಗೆ ಆಫರ್ ಒಂದನ್ನು ನೀಡುತ್ತೇನೆ"ಎಂದು ಹೇಳಿದರು.
ತಮ್ಮ ಅಸೆಂಬ್ಲಿ ಕ್ಷೇತ್ರದ ಸೊರಬದಲ್ಲಿ ಮಾತನಾಡುತ್ತಿದ್ದ ಕುಮಾರ್, "ನಾವೆಲ್ಲಾ ಒಗ್ಗಟ್ಟಾಗಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪಾಲ್ಗೊಂಡು ಎಲ್ಲ ಕಡೆ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆ ಆಗುವಲ್ಲಿ ಸಹಕರಿಸಬೇಕು"ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆಗೆ ಓಕೆ ಎಂದ ಡಿಕೆ ಶಿವಕುಮಾರ್
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್
ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಮೂಲಕ ಸಹೋದರಿಬ್ಬರನ್ನು ಒಂದು ಗೂಡಿಸಲು ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ. ಈಡಿಗ ಸಮುದಾಯದವರೇ ಆಗಿರುವ ಹರಿಪ್ರಸಾದ್, ಸಹೋದರರ ಬಳಿ ಒಗ್ಗಟ್ಟಿನ ಮಂತ್ರವನ್ನು ಬೋಧಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಬಿಎಸ್ವೈ ಸಕ್ರಿಯ ರಾಜಕಾರಣದಿಂದ ದೂರವಾಗುವ ಸಾಧ್ಯತೆಯಿದೆ. ಇದಾದ ನಂತರ ಕುಮಾರ್ ಬಂಗಾರಪ್ಪಗೆ ಗಾಡ್ ಫಾದರ್ ಇರುವುದಿಲ್ಲ ಎನ್ನುವ ವಿಚಾರವನ್ನು ಅವರಿಗೆ ಮನದಟ್ಟು ಮಾಡುವ ಕೆಲಸ ನಡೆಯುತ್ತಿದೆ ಎಂದು ಸುದ್ದಿಯಾಗಿತ್ತು.
ಮಾಜಿ ಶಾಸಕರು ಆಗೊಮ್ಮೆ, ಈಗೊಮ್ಮೆ ಕ್ಷೇತ್ರಕ್ಕೆ ಬರುತ್ತಿದ್ದಾರೆ
ಮಧು ಬಂಗಾರಪ್ಪ ಹೆಸರನ್ನು ಉಲ್ಲೇಖಿಸದೇ ಮಾತನಾಡುತ್ತಿದ್ದ ಕುಮಾರ್, "ಮಾಜಿ ಶಾಸಕರು ಆಗೊಮ್ಮೆ, ಈಗೊಮ್ಮೆ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಬರೀ ಪತ್ರಿಕಾಗೋಷ್ಠಿ ಮಾತ್ರ ನಡೆಸಿ, ವಾಪಸ್ ಹೋಗುತ್ತಿದ್ದಾರೆ. ನಾವಿಬ್ಬರೂ ಕಾಂಗ್ರೆಸ್ ಸೇರಲಿದ್ದೇವೆ ಎನ್ನುವ ಸುಳ್ಳು ಸುದ್ದಿಯನ್ನು ಹರಿಯಬಿಡಲಾಗುತ್ತಿದೆ"ಎಂದು ಅವರು ಹೇಳಿದರು.
ಸಂಸಾರದಲ್ಲಿ ಸಹೋದರರು ಜೊತೆಯಾಗಿ ಇರಬೇಕು ಎನ್ನುವುದು ಒಪ್ಪಿಕೊಳ್ಳುವ ವಿಚಾರ
"ಸಂಸಾರದಲ್ಲಿ ಸಹೋದರರು ಜೊತೆಯಾಗಿ ಇರಬೇಕು ಎನ್ನುವುದು ಒಪ್ಪಿಕೊಳ್ಳುವ ವಿಚಾರ. ಆದರೆ, ರಾಜಕೀಯದಲ್ಲಿ ಅದು ಸಾಧ್ಯವಿಲ್ಲ. ನಾನು ಬಿಜೆಪಿಯ ಕಾರ್ಯಕರ್ತ, ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಬೇಕಿದ್ದಲ್ಲಿ, ರಾಜಕೀಯದಲ್ಲಿ ನೆಲೆ ಕಾಣಲು ತಡಕಾಡುತ್ತಿರುವ ಮಧು ಬಂಗಾರಪ್ಪ ಬಿಜೆಪಿಗೆ ಬರುವ ಹಾಗಿದ್ದಲ್ಲಿ ಬರಲಿ"ಎನ್ನುವ ಆಫರ್ ಅನ್ನು ಸಹೋದರನಿಗೆ ಕುಮಾರ್ ಬಂಗಾರಪ್ಪ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕಾಂಗ್ರೆಸ್ಸಿಗೆ ಮಧು ಅವರನ್ನು ಸೇರ್ಪಡೆಗೊಳಿಸಿ, ಅವರನ್ನು ಲೋಕಸಭೆಯಿಂದ ಮತ್ತು ಕುಮಾರ್ ಬಂಗಾರಪ್ಪನವರಿಗೆ ಸೊರಬ ಕ್ಷೇತ್ರದ ಟಿಕೆಟ್ ನೀಡುವ ಆಫರ್ ಅನ್ನು ಮುಂದಿಡಲಾಗುತ್ತಿದೆ. ಸಹೋದರರಿಬ್ಬರು ವೈಷಮ್ಯವನ್ನು ಮರೆತು ಒಂದಾಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಇವೆಲ್ಲವೂ ಕಪೋಕಲ್ಪಿತ ಎಂದು ಕುಮಾರ್ ಬಂಗಾರಪ್ಪ ಸ್ಪಷ್ಟನೆಯನ್ನು ನೀಡಿದ್ದಾರೆ.