50ನೇ ದಿನಕ್ಕೆ ಕಾಲಿಟ್ಟ ಟೊಯೊಟಾ ಕಾರ್ಮಿಕರ ಹೋರಾಟ: ರಕ್ತದಾನ ಚಳುವಳಿ
ರಾಮನಗರ, ಡಿಸೆಂಬರ್ 28: ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿ ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಬಿಕ್ಕಟ್ಟು 50ನೇ ದಿನಕ್ಕೆ ಕಾಲಿಟ್ಟಿದೆ. 50ನೇ ದಿನದ ಹೋರಾಟದ ಅಂಗವಾಗಿ ಕಾರ್ಮಿಕರು "ರಕ್ತ ಕೊಟ್ಟೇವು ಸ್ವಾಭಿಮಾನ ಬಿಡೆವು "ಎಂದು ವಿನೂತನವಾಗಿ ರಕ್ತದಾನ ನಡೆಸಿದರು.
ಕಳೆದ 50 ದಿನಗಳಿಂದ ಕಾರ್ಮಿಕರು ವಿಭಿನ್ನವಾದ ಹೋರಾಟಗಳನ್ನು ಮಾಡುತ್ತಾ ಬಂದಿದ್ದು, ಸೋಮವಾರದಂದು ಕಾರ್ಮಿಕರು ಸ್ವಾಭಿಮಾನದ ಹೋರಾಟದ ಅಂಗವಾಗಿ ಬೃಹತ್ ರಕ್ತದಾನ ಚಳುವಳಿ ಮಾಡಿದರು.
ಹೋರಾಟದ ಜೊತೆಗೆ ಕಾರ್ಖಾನೆಯಲ್ಲಿ ಅಕಾಲಿಕ ಮರಣ ಹೊಂದಿದ 7 ಜನ ಕಾರ್ಮಿಕರ ಸ್ಮರಣಾರ್ಥವಾಗಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಸರಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ವಿನೂತನ ಹೋರಾಟಗಳನ್ನು ನಡೆಸುತ್ತಿದ್ದು, ಸರ್ಕಾರ ಹಾಗೂ ಕಂಪನಿಯ ಆಡಳಿತಗೆ ಕಾರ್ಮಿಕರ ಕೂಗು ಕೇಳುತ್ತಿಲ್ಲ ಎಂದು ಆರೋಪಿಸಿದರು.
ಟೊಯೊಟಾ ಕಂಪನಿಯ ಪಕ್ಕದಲ್ಲೇ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು. ಟೊಯೊಟಾ ಕಂಪನಿಯಲ್ಲಿ ಸುಮಾರು 3500 ಕಾರ್ಮಿಕರಿದ್ದು, ಇದರಲ್ಲಿ 2000 ಮಂದಿ ರಕ್ತದಾನ ಮಾಡಲಿದ್ದು, ಈ ಶಿಬಿರವನ್ನು 3 ದಿನಗಳ ಕಾಲ ನಡೆಸಲಾಗುವುದು. ನಮ್ಮ ರಕ್ತ ನಿಧಿ ಕೇಂದ್ರದಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇಂದು 500 ಕಾರ್ಮಿಕರು ರಕ್ತದಾನ ಮಾಡುವ ನಿರೀಕ್ಷೆ ಇದೆ ಎಂದು ರಕ್ತನಿಧಿ ಕೇಂದ್ರದ ರಾಮಲಿಂಗಯ್ಯ ತಿಳಿಸಿದರು.
ಒಟ್ಟಾರೆ ಟೊಯೊಟಾ ಕಾರ್ಮಿಕರು ಒಂದಲ್ಲ ಒಂದು ರೀತಿಯಲ್ಲಿ ವಿಭಿನ್ನ ಪ್ರತಿಭಟನೆಗಳನ್ನು ಮಾಡುತ್ತಾ ರಾಜ್ಯ ಸರಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ. ಇಷ್ಟಾದರೂ ಕೂಡ ಆಡಳಿತ ಮಂಡಳಿಯಾಗಲಿ, ಸರಕಾರವಾಗಲಿ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದಿಸಿಲ್ಲ.
ಟೊಯೊಟಾ ಆಡಳಿತ ಮಂಡಳಿ ಈಗಾಗಲೇ ಅಸಿಶ್ತಿನ ಹೆಸರಿನಲ್ಲಿ 65 ಮಂದಿ ಕಾರ್ಮಿಕರನ್ನು ಅಮಾನತು ಮಾಡಿದೆ. ಹಾಗಾಗಿ ಕಾರ್ಮಿಕರು ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ಮುಂದುವರೆಸಿದ್ದೇವೆ ಎಂದು ಕಾರ್ಮಿಕರ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್ ಬೇಸರ ವ್ಯಕ್ತಪಡಿಸಿದರು