Get Updates
Get notified of breaking news, exclusive insights, and must-see stories!

ರಾಜಕೀಯ ದ್ವೇಷಕ್ಕೆ 15 ವರ್ಷಗಳಿಂದ ಜಮೀನಿನ ದಾರಿ ಬಂದ್; ಡಿ.ಕೆ.ಶಿ ತವರಲ್ಲಿ ಬಡ ಕುಂಟುಂಬ ಕಣ್ಣೀರು

ರಾಮನಗರ, ಜನವರಿ, 22: ರಾಜಕೀಯ ದ್ವೇಷಕ್ಕೆ ಕಳೆದ ಎರಡು ದಶಕಗಳಿಂದ ಜಮೀನಿಗೆ ತೆರಳುವ ರಸ್ತೆ ಮುಚ್ಚಿ ವಿಧವೆ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದೆ. ಈ ಘಟನೆ ಕೆಪಿಸಿಸಿ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಡಿ.ಕೆ.ಶಿವಕುಮಾರ್ ಹುಟ್ಟೂರು ದೊಡ್ಡಾಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ 18 ವರ್ಷಗಳಿಂದ ಸ್ಥಳೀಯ ಕಾಂಗ್ರೆಸ್ ಮುಖಂಡರು ಕಿರುಕುಳ ನೀಡುತ್ತಿದ್ದಾರೆ ಎಂದು ನೊಂದ ಕುಟುಂಬ ಆರೋಪಿಸಿದೆ.

ನಮ್ಮ ಜಮೀನಿಗೆ ತೆರಳಲು ಇದ್ದ ಕಾಲು ದಾರಿಯನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರು ಒತ್ತುವರಿ ಮಾಡಿ ಸಂಪೂರ್ಣವಾಗಿ ಕಾಲು ದಾರಿಯನ್ನು ಮುಚ್ಚಿದ್ದಾರೆ. ಈ ಮೂಲಕ ನಮ್ಮ ಜಮೀನಿಗೆ ದಾರಿ ಇಲ್ಲದಂತೆ ಮಾಡಿದ್ದಾರೆ ಎಂದು ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದ ನಿವಾಸಿ ವಿಧವೆ ನೇತ್ರಾವತಿ ಮತ್ತು ಅವರ ಪುತ್ರ ಧರಣೀಶ್ ಆರೋಪಿಸಿದರು. ‌‌ಈ ಸಂಬಂಧ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೊಂದ ಮಹಿಳೆ ಮತ್ತು ಅವರ ಮಗ, ದೊಡ್ಡಾಲಹಳ್ಳಿ ಗ್ರಾಮದಲ್ಲಿ ನಮ್ಮ ತಾತ ಹಾಗೂ ನಮ್ಮ ತಂದೆ ಜೆಡಿಎಸ್ ಪಕ್ಷದ ಬೆಂಬಲಿಗರಾಗಿದ್ದರು. ಆದ್ದರಿಂದ ಕಳೆದ 15 ವರ್ಷದಿಂದಲೂ ಜಮೀನಿಗೆ ತೆರಳುವ ದಾರಿಯನ್ನು ಮುಚ್ಚಿ ಗ್ರಾಮದ ಕಾಂಗ್ರೆಸ್ ಮುಖಂಡರು ರಾಜಕೀಯ ದ್ವೇಷದಿಂದ ಕಿರುಕುಳ ನೀಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಕೂಲಿ ಮಾಡಿ ಜೀವನ ನಡೆಸಬೇಕಾಗಿದೆ

ಕೂಲಿ ಮಾಡಿ ಜೀವನ ನಡೆಸಬೇಕಾಗಿದೆ

ದಾರಿಯಿಲ್ಲದ ಕಾರಣ ಕಳೆದ 15 ವರ್ಷಗಳಿಂದ ವ್ಯವಸಾಯ ಮಾಡದೆ ಫಲವತ್ತಾದ ಜಮೀನು ಪಾಳು ಬಿದ್ದಿದೆ. ಭೂಮಿ ಇದ್ದರೂ ಕೂಡ ಕೂಲಿ ಮಾಡಿ ಜೀವನ ನಡೆಸಬೇಕಾದ ದುಃಸ್ಥಿತಿಗೆ ನಮ್ಮನ್ನು ದೂಡಿದ್ದಾರೆ. ಈ ಬಗ್ಗೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಗಳ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಒತ್ತಡಕ್ಕೆ ಮಣಿದ ಅಧಿಕಾರಿಗಳಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ರೈತ ಮಹಿಳೆ ನೇತ್ರಾವತಿ ಕಣ್ಣೀರಿಟ್ಟಿದ್ದಾರೆ.

ಕಿರುಕುಳದಿಂದ ಬೇಸತ್ತಿದ್ದೇವೆ

ಕಿರುಕುಳದಿಂದ ಬೇಸತ್ತಿದ್ದೇವೆ

ಕನಕಪುರ ತಾಲೂಕಿನ ಉಯ್ಯಂಬಳ್ಳಿ ಹೋಬಳಿಯ ಮಹಿಮಹನಹಳ್ಳಿ ಸರ್ವೆ ನಂ.42/2 ರಲ್ಲಿ ನಮ್ಮ ಕುಟುಂಬದ 3 ಹೆಕ್ಟೇರ್‌ ಜಮೀನಿದೆ. ಅಕ್ಕಪಕ್ಕದ ಜಮೀನಿನ ಮಾಲೀಕರು ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿದ್ದಾರೆ. ಆದ್ದರಿಂದ ಅವರ ನಾಯಕರ ಕುಮ್ಮಕ್ಕಿನಿಂದಾಗಿ ನಮಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ವಿರುದ್ಧ ವಿಧವೆ ನೇತ್ರಾವತಿ ಆಕ್ರೋಶ ವ್ಯಕ್ತಪಡಿಸಿದರು.

ವಿಧವೆಯಾದ ನನಗೆ ಇತರೆ ಆದಾಯಗಳಿಲ್ಲ

ವಿಧವೆಯಾದ ನನಗೆ ಇತರೆ ಆದಾಯಗಳಿಲ್ಲ

ನನ್ನ ಪತಿ ‌ಬದುಕಿದ್ದ ವೇಳೆ ಕಾಂಗ್ರೆಸ್ ಮುಖಂಡರ ಕಿರುಕುಳಕ್ಕೆ ಬೇಸತ್ತು ಕೂಲಿ ಮಾಡಿ ಕುಟುಂಬವನ್ನು ಸಾಕಿದ್ದಾರೆ. ಅದರೆ ಅವರ ನಿಧನದ ನಂತರ ವಿಧವೆಯಾದ ನನಗೆ ಇತರೆ ಆದಾಯಗಳಿಲ್ಲ. ಮಕ್ಕಳ ವಿದ್ಯಾಭ್ಯಾಸ ಹಾಗೂ ಜೀವನ ನಿರ್ವಹಣೆಗೆ ಈ ಜಮೀನು ನಮ್ಮ ಕುಂಟುಂಬಕ್ಕೆ ಆಧಾರವಾಗಿದೆ. ಅಧಿಕಾರಿಗಳು ಜಮೀನಿಗೆ ರಸ್ತೆ ತೆರವು ಮಾಡಿಸಿಕೊಟ್ಟರೆ ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳುತ್ತೇವೆ ಎಂದು ನೇತ್ರಾವತಿ ಮತ್ತವರ ಪುತ್ರ ಧರಣೇಶ್ ಅಂಗಲಾಚಿಕೊಂಡಿದ್ದಾರೆ.

ಜಮೀನು ಕಬಳಿಸುವ ಪ್ರಯತ್ನ

ಜಮೀನು ಕಬಳಿಸುವ ಪ್ರಯತ್ನ

ನಮ್ಮ ಜಮೀನಿಗೆ ಹೋಗಲು ಸರ್ವೆ ನಂ. 41 ಮತ್ತು ಸರ್ವೆ ನಂ. 43ರ ನಡುವೆ ಕನಕಪುರ- ಸಂಗಮ ರಸ್ತೆಯಿಂದ ಹಳೆಯ ದಾರಿ ಇದೆ. ಆದರೆ ಈ ದಾರಿಯನ್ನು ಉಪಯೋಗಿಸಲು ಬಿಡುತ್ತಿಲ್ಲ. ಜಮೀನಿಗೆ ಹೋಗಲು ದಾರಿ ಬಿಡದೆ ಇರುವುದರಿಂದ ಹಲವು ವರ್ಷಗಳಿಂದ ಕೃಷಿ ಮಾಡದೆ ಜಮೀನು ಪಾಳುಬಿದ್ದಿದೆ. ಈ ನಡುವೆ ಕೆಲವರು ನಮ್ಮ ಜಮೀನನ್ನು ಕಬಳಿಸಲು ಮುಂದಾಗಿದ್ದಾರೆ ಎಂದು ನೇತ್ರಾವತಿ ಆರೋಪಿಸಿದರು.

ಒತ್ತುವರಿ ಮಾಡಿಕೊಂಡಿರುವ ಕಾಲು ದಾರಿಯನ್ನು ತೆರವುಗೊಳಿಸುವಂತೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದೇವೆ. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆದರೆ, ಎಲ್ಲಾ ಹಂತಗಳಲ್ಲೂ ಪ್ರಭಾವಿ ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಮಗೆ ನ್ಯಾಯ ಸಿಗದಂತೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಕಾನೂನಿನಂತೆ ರೈತರ ಜಮೀನಿಗೆ ದಾರಿ ಒದಗಿಸುವುದು ಕಂದಾಯ ಅಧಿಕಾರಿಗಳ ಕರ್ತವ್ಯವಾಗಿದೆ. ಆದರೆ, ಈ ಕಾನೂನು ಮಾತ್ರ ಕನಕಪುರದಲ್ಲಿ ಜಾರಿಯಾಗುತ್ತಿಲ್ಲ. ಕಳೆದ 15 ವರ್ಷಗಳಿಂದಲೂ ಪ್ರಭಾವಿಗಳ ವಿರುದ್ಧ ಹೋರಾಡಿ ಹೈರಾಣಾಗಿದ್ದೇವೆ. ಕಟ್ಟಕಡೆಯದಾಗಿ ಮತ್ತೊಮ್ಮೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಕಂದಾಯ ಸಚಿವರಿಗೆ ಮನವಿ ಸಲ್ಲಿಸುತ್ತಿದ್ದೇನೆ. ನನಗೆ ನ್ಯಾಯ ದೊರೆಯದಿದ್ದರೆ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸುತ್ತೇನೆ ಎಂದು ವಿಧವೆ ನೇತ್ರಾವತಿ ತಮ್ಮ ಆಳಲು ತೋಡಿಕೊಂಡರು.


More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+