R Ashok vs DK Shivakumar: ಸೋಲಿನ ಭಯಕ್ಕೆ ಡಿಕೆಶಿ ದೇವರ ಮೊರೆ ಹೋಗಿದ್ದಾರೆ; ಆರ್. ಅಶೋಕ್ ಆರೋಪ
2023ರ ಕರ್ನಾಟಕ ವಿಧಾನಸಭೆ ಚುನಾವಣಾ ಅಖಾಡ ಅಕ್ಷರಶಃ ಮಾತಿನ ಯುದ್ಧವಾಗಿ ಮಾರ್ಪಟ್ಟಿದೆ. ಮೇ 10ರಂದು ನಡೆಯುವ ಚುನಾವಣೆಗೆ ಮತದಾರರನ್ನು ಸೆಳೆಯಲು ಎಲ್ಲ ಅಭ್ಯರ್ಥಿಗಳು ಮತ್ತು ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ.
ರಾಜ್ಯದಲ್ಲಿ ಚುನಾವಣಾ ಪ್ರಚಾರದ ಭರಾಟೆ ಜೋರಾಗಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಮಾತಯಾಚಿಸಲು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ರಾಷ್ಟ್ರೀಯ ನಾಯಕರು ಕರ್ನಾಟಕದತ್ತ ಮುಖ ಮಾಡಿದ್ದಾರೆ. ಕೆಲವು ಹೈ-ವೋಲ್ಟೇಜ್ ಕ್ಷೇತ್ರಗಳು ಜಿದ್ದಾಜಿದ್ದಿನ ಕಣವಾಗಿವೆ.

ಇದೇ ವೇಳೆ 2023ರ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದ ಮತ್ತು ಹೈ-ವೋಲ್ಟೇಜ್ ಕ್ಷೇತ್ರಗಳಲ್ಲಿ ಕನಕಪುರ ಕ್ಷೇತ್ರವೂ ಒಂದು. ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಆರ್. ಅಶೋಕ್ ಕಣಕ್ಕಿಳಿದಿದ್ದಾರೆ.
ಅಚ್ಚರಿಯೆಂದರೆ, ಸಚಿವ ಆರ್. ಅಶೋಕ್ ಅವರು ತಮ್ಮ ಹಾಲಿ ಕ್ಷೇತ್ರ ಪದ್ಮನಾಭನಗರದ ಜೊತೆಗೆ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ಕನಕಪುರದಲ್ಲಿ ಸ್ಪರ್ಧಿಸಿದ್ದಾರೆ. ಕಳೆದ ಮೂರು ದಶಕಗಳಿಂದ ಕಾಂಗ್ರೆಸ್ ಭದ್ರಕೋಟೆಯಾಗಿರುವ ಕನಕಪುರದಲ್ಲಿ ಕಮಲ ಅರಳಿಸುತ್ತಾರಾ ನೋಡಬೇಕಿದೆ.
ಇದೀಗ ಆರ್. ಅಶೋಕ್ ಅವರು ತಮ್ಮ ಎದುರಾಳಿ ಡಿ.ಕೆ. ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ""ನಾನು ಕನಕಪುರಕ್ಕೆ ಬಂದ ಮೇಲೆ ಡಿ.ಕೆ. ಶಿವಕುಮಾರ್ಗೆ ಭಯ ಶುರುವಾಗಿದೆ. ಹೀಗಾಗಿ ಮಾಟ-ಮಂತ್ರ ಮಾಡಿಸುತ್ತಿದ್ದಾರೆ,';' ಎಂದು ಟೀಕಿಸಿದ್ದಾರೆ.

ಕನಕಪುರದಲ್ಲಿ ಪ್ರಚಾರದ ವೇಳೆ ಮಾತನಾಡಿದ ಆರ್. ಅಶೋಕ್, ""ಡಿ.ಕೆ. ಶಿವಕುಮಾರ್ಗೆ ಸೋಲಿನ ಭಯ ಕಾಡಿದ ಕೂಡಲೇ ಹೋಮ-ಹವನ, ಮಾಟ-ಮಂತ್ರ ಮಾಡಿಸುತ್ತಿದ್ದಾರೆ. ಅಲ್ಲದೇ ಅವರ ಶ್ರೀಮತಿ ಮೊದಲ ಬಾರಿಗೆ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ನನ್ನನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಡಿಕೆಶಿಗೆ ಈ ಬಾರಿ ಗೆಲುವು ಅಷ್ಟು ಸುಲಭವಿಲ್ಲ,'' ಎಂದು ವ್ಯಂಗ್ಯವಾಡಿದರು.
"ಕನಕಪುರವನ್ನು ಸೂಕ್ಷ್ಮ ಕ್ಷೇತ್ರವನ್ನಾಗಿ ಮಾಡಬೇಕು ಮತ್ತು ಎಲ್ಲ ಮತಗಟ್ಟೆಗಳಲ್ಲೂ ಸಿಸಿಟಿವಿ ಅಳವಡಿಸಬೇಕೆಂದು ನಾನು ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಜೆಡಿಎಸ್ ಕಾರ್ಯಕರ್ತರು ಈ ಬಗ್ಗೆ ಆತಂಕಗೊಂಡಿದ್ದಾರೆ," ಆರ. ಅಶೋಕ್ ತಿಳಿಸಿದರು.
"ನಾವು ಏನೋ ಕಷ್ಟಪಟ್ಟು ಮತ ಹಾಕಿಸುತ್ತೇವೆ. ಆದರೆ ಆ ಮತಗಳನ್ನು ಕೊನೆಗೆ ಡಿ.ಕೆ. ಶಿವಕುಮಾರ್ ಸಹೋದರರು ಇಲ್ಲದ ರೀತಿ ಮಾಡುತ್ತಾರೆ. ಡಿ.ಕೆ. ಶಿವಕುಮಾರ್ ನಡೆಗೆ ಜೆಡಿಎಸ್ ಪಕ್ಷದವರು ಬೇಸತ್ತಿದ್ದಾರೆ. ನನಗೆ ಜೆಡಿಎಸ್ನ ನೂರಾರು ಕಾರ್ಯಕರ್ತರು ಫೋನ್ ಮಾಡಿ ಬೆಂಬಲ ನೀಡುತ್ತೇವೆ ಎಂದಿದ್ದಾರೆ," ಎಂದು ಕನಕಪುರ ಬಿಜೆಪಿ ಅಭ್ಯರ್ಥಿ ಡಿ.ಕೆ. ಶಿವಕುಮಾರ್ ಹೇಳಿದರು.
"ಡಿ.ಕೆ. ಶಿವಕುಮಾರ್ ಹುಟ್ಟೂರಿಗೂ ನಾನು ಹೋಗಿದ್ದೇನೆ. ನಾನು ಜೆಡಿಎಸ್ ಕಾರ್ಯಕರ್ತರಿಗೆ ಈ ಮೂಲಕ ಮನವಿ ಮಾಡುತ್ತೇನೆ, ಕನಕಪುರದಲ್ಲಿ ಬಿಜೆಪಿ ಗೆಲ್ಲುವ ವಾತಾವರಣವಿದ್ದು, ಈ ಚುನಾವಣೆಯಲ್ಲಿ ಹೆಚ್ಚಿನ ಮತ ನೀಡಬೇಕು," ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೋಡೆತ್ತಿನ ಪರಿಸ್ಥಿತಿ ಹೇಗಿದೆ ನೋಡಿದ್ದೀರಿ. ಈ ಜೋಡೆತ್ತುಗಳು ಹೊಂದಾಣಿಕೆ ಮಾಡಿಕೊಂಡರೆ, ಕನಕಪುರದಲ್ಲಿ ಮಾತ್ರ ದಿನನಿತ್ಯ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆಯುತ್ತವೆ.
ಈ ಬಾರಿ ನಿಮಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಡಿ.ಕೆ. ಶಿವಕುಮಾರ್ ಸಹೋದರರು ಮತ್ತು ಎಚ್.ಡಿ. ಕುಮಾರಸ್ವಾಮಿಯನ್ನು ತಿರಸ್ಕರಿಸಿ, ಬಿಜೆಪಿ ಪಕ್ಷ ಸೇರ್ಪಡೆಯಾಗಿ. ಕನಕಪುರದಲ್ಲಿ ನನಗೆ ಮತ ನೀಡಿ ಎಂದು ಆರ್. ಅಶೋಕ್ ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಈಗಾಗಲೇ ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ನಾಮಪತ್ರ ವಾಪಸ್ ಪ್ರಕ್ರಿಯೆ ಕೊನೆಗೊಂಡಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications