ಚನ್ನಪಟ್ಟಣ ಬೈಎಲೆಕ್ಷನ್ ಕಣದಲ್ಲಿ ಕಿಡಿ ಹೊತ್ತಿಸಿದ ಸುರೇಶ್ ಹೇಳಿಕೆ!
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ. ನಿನ್ನೆ ಚನ್ನಪಟ್ಟಣದಲ್ಲಿ ಮಾತನಾಡಿದ್ದ ಡಿ.ಕೆ.ಸುರೇಶ್, ದೇವೇಗೌಡರು ಆಂಬುಲೆನ್ಸ್ನಲ್ಲಿ ಪ್ರಚಾರಕ್ಕೆ ಬರುತ್ತಾರೆ ಎಂದು ಹೇಳಿಕೆ ನೀಡಿದ್ದರು.
ಇದೇ ವಿಚಾರವಾಗಿ ಜೆಡಿಎಸ್ ನಾಯಕರು ಡಿ.ಕೆ.ಸುರೇಶ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಜೆಡಿಎಸ್ ಕೂಡ ಟ್ವೀಟ್ನಲ್ಲಿ ಡಿ.ಕೆ.ಸುರೇಶ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಆಚಾರವಿಲ್ಲದ ನಾಲಿಗೆ, ನಿನ್ನ ನೀಚಬುದ್ಧಿಯ ಬಿಡು ನಾಲಿಗೆ ಎಂದು ಪಾಠ ಹೇಳಿದೆ.

ದೇವೇಗೌಡರು ಆಂಬ್ಯುಲೆನ್ಸ್ನಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ಅವರ ಆರೋಗ್ಯದ ಬಗ್ಗೆ ಅಪಹಾಸ್ಯ ಮಾಡಿರುವ ಡಿ.ಕೆ.ಸುರೇಶ್ ಅವರಿಗೆ ಚನ್ನಪಟ್ಟಣದ ಜನತೆ ಉತ್ತರಿಸುತ್ತಾರೆ ಎಂದು ಜೆಡಿಎಸ್ ಹೇಳಿದೆ.
ರೈತ ನಾಯಕ, ನೀರಾವರಿಗಳ ಹರಿಕಾರರು, ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ನಾಡಿಗೆ ಕೊಟ್ಟಿರುವ ಕೊಡುಗೆಗಳು ಅಪಾರ. ದೇವೇಗೌಡರು ಹುಟ್ಟು ಹೋರಾಟಗಾರರು, ಕಾಂಗ್ರೆಸ್ ಅದನ್ನು ಮರೆತಿರಬಹುದು ಎಂದು ಟೀಕಿಸಿದೆ.

ಹಿಂದೆ ಚನ್ನಪಟ್ಟಣದ ವಿಟ್ಲೇನಹಳ್ಳಿ ಗೋಲಿಬಾರ್ ನಿಮ್ಮದೇ ಕಾಂಗ್ರೆಸ್ ಸರ್ಕಾರ ನಡೆಸಿತ್ತು. ಆಗಲೂ ದೇವೇಗೌಡರು ಚನ್ನಪಟ್ಟಣದಿಂದ ಬೆಂಗಳೂರಿನ ತನಕ ರೈತರಿಗೆ ನ್ಯಾಯ ಕೊಡಿಸಲು ಪಾದಯಾತ್ರೆ ಮಾಡಿದ್ದರು ಎಂದು ಘಟನೆ ನೆನಪು ಮಾಡಿದೆ.
ಇಳಿ ವಯಸ್ಸಿನಲ್ಲೂ ರಾಜ್ಯಸಭೆಯಲ್ಲಿ ರಾಜ್ಯದ ಹಲವು ಸಮಸ್ಯೆಗಳ ಕುರಿತು ಮತ್ತು ದೇಶದ ರೈತರ ಬಗ್ಗೆ ಧ್ವನಿ ಎತ್ತಿ ಮಾತನಾಡುವ ಅವರ ಬಗ್ಗೆ ಲಘುವಾಗಿ ಮಾತಾಡಿರುವ ನೀವು, ಎರಡು ಬಾರಿ ಸಂಸದರಾಗಿ ಲೋಕಸಭೆಯಲ್ಲಿ ನೀರಾವರಿ, ರೈತರು ಹಾಗೂ ನಾಡಿನ ಸಮಸ್ಯೆಗಳ ಬಗ್ಗೆ ಎಷ್ಟು ಮಾತನಾಡಿದ್ದೀರಿ? ಎಂದು ಡಿ.ಕೆ.ಸುರೇಶ್ ಅವರಿಗೆ ಪ್ರಶ್ನಿಸಿದೆ.
ನಿಮ್ಮ ಆತ್ಮಸಾಕ್ಷಿಯನ್ನು ಪ್ರಶ್ನೆಮಾಡಿಕೊಳ್ಳಿ ಮಿಸ್ಟರ್ ಸುರೇಶ್. ದೇವೇಗೌಡರು ತಂದಿರುವ ನೀರಾವರಿ ಯೋಜನೆಗಳು, ಜಲಾಶಯಗಳ ನಿರ್ಮಾಣ ಕುರಿತು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ರಾಜ್ಯದ ನದಿಗಳು, ನೀರಾವರಿ ಹೋರಾಟಗಳ ಬಗ್ಗೆ ಸಂಸತ್ತಿನಲ್ಲಿ ಈಗಲೂ ಮಾತಾನಾಡುತ್ತಲೇ ಇದ್ದಾರೆ ದೇವೇಗೌಡರು ಎಂದು ತಿರುಗೇಟು ನೀಡಿದೆ.
ದೇವೇಗೌಡರ ಕುಟುಂಬದ ಬಗ್ಗೆ ಟೀಕಿಸುತ್ತಿರುವ ಕೃತಜ್ಞತೆ ಇಲ್ಲದ ಆ ಮಾಗಡಿ ಶಾಸಕ, ಮೊದಲ ಬಾರಿಗೆ ಜನಪ್ರತಿನಿಧಿಯಾಗಿದ್ದು ಯಾರ ಕೃಪೆಯಿಂದ ಎಂಬುದು ಜನತೆಗೆ ಗೊತ್ತಿದೆ. ಕಾಂಗ್ರೆಸ್ ಹಿರಿಯರಿಗೆ ಹೇಗೆ ಗೌರವ ಕೊಡಬೇಕು ಎಂಬುದನ್ನು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮೊದಲು ಕಲಿಸಲಿ ಎಂದು ವಾಗ್ದಾಳಿ ನಡೆಸಿದೆ.
ಸುರೇಶ್ ಹೇಳಿದ್ದೇನು?: ಚನ್ನಪಟ್ಟಣ ಉಪಚುನಾವಣೆಯ ಹಿನ್ನೆಲೆ ನಿನ್ನೆ ಕ್ಷೇತ್ರದ ಕೋಡಂಬಹಳ್ಳಿಯಲ್ಲಿ ಡಿ.ಕೆ.ಸುರೇಶ್ ಪ್ರಚಾರ ನಡೆಸಿದ್ದರು. ಈ ವೇಳೆ ಸುರೇಶ್ ಅವರು ಜೆಡಿಎಸ್ ನಾಯಕರಿಗೆ ತಿರುಗೇಟು ನೀಡಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ವಾಗ್ದಾಳಿ ನಡೆಸಿದ್ದರು. ದೇವೇಗೌಡರು ನಾಳೆ ಆಂಬ್ಯುಲೆನ್ಸ್ ತೆಗೆದುಕೊಂಡು ಬಂದು ಪ್ರಚಾರ ಮಾಡ್ತಾರೆ. ಅವರೂ ಪ್ರಚಾರಕ್ಕೆ ಬರಲಿ, ಅವರ ಆರೋಗ್ಯ ಕೂಡ ಚೆನ್ನಾಗಿರಲಿ ಎಂದು ಸುರೇಶ್ ಹೇಳಿದ್ದರು.
ಈ ಹೇಳಿಕೆಗೆ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಜೆಡಿಎಸ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications